ಕದ್ರಿ ಫಲಪುಷ್ಪ ಪ್ರದರ್ಶನ: ಹರಿದು ಬಂದ ಜನ ಸಾಗರ
ಜ. 29ರಂದು ಸಮಾರೋಪ

ಮಂಗಳೂರು, ಜ. 28: ಕದ್ರಿ ಉದ್ಯಾನವನದಲ್ಲಿ ಜ. 26ರಿಂದ ಆರಂಭಗೊಂಡ ಫಲಪುಷ್ಪ ಪ್ರದರ್ಶನಕ್ಕೆ ರವಿವಾರ ಸಂಜೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ವೀಕ್ಷಣೆಗೆ ಆಗಮಿಸುಸತ್ತಿರುವ ದೃಶ್ಯ ಕಂಡು ಬಂತು. ಇದುವರೆಗೆ ಸುಮಾರು 30 ಸಾವಿರದಷ್ಟು ಮಂದಿ ಪ್ರದರ್ಶನವನ್ನು ವೀಕ್ಷಿಸಿದ್ದಾರೆ.
ಪ್ರಥಮ ದಿನ 9,500 ಎರಡನೆ ದಿನವೂ 9500 ಮಂದಿ ಹಾಗೂ ಮೂರನೆ ದಿನ ಸುಮಾರು 11 ಸಾವಿರ ಮಂದಿ ಪ್ರದರ್ಶನವನ್ನು ವೀಕ್ಷಿಸಿದ್ದಾರೆ. ಸೋಮವಾರ ಫಲಪುಷ್ಪ ಪ್ರದರ್ಶನದ ಕೊನೆ ದಿನವಾಗಿದೆ.
ತರಕಾರಿ, ಹಣ್ಣು ಮತ್ತು ಹೂವಿನ ಗಿಡಗಳಿಗೆ ಬೇಡಿಕೆ:- ಫಲಪುಷ್ಟ ಪ್ರದರ್ಶನದಲ್ಲಿ ಇದ್ದ ಹೂವಿನ ಗಿಡಗಳಿಗೆ,ತರಕಾರಿ ಬೀಜಗಳಿಗೆ ಜನರು ಹೆಚ್ಚಿನ ಮುತು ವರ್ಜಿಯಿಂದ ಖರೀದಿಸುತ್ತಿದ್ದ ದೃಶ್ಯ ಕಂಡು ಬಂತು. ಆವರಣದಲ್ಲಿದ್ದ ಆಹಾರ ಮಳಿಗೆಯಲ್ಲೂ ಉತ್ತಮ ವ್ಯಾಪಾರ ನಡೆದಿರುವ ಬಗ್ಗೆ ಮಳಿಗೆಯ ಸಂಘಟಕರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸ್ವಸಹಾಯ ಸಂಘಗಳ ಮಳಿಗೆಯಲ್ಲಿ ಗೃಹ ಉತ್ಪನ್ನಗಳಾದ ಹಪ್ಪಳ, ಸಂಡಿಗೆ, ವಿವಿಧ ರೀತಿಯ ಉಪ್ಪಿನ ಕಾಯಿ , ಹಣ್ಣಿನ ಜ್ಯೂಸ್ಗಳ ಮಳಿಗೆಯಲ್ಲಿ ಉತ್ತಮ ವ್ಯಾಪಾರ ನಡೆದಿದೆ. ಕೃಷಿ ಉಪಕರಣಗಳು, ಸಾವಯವ ಗೊಬ್ಬರಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿತ್ತು.
ವಿಶೇಷ ಆಕರ್ಷಣೆ ಪಡೆದ ಹೂವಿನ ಗೋಡೆ ಗಡಿಯಾರ:- ಸ್ವಾತಂತ್ರ ಪೂರ್ವದಲ್ಲಿ ನಗರದ ವಿವಿಧ ಕಡೆಗಳಲ್ಲಿ ಇದ್ದ ಕ್ಲಾಕ್ ಟವರ್ ಹಾಗೂ ರೇಡಿಯೋ ಗೋಪುರಗಳಲ್ಲಿ ಕೆಲವು ಮನಪಾ ವ್ಯಾಪ್ತಿಯ ಉದ್ಯಾನವನಗಳಲ್ಲಿ ಇವೆ. ಈ ಪೈಕಿ ಮಂಗಳೂರಿನ ಹೃದಯ ಭಾಗದಲ್ಲಿ ಈಗಿನ ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನ ಪಕ್ಕದಲ್ಲಿ ಇದ್ದ ಹಳೆಯ ಕ್ಲಾಕ್ ಟವರ್ ಹೆಚ್ಚು ಪ್ರಸಿದ್ದಿ ಪಡೆದಿತ್ತು.
ನಗರದ ರಸ್ತೆ ಅಭಿವೃದ್ಧಿಯ ಸಂದರ್ಭದಲ್ಲಿ ತೆಗದು ಜನರ ಮನಸ್ಸಿನಿಂದ ಕಣ್ಮರೆಯಾಗಿದ್ದರೂ ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಅದೇ ಮಾದರಿಯ ಕ್ಲಾಕ್ ಟವರನ್ನು ನಿರ್ಮಿಸಿರುವುದು ಪಕ್ಕದಲ್ಲಿ ಕಾರಂಜಿ ನಿರ್ಮಿಸಿರುವುದ ಅದರ ಪಕ್ಕದಲ್ಲಿ ಸಾರ್ವಜನಿಕರು ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಕಂಡು ಮತ್ತು ಈ ಬಾರಿ ಹೆಚ್ಚು ಜನಾಕರ್ಷಣೆಯನ್ನು ಪಡೆದಿದೆ.ರವಿವಾರ ಕದ್ರಿ ಉದ್ಯಾನವನದ ಮುಂಭಾಗದಲ್ಲಿ ಕೆಂಪು ಬಿಳಿ,ಹಳದಿ ಗುಲಾಬಿಗಳಿಂದ ನಿರ್ಮಿಸಲಾದ ಮುಖ್ಯ ದ್ವಾರ ವಿಶೇಷ ಆಕರ್ಷಣೆಯಾಗಿತ್ತು.







