ಶೋಭಾ ಕರಂದ್ಲಾಜೆಯಿಂದ ಜೀವ ಬೆದರಿಕೆ : ಕೆಜೆಪಿ ನಾಯಕ ಪದ್ಮನಾಭ ಪ್ರಸನ್ನ ಆರೋಪ
"ಬಿಎಸ್ ವೈ - ಶೋಭಾ ಕೇರಳದಲ್ಲಿ ಮದುವೆಯಾಗಿದ್ದಾರೆ"
![ಶೋಭಾ ಕರಂದ್ಲಾಜೆಯಿಂದ ಜೀವ ಬೆದರಿಕೆ : ಕೆಜೆಪಿ ನಾಯಕ ಪದ್ಮನಾಭ ಪ್ರಸನ್ನ ಆರೋಪ ಶೋಭಾ ಕರಂದ್ಲಾಜೆಯಿಂದ ಜೀವ ಬೆದರಿಕೆ : ಕೆಜೆಪಿ ನಾಯಕ ಪದ್ಮನಾಭ ಪ್ರಸನ್ನ ಆರೋಪ](https://www.varthabharati.in/sites/default/files/images/articles/2018/01/27/prasanna.jpg)
"ಯಡಿಯೂರಪ್ಪ ಹಾಳಾಗಲು ಶೋಭಾ ಕಾರಣ"
ಬಾಗಲಕೋಟೆ, ಜ. 27: ಸಂಸದೆ ಶೋಭಾ ಕರಂದ್ಲಾಜೆ ಅವರಿಂದ ನನಗೆ ಜೀವಭಯವಿದೆ, ನನಗೆ ಏನಾದರೂ ಹೆಚ್ಚು ಕಡಿಮೆಯಾದರೆ ನನ್ನ ಕುಟುಂಬದ ಗತಿ ಏನು ಎಂದು ಕರ್ನಾಟಕ ಜನತಾ ಪಕ್ಷ(ಕೆಜೆಪಿ) ಸಂಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನ್ನ ಇಂದಿಲ್ಲಿ ಕಣ್ಣೀರಿಟ್ಟಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು ಜೀವ ಭಯದಿಂದ ಕಳ್ಳನಂತೆ ತಲೆತಪ್ಪಿಸಿಕೊಂಡು ಓಡಾಡಬೇಕಿದೆ. ಕಾರಿನಿಂದ ಕೆಳಗೆ ಇಳಿದರೆ ಯಾರಾದರೂ ತೊಂದರೆ ಮಾಡುತ್ತಾರೆಂಬ ಆತಂಕದಲ್ಲಿದ್ದು, ಭದ್ರತೆ ಕಲ್ಪಿಸಲು ಸರಕಾರಕ್ಕೆ ಮನವಿ ಮಾಡಿದ್ದೇನೆ.
ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವರು ತನಗೆ ಯಾವುದೇ ಭದ್ರತೆ ನೀಡಿಲ್ಲ. ತನಗೆ ಶೋಭಾ ಕರಂದ್ಲಾಜೆಯಿಂದ ಜೀವ ಬೆದರಿಕೆ ಇದೆ ಎಂದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ನಿರ್ಧರಿಸಿದ್ದೇನೆ ಎಂದು ತಿಳಿಸಿದರು.
ಮದುವೆ ಸೀಡಿ: ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಯಡಿಯೂರಪ್ಪ ಕೇರಳದ ದೇವಸ್ಥಾನದಲ್ಲಿ ಮದುವೆ ಆಗಿದ್ದು, ಆ ಸಿಡಿ ನನ್ನ ಬಳಿ ಇದೆ. ಅದನ್ನು ಬಿಡುಗಡೆ ಮಾಡಲು ಹೊರಟ ಕಾರಣ ನನ್ನ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಲಾಗಿದೆ ಎಂದು ಹೇಳಿದರು.
ಬಿಎಸ್ವೈ ಕೆಜೆಪಿಯಲ್ಲಿಯೇ ಇದ್ದಿದ್ದರೆ ಈ ಬಾರಿ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರುತ್ತಿತ್ತು. ಪಕ್ಷದ ದುಸ್ಥಿತಿ ಹಾಗೂ ಯಡಿಯೂರಪ್ಪ ಹಾಳಾಗಲು ಶೋಭಾ ಅವರೇ ಕಾರಣ. ಬಿಎಸ್ವೈ ಒಳ್ಳೆಯ ಮನುಷ್ಯ. ಆದರೆ, ಶೋಭಾ ಅವರನ್ನು ನಾಶ ಮಾಡುತ್ತಿದ್ದಾರೆಂದು ಟೀಕಿಸಿದರು.
ಶಿಕಾರಿಪುರದಿಂದ ಸ್ಪರ್ಧೆ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ ತಾನು ಸ್ಪರ್ಧಿಸುವೆ. ಅಲ್ಲದೆ, ಬಾಗಲಕೋಟೆ ತೇರದಾಳ ಕ್ಷೇತ್ರದಿಂದಲೂ ಸ್ಪರ್ಧಿಸುವ ಇಚ್ಛೆ ಹೊಂದಿದ್ದೇನೆ ಎಂದ ಅವರು, 224 ಕ್ಷೇತ್ರಗಳಲ್ಲಿ ಪಕ್ಷ ಸ್ಪರ್ಧೆ ಮಾಡಲಿದ್ದು, ಶೀಘ್ರದಲ್ಲೆ ಹುಬ್ಬಳ್ಳಿಯಲ್ಲಿ ಮನೆ ಮಾಡುತ್ತೇನೆ ಎಂದು ಪ್ರಕಟಿಸಿದರು.