ದಿಲ್ಲಿ ಅಸೆಂಬ್ಲಿಯಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರ ಅನಾವರಣ: ಬಿಜೆಪಿ ಅಪಸ್ವರ
ಬಿಜೆಪಿ, ಆರೆಸ್ಸೆಸ್ ನ ಒಬ್ಬ ಸ್ವಾತಂತ್ರ್ಯ ಸೇನಾನಿಯ ಹೆಸರು ನೀಡಿ ಎಂದ ಆಪ್
ಹೊಸದಿಲ್ಲಿ, ಜ.27: ಕರ್ನಾಟಕದಲ್ಲಿ ಟಿಪ್ಪು ಜಯಂತಿ ಆಚರಣೆ ಬಗೆಗಿನ ವಿವಾದ ಭಾರೀ ಸುದ್ದಿಯಾಗಿದ್ದರೆ, ದಿಲ್ಲಿಯಲ್ಲೂ ಟಿಪ್ಪು ಹೆಸರಿನಲ್ಲಿ ಹೊಸ ವಿವಾದವೊಂದು ಶುರುವಾಗಿದೆ. ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಟಿಪ್ಪು ಸುಲ್ತಾನ್ ಭಾವಚಿತ್ರವನ್ನು ದಿಲ್ಲಿ ಅಸೆಂಬ್ಲಿಯಲ್ಲಿ ಅನಾವರಣಗೊಳಿಸಿರುವುದೇ ಈ ವಿವಾದಕ್ಕೆ ಕಾರಣ. ಟಿಪ್ಪು ಸುಲ್ತಾನ್ ಸಹಿತ 69 ಮಂದಿ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಕ್ರಾಂತಿಕಾರಿಗಳ ಭಾವಚಿತ್ರಗಳನ್ನೂ ಗಣರಾಜ್ಯೋತ್ಸವದಂದು ಅನಾವರಣಗೊಳಿಸಲಾಗಿದ್ದು, ಇವುಗಳು ದಿಲ್ಲಿ ವಿಧಾನಸಭೆಯ ಗ್ಯಾಲರಿಗಳನ್ನು ಅಲಂಕರಿಸಲಿವೆ.
ಆದರೆ ಟಿಪ್ಪು ಭಾವಚಿತ್ರವನ್ನು ವಿಧಾನಸಭೆಯಲ್ಲಿರಿಸುವುದನ್ನು ಬಿಜೆಪಿ ಶಾಸಕ ಓಂ ಪ್ರಕಾಶ್ ಶರ್ಮಾ ವಿರೋಧಿಸಿದ್ದು, ವಿವಾದಿತ ವ್ಯಕ್ತಿಯೊಬ್ಬರ ಭಾವಚಿತ್ರವನ್ನು ದಿಲ್ಲಿ ವಿಧಾನಸಭೆಯಲ್ಲಿ ಹಾಕಬಾರದು ಎನ್ನುತ್ತಿದ್ದಾರೆ.
ಆದರೆ ದಿಲ್ಲಿ ವಿಧಾನಸಭೆಯ ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ಅವರು ಈ ವಿವಾದದ ಬಗ್ಗೆ ಪ್ರತಿಕ್ರಿಯಿಸುತ್ತಾ ಬಿಜೆಪಿ ಪ್ರತಿ ಬಾರಿ ಏನಾದರೂ ವಿವಾದ ಕೆದಕುತ್ತಲೇ ಇರುತ್ತದೆ ಎಂದಿದ್ದಾರೆ. "ಭಾರತದ ಸಂವಿಧಾನದ ಪುಟ 144ರಲ್ಲಿ ಟಿಪ್ಪು ಸುಲ್ತಾನನ ಚಿತ್ರವಿದೆಯೆಂಬುದನ್ನು ನಾನು ಅವರಿಗೆ ಹೇಳ ಬಯಸುತ್ತೇನೆ. ಹಾಗಿರುವಾಗ ಒಂದೋ ಈ ದೇಶದಿಂದ ಬ್ರಿಟಿಷರನ್ನು ಹೊಡೆದೋಡಿಸಲು ಹೋರಾಡಿದವರು ಇಲ್ಲವೇ ಇವರು(ಬಿಜೆಪಿ) ದೇಶದ್ರೋಹಿಗಳಾಗಿರಬೇಕು'' ಎಂದೂ ಗೋಯೆಲ್ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಇಷ್ಟೇ ಅಲ್ಲದೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಬಿಜೆಪಿ ಅಥವಾ ಆರೆಸ್ಸೆಸ್ ನ ಒಬ್ಬರ ಹೆಸರನ್ನು ಸೂಚಿಸುವಂತೆ ನಾವು ಬಿಜೆಪಿ ಶಾಸಕರಿಗೆ ಹೇಳಿದ್ದೆವು. ಆದರೆ ಅವರು ಯಾವುದೇ ಹೆಸರು ನೀಡಿಲ್ಲ ಎಂದು ಆಪ್ ಶಾಸಕ ಹಾಗು ವಕ್ತಾರ ಸೌರಭ್ ಭಾರದ್ವಾಜ್ ಹೇಳಿದ್ದಾರೆ.