ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದೆ : ಹುಸೈನ್ ಸಅದಿ
ಚಿಕ್ಕಮಗಳೂರು,ಜ.27:ಪ್ರಜೆಗಳಾಗಿ ಪ್ರಜೆಗಳಿಂದ ನಡೆಸುವ ಅಧಿಕಾರವಾಗಿದೆ ಪ್ರಜಾಪ್ರಭುತ್ವ. ಇಲ್ಲಿ ಪ್ರಜೆಗಳೇ ಸಾರ್ವಭೌಮ. ಆದರೆ ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ಎಸ್ಸೆಸೆಫ್ ರಾಜ್ಯ ನಾಯಕ ಹುಸೈನ್ ಸಅದಿ ಹೊಸ್ಮಾರ್ ತಿಳಿಸಿದ್ದಾರೆ.
ಅವರು ಈ ಕುರಿತು ಶನಿವಾರ ಹೇಳಿಕೆ ನೀಡಿದ್ದು, ಪ್ರಜೆಗಳ ಮಾತಿಗೆ ಬೆಲೆಯಿಲ್ಲ. ಜನಪ್ರತಿನಿಧಿಗಳಾಗಿ ಆರಿಸಿ ಬಂದವರು ಆರಿಸಿದ ಪ್ರಜೆಗಳಾಗಿ ಮಿಡಿಯದೆ ತಮ್ಮ ರಾಜಕೀಯ ಅಂಗಳಕ್ಕೆ ಬರಲು ಹಣದ ಹೊಳೆ ಹರಿಸಿದ ಧನಿಕರಿಗಾಗಿ ಮಾತ್ರ ದುಡಿಯುವ ದಯನೀಯ ಸ್ಥಿತಿಯಲ್ಲಿದೆ. ಪ್ರಜೆಗಳಿಗೆ ಸಿಗಬೇಕಾದ ಹಕ್ಕುಗಳು, ಸ್ವಾತಂತ್ರ್ಯಗಳು ಮರೀಚಿಕೆಯಾಗುತ್ತಿವೆ. ಕೇವಲ ಶ್ರೀಮಂತರಿಗೆ ಮಾತ್ರ ಜೀವಿಸುವ ಅವಕಾಶ ನೀಡಿದಂತಾಗಿದೆ ಎಂದಿದ್ದಾರೆ.
ಅನ್ಯಾಯ ಶೋಷಣೆಯ ವಿರುದ್ಧ ಶಬ್ಧವೆತ್ತಬೇಕಾದ ಮಾಧ್ಯಮಗಳು ಕೇವಲ ಹಿಂಸೆಯನ್ನು ವೈಭವಿಕರಿಸಿ, ಅವುಗಳ ಕಾರಣಕರ್ತರನ್ನು ನೈಜ ನಾಯಕರನ್ನಾಗಿಸುವತ್ತ ಗಮನವಿಟ್ಟಿದೆ. ಪ್ರತಿಯೊಂದಕ್ಕೂ ಭತ್ಯೆ, ಕಮೀಶನ್ಗಳನ್ನು ಜನಪ್ರತಿನಿಧಿಗಳು ಪಡೆಯುತ್ತಿದ್ದರೆ ಬಡ ನಾಗರಿಕರ ಮೇಲೆ ಪ್ರತಿಯೊಂದಕ್ಕೂ ಅಮಿತವಾದ ತೆರಿಗೆಯನ್ನು ಹೇರಲಾಗುತ್ತವೆ. ಸರ್ವ ಧರ್ಮಗಳು ತಮ್ಮ ಧರ್ಮ ಹೇಳುವ ರೀತಿಯಲ್ಲಿ ಭಾರತದ ಕಾನೂನನ್ನು ಪಾಲಿಸಿ ಜೀವಿಸಬಹುದು. ಇಲ್ಲಿ ಕೇವಲ ಒಂದೇ ವಿಭಾಗಕ್ಕೆ ಮಾತ್ರ ಇಲ್ಲಿ ಜೀವಿಸುವ ಹಕ್ಕುಗಳಿರುವುದು ಎಂಬ ವಾದಕ್ಕೆ ಪುಷ್ಟಿ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಅಪರಾಧಿಗಳು, ಸಮಾಜಘಾತುಕರು ದೇಶವನ್ನಾಳುತ್ತಿದ್ದರೆ ಅಮಾಯಕರು ಕಂಬಿಯೆಣಿಸುತ್ತಿದ್ದಾರೆ. ಅವ್ಯವಸ್ಥೆಯ ವಿರುದ್ಧ ಹೋರಾಡುವವರ ಶಬ್ದವನ್ನು, ಸಂಘಟನೆಗಳನ್ನು ದೇಶದ್ರೋಹಿಗಳೆಂದು ಹಣೆಪಟ್ಟಿ ಒತ್ತಾಲಾಗುತ್ತಿದೆ. ಸರ್ವ ಜನಾಂಗದ ಶಾಂತಿಯ ತೋಟ ಇಂದು ಕೋಮುವಾದಿಗಳ ಭಯೋತ್ಪಾದಕರ ಪ್ರಯೋಗಶಾಲೆಗಳಾಗಿವೆ. ನಿಜವಾದ ಪ್ರಜಾಪ್ರಭುತ್ವವನ್ನು ಪೋಣಿಸಬೇಕಾಗಿದೆ. ಅಮೂಲಕ ಪ್ರಜಾಪ್ರಭುತ್ವ ರಕ್ಷಕರಾಗೋಣ, ಭಾರತವನ್ನು ಕಾಪಾಡೋಣ ಎಂದು ಸಲಹೆ ನೀಡಿದ್ದಾರೆ.