ಮಡಿಕೇರಿ ನಗರಸಭೆಯ ಸಾಮಾನ್ಯ ಸಭೆ
ಮೀನಿನ ಅಂಗಡಿ, ಮಹದೇವಪೇಟೆ ರಸ್ತೆ ಅವ್ಯವಸ್ಥೆ ಬಗ್ಗೆ ಚರ್ಚೆ
![ಮಡಿಕೇರಿ ನಗರಸಭೆಯ ಸಾಮಾನ್ಯ ಸಭೆ ಮಡಿಕೇರಿ ನಗರಸಭೆಯ ಸಾಮಾನ್ಯ ಸಭೆ](https://www.varthabharati.in/sites/default/files/images/articles/2018/01/27/Z NAGARASABHE 1.jpg)
ಮಡಿಕೇರಿ, ಜ.27: ನಗರಸಭಾ ಅಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ ಅಧ್ಯಕ್ಷತೆಯಲ್ಲಿ ನಗರಸಭೆಯ ಸಾಮಾನ್ಯ ಸಭೆ ನಡೆಯಿತು.
ನಗರದ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸದ ಸಭೆ ಮಹದೇವಪೇಟೆ ರಸ್ತೆ ಅವ್ಯವಸ್ಥೆ, ಇಂದಿರಾ ಕ್ಯಾಂಟೀನ್ ಜಾಗದ ವಿವಾದ, ಯುಜಿಡಿ ಒಳಚರಂಡಿ ಕಾಮಗಾರಿಯಿಂದಾಗಿ ರಸ್ತೆಗಳು ಹದಗೆಡುತ್ತಿರುವುದು ಸೇರಿದಂತೆ ಕೇವಲ ಒಂದು ಮೀನಿನ ಅಂಗಡಿಗಾಗಿ ಸಾಕಷ್ಟು ಸಮಯವನ್ನು ವ್ಯರ್ಥ ಮಾಡಲಾಯಿತು.
ನಗರದ ಗಣಪತಿ ಬೀದಿಯಲ್ಲಿ ಅನುಮತಿ ಇಲ್ಲದೆ ಮೀನಿನ ಅಂಗಡಿಯೊಂದು ನಡೆಯುತ್ತಿದ್ದು, ಯಾಕೆ ಅವಕಾಶ ನೀಡುತ್ತಿದ್ದೀರಿ ಎಂದು ಬಿಜೆಪಿ ಸಸ್ಯ ಪಿ.ಡಿ.ಪೊನ್ನಪ್ಪ ಪ್ರಶ್ನಿಸಿದರು.
ನಗರದೊಳಗೆ ಮೀನು, ಮಾಂಸ ಮಾರಾಟಕ್ಕೆ ನೂತನ ಮಳಿಗೆಗಳಿಗೆ ಅನುಮತಿ ನೀಡಬಾರದೆಂದು ಈ ಹಿಂದೆ ಸಭೆ ನಿರ್ಣಯ ಕೈಗೊಂಡಿದ್ದರೂ ಗಣಪತಿ ಬೀದಿ ಯಲ್ಲಿ ಮೀನು ಮಾರಾಟಕ್ಕೆ ಯಾಕೆ ಅವಕಾಶ ನೀಡಿ ದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಬಿಜೆಪಿಯ ಇತರ ಸದಸ್ಯರು ಕೂಡ ಧ್ವನಿಗೂಡಿಸಿ ಆಕ್ಷೇಪ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಮಾನವೀಯತೆಯ ದೃಷ್ಟಿಯಿಂದ ಕೋಲ್ಡ್ ಸ್ಟೋರೇಜ್ಗೆ ಅನುಮತಿ ನೀಡಲಾಗಿದೆಯೇ ಹೊರತು ಮೀನು, ಮಾಂಸವನ್ನು ಕಡಿದು ಮಾರುತ್ತಿಲ್ಲವೆಂದರು.
ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್.ರಮೇಶ್ ಮೊಬೈಲ್ನಲ್ಲಿ ದೃಶ್ಯಗಳನ್ನು ಪ್ರದರ್ಶಿಸಿ ಮೀನು, ಮಾಂಸವನ್ನು ಕಡಿದು ಮಾರಾಟ ಮಾಡಲಾಗುತ್ತಿರುವುದಕ್ಕೆ ಸಾಕ್ಷಿ ಇದ್ದು, ತಕ್ಷಣ ಮಳಿಗೆಯನ್ನು ಬಂದ್ ಮಾಡಿ ಎಂದು ಒತ್ತಾಯಿಸಿದರು.
ಈ ಸಂದರ್ಭ ಎಸ್ಡಿಪಿಐ ಸದಸ್ಯ ಮನ್ಸೂರ್ ಮೀನು ಮಳಿಗೆಯ ಪರ ಮಾತನಾಡಿ, ವ್ಯಾಪಾರಿಗೆ ಅನಾರೋಗ್ಯ ಇರುವ ಕಾರಣ ಮಾನವೀಯತೆಯ ದೃಷ್ಟಿಯಿಂದ ಮೀನು ಮಾರಾಟಕ್ಕೆ ಅವಕಾಶ ನೀಡಲಾಗಿದೆ ಎಂದು ಸಮರ್ಥಿಸಿಕೊಂಡರು.
ಇದಕ್ಕೆ ಒಪ್ಪದ ಬಿಜೆಪಿ ಸದಸ್ಯರು ಒಂದು ಅಂಗಡಿಗೆ ಅನುಮತಿ ನೀಡಿದರೆ ನಾವು 2 ಅಂಗಡಿ ತೆರೆಯುತ್ತೇವೆ ಎಂದು ಸವಾಲು ಹಾಕಿದರು.
ಸಭೆಯಲ್ಲಿ ಗೊಂದಲ ಸೃಷ್ಟಿಯಾಗಿ ಗದ್ದಲ ಏರ್ಪಟ್ಟ ಸಂದರ್ಭ ಮಾತನಾಡಿದ ಗಣಪತಿ ಬೀದಿ ವಾರ್ಡ್ನ ನಗರಸಭಾ ಸದಸ್ಯೆ ಸವಿತಾ ರಾಕೇಶ್, ಅನುಮತಿ ಇಲ್ಲದೆ ನನ್ನ ವಾರ್ಡ್ನಲ್ಲಿ ಆರಂಭಗೊಂಡಿರುವ ಮೀನು ಮಳಿಗೆಯನ್ನು ಮುಚ್ಚಿ ಎಂದು ಆಗ್ರಹಿಸಿದರು.
ಇಂದಿರಾ ಕ್ಯಾಂಟೀನ್ ಅಪಸ್ವರ:ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಇಂದಿರಾ ಕ್ಯಾಂಟೀನ್ನ್ನು ನಗರದ ನೂತನ ಖಾಸಗಿ ಬಸ್ ನಿಲ್ದಾಣದ ಜಾಗದಲ್ಲಿ ನಿರ್ಮಿಸುತ್ತಿರುವ ಬಗ್ಗೆ ಕಾಂಗ್ರೆಸ್ನ ಬಂಡಾಯ ಸದಸ್ಯ ಕೆ.ಎಂ.ಗಣೇಶ್ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಸದಸ್ಯರು ಕ್ಯಾಂಟೀನ್ ನಿರ್ಮಾಣದ ಬಗ್ಗೆ ಯಾವೊಬ್ಬ ಸದಸ್ಯನ ಗಮನಕ್ಕೂ ತರಲಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹಾಗೂ ಪೌರಾಯುಕ್ತೆ ಬಿ.ಶುಭಾ ಮಾತನಾಡಿ, ಇದು ಸರಕಾರದ ಯೋಜನೆಯಾಗಿದ್ದು, ಜಿಲ್ಲಾಧಿಕಾರಿ ಆದೇಶದಂತೆ ಖಾಸಗಿ ಬಸ್ ನಿಲ್ದಾಣದ ಜಾಗದಲ್ಲಿ ಇಂದಿರಾ ಕ್ಯಾಟೀನ್ ನಿರ್ಮಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ನಗರಸಭಾ ಕಾಂಗ್ರೆಸ್ ಸದಸ್ಯ ಚುಮ್ಮಿ ದೇವಯ್ಯ ಮಾತನಾಡಿ, ಜನಪರವಾದ ಅಭಿವೃದ್ಧಿ ಕಾರ್ುಗಳಲ್ಲಿ ರಾಜಕೀಯ ಬೇಡವೆಂದರು.
ಶವ ಕೊಂಡೊಯ್ಯಲು ಸಾಧ್ಯವಾಗುತ್ತಿಲ್ಲ: ನಗರದ ಮಹದೇವಪೇಟೆ ರಸ್ತೆ ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಮಹಿಳಾ ಸದಸ್ಯರು ಬಾವಿಗಳಿದು ಅಧ್ಯಕ್ಷರನ್ನು ತರಾಟೆಗೆ ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ಸದಸ್ಯ ಉದಯಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಡಿಸೆಂಬರ್ನೊಳಗೆ ಇಂಟರ್ ಲಾಕ್ ಅಳವಡಿಕೆ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಲಾಗಿತ್ತು. ಆದರೆ ಜನವರಿ ಮುಗಿದರೂ ಕಾಮಗಾರಿ ಆರಂಭವಾಗಿಲ್ಲ. ಅಕ್ಕಪಕ್ಕದ ಓಣಿಯ ಜನ ನಡೆದಾಡಲು ಸಾಧ್ಯವಾಗುತ್ತಿಲ್ಲ. ಶವವನ್ನು ಕೊಂಡೊ ಯ್ಯಲು ಕೂಡ ಕಷ್ಟಪಡಬೇಕಾದ ಪರಿಸ್ಥಿತಿ ಇದೆ ಎಂದು ಅನಿತಾ ಪೂವಯ್ಯ, ಸವಿತಾ ರಾಕೇಶ್, ಕೆ.ಎಸ್.ರಮೇಶ್, ಉದಯಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಪೌರಾಯುಕ್ತೆ ಬಿ.ಶುಭಾ ಮಾತನಾಡಿ, ಟೆಂಡರ್ ಪ್ರಕ್ರಿಯೆ ಫೆ.28ರೊಳಗೆ ಪೂರ್ಣಗೊಳ್ಳಲಿದ್ದು, ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ ಎಂದರು. ಚುನಾವಣಾ ನೀತಿ ಸಂಹಿತೆ ಜಾರಿಯಾಗುವುದಕ್ಕೂ ಮೊದಲು ಕಾಮಗಾರಿ ಆರಂಭಿಸುವಂತೆ ಹಾಗೂ ನಗರೋತ್ಥಾನದ ಮೂರನೇ ಹಂತದ ಕಾಮಗಾರಿಯನ್ನು ಶೀಘ್ರ ಕೈಗೆತ್ತಿಕೊಳ್ಳುವಂತೆ ಸದಸ್ಯು ಒತ್ತಾಯಿಸಿದರು.