ನಾಳೆ ಯಶವಂತ್ ಸಿನ್ಹಾರಿಂದ ‘ರಾಷ್ಟ್ರಮಂಚ್’ಗೆ ಚಾಲನೆ
ಕೇಂದ್ರ ಸರಕಾರದ ವಿರುದ್ದ ದಾಳಿಗೆ ವೇದಿಕೆ?

ಹೊಸದಿಲ್ಲಿ,ಜ.29: ಕೇಂದ್ರ ಸರಕಾರದ ಕಟು ಟೀಕಾಕಾರರಾಗಿರುವ ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಅವರು ಮಂಗಳವಾರ ‘ರಾಷ್ಟ್ರಮಂಚ್’ಗೆ ಚಾಲನೆ ನೀಡಲಿದ್ದಾರೆ. ಇದು ದೇಶದಲ್ಲಿಯ ಪ್ರಚಲಿತ ಸ್ಥಿತಿಯ ಬಗ್ಗೆ ಕಳವಳ ಹೊಂದಿರುವ ರಾಜಕೀಯ ನಾಯಕರು ಮತ್ತು ಇತರರಿಗಾಗಿರುವ ವೇದಿಕೆಯಾಗಿದೆ ಎಂದು ಅವರು ತಿಳಿಸಿದರು.
ತಾನೂ ವೇದಿಕೆಯನ್ನು ಸೇರುವುದಾಗಿ ತೃಣಮೂಲ ಕಾಂಗ್ರೆಸ್ ಸಂಸದ ದಿನೇಶ್ ತ್ರಿವೇದಿ ಹೇಳಿದರು. ಆಡಳಿತ ಎನ್ಡಿಎಯ ಅತೃಪ್ತ ಸಂಸದರೋರ್ವರು ಈ ವೇದಿಕೆಗೆ ಸೇರುವ ಬಗ್ಗೆಯೂ ವದಂತಿಗಳಿವೆ.
ತನ್ನ ಆಂದೋಲನದಲ್ಲಿ ಸೇರುವಂತೆ ಸಿನ್ಹಾ ಟ್ವೀಟ್ನಲ್ಲಿ ಯುವಜನರಿಗೆ ಕರೆ ನೀಡಿದ್ದಾರೆ.
ಸಿನ್ಹಾ ಅವರ ಈ ನಡೆಯು ಸರಕಾರದ ವಿರುದ್ಧ ದಾಳಿಯನ್ನು ತೀವ್ರಗೊಳಿಸುವ ಮತ್ತು ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿ ನೇತೃತ್ವದ ಎನ್ಡಿಎಗೆ ವಿರುದ್ಧವಾದ ವಾತಾವರಣವನ್ನು ಸೃಷ್ಟಿಸುವ ಪ್ರಯತ್ನವಾಗಿರುವಂತೆ ಕಂಡುಬರುತ್ತಿದೆ.
Next Story