ಕೂಡಿಗೆ ಸೈನಿಕ ಶಾಲೆ ವಾರ್ಷಿಕೋತ್ಸವ
ಬುದ್ಧ, ಬಸವ, ಅಂಬೇಡ್ಕರ್ರ ತತ್ವ ಮೈಗೂಡಿಸಿಕೊಂಡು ಆದರ್ಶ ನಾಗರಿಕರಾಗಿ : ಮಹೇಶ್ ಚಂದ್ರಗುರು ಕರೆ
![ಕೂಡಿಗೆ ಸೈನಿಕ ಶಾಲೆ ವಾರ್ಷಿಕೋತ್ಸವ ಕೂಡಿಗೆ ಸೈನಿಕ ಶಾಲೆ ವಾರ್ಷಿಕೋತ್ಸವ](/images/placeholder.jpg)
ಮಡಿಕೇರಿ,ಜ.27:ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಹಾಗೂ ಮನುಷ್ಯನಲ್ಲಿರುವ ಸಂಶಯ ಮತ್ತು ಭಯವನ್ನು ಹೋಗಲಾಡಿಸಲು ಸ್ವಾಮಿ ವಿವೇಕಾನಂದ, ಬುದ್ಧ, ಬಸವ, ಅಂಬೇಡ್ಕರ್ರ ತತ್ವಗಳನ್ನು ಮೈಗೂಡಿಸಿಕೊಂಡು ಆದರ್ಶ ನಾಗರಿಕರಾಗಿ ಬಾಳಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಪಿ.ಮಹೇಶ್ ಚಂದ್ರ ಗುರು ಅವರು ಕಿವಿಮಾತು ಹೇಳಿದರು.
ಕೂಡಿಗೆಯ ಸೈನಿಕ ಶಾಲೆಯ ಹತ್ತನೇ ವಾರ್ಷಿಕೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಬುದ್ಧನಂತಹ ಮಹಾನ್ ವ್ಯಕ್ತಿಗಳ ತತ್ವಗಳು ಯುದ್ಧವನ್ನು ತಡೆಯಬಲ್ಲವುಗಳಾಗಿವೆ. ಈ ತತ್ವಗಳು ಆಧುನಿಕ ನಾಗರಿಕರ ಬದುಕಿಗೆ ದಾರಿದೀಪವಾಗಬೇಕೆಂದು ತಿಳಿ ಹೇಳಿದರು’. ಶಾಲೆಯು ಕಳೆದ ಒಂದು ವರ್ಷದಲ್ಲಿ ಕೈಗೊಂಡ ಅವಿಸ್ಮರಣೀಯ ಸಾಧನೆಯನ್ನು ಶ್ಲಾಘಿಸಿದರು.
ಜೊತೆಗೆ ನಂತರ ವಿದ್ಯಾರ್ಥಿಗಳು ದೇಶ ಭಕ್ತಿಯನ್ನು ಬಿಂಬಿಸುವ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಾಲಾ ಶಿಕ್ಷಕಿಯಾದ ಶ್ರೀಲೇಖಾ ರವರ ಮಾರ್ಗದರ್ಶನದಲ್ಲಿ ನಡೆಯಿತು.
ಮುಖ್ಯ ಅತಿಥಿಗಳು ಶಾಲೆಯಲ್ಲಿ ಶೈಕ್ಷಣಿಕವಾಗಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಹಾಗೂ ಸಮರ್ಥವಾಗಿ ನಾಯಕತ್ವ ಗುಣಗಳನ್ನು ಪ್ರದರ್ಶಿಸಿದ ಶಾಲೆಯ ನಾಯಕ, ಉಪ ನಾಯಕ, ವಿವಿಧ ವಿಭಾಗಗಳ ನಾಯಕರುಗಳಿಗೆ ಮತ್ತು ಎಲ್ಲಾ ನಿಲಯಗಳ ನಾಯಕರುಗಳಿಗೆ ಪ್ರಶಸ್ತಿಪತ್ರ ಮತ್ತು ಪಾರಿತೋಷಕವನ್ನು ನೀಡಿ ಗೌರವಿಸಿದರು.
ಹಾಗೆಯೇ 2017-18ನೇ ಸಾಲಿನಲ್ಲಿ ಅತ್ಯುತ್ತಮ ಸಾಧನೆಗೈದ ಸುಬ್ರತೋ ನಿಲಯಕ್ಕೆ ‘ಕಾಕ್ಹೌಸ್’ ಪಾರಿತೋಷಕವನ್ನು ಹಾಗೂ ಅಂತರ ನಿಲಯ ಎನ್ಸಿಸಿ ಡ್ರಿಲ್ ಸ್ಪರ್ಧೆಯಲ್ಲಿ ವಿಜೇತರಾದ ಕಾರ್ಯಪ್ಪ ನಿಲಯಕ್ಕೆ ಪಾರಿತೋಷಕವನ್ನು ಪ್ರಧಾನ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳ ಪೋಷಕರು, ಉಪ ಪ್ರಾಂಶುಪಾಲರಾದ ಸ್ಕ್ವಾಡ್ರನ್ ಲೀಡರ್ ಡಿ ಮ್ಯಾಥ್ಯುರವರು, ಹಿರಿಯ ಶಿಕ್ಷಕರಾದ ಎಸ್ ಸೂರ್ಯನಾರಾಯಣ, ಬೋಧಕ, ಬೋಧಕೇತರವರ್ಗದವರು ಮತ್ತು ಅವರ ಕುಟುಂಬವರ್ಗದವರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಪ್ರಸಾದ್ರವರು ಮುಖ್ಯ ಅತಿಥಿಗಳ ಕುರಿತು ಪರಿಚಯವನ್ನು ಮಾಡಿದರು. ನಂತರ ಕೆಡೆಟ್ ಮೇಘನಾರವರು ಸ್ವಾಗತ ನೃತ್ಯವನ್ನು ನಡೆಸಿಕೊಟ್ಟರು.
ಶಾಲೆಯ ಪ್ರಾಂಶುಪಾಲರಾದ ಗ್ರೂಪ್ ಕ್ಯಾಪ್ಟನ್ ಆರ್ ಆರ್ ಲಾಲ್ರವರು ಶಾಲೆಯ 2017-18ನೇ ಶೈಕ್ಷಣಿಕ ಸಾಲಿನ ವಾರ್ಷಿಕ ವರದಿಯನ್ನು ವಾಚನ ಮಾಡಿದರು. ಕೆಡೆಟ್ ಜೀತ್ ಮತ್ತು ಪವನ್ ತಿಮ್ಮಯ್ಯ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.