ಕೇಂದ್ರ ಸರಕಾರಕ್ಕೆ ಕೇರಳ ಹೈಕೋರ್ಟ್ ನೋಟಿಸ್
ಕಿತ್ತಳೆ ಬಣ್ಣದ ಪಾಸ್ಪೋರ್ಟ್
ಕೊಚ್ಚಿ, ಜ. 29: ಎಮಿಗ್ರೇಶನ್ ಪರಿಶೀಲನೆ ಅಗತ್ಯವಿರುವ ವ್ಯಕ್ತಿಗಳಿಗೆ ಕಿತ್ತಳೆ ಬಣ್ಣದ ಪಾಸ್ಪೋರ್ಟ್ ಪರಿಚಯಿಸುವ ನಿರ್ಧಾರ ಪ್ರಶ್ನಿಸಿ ದಾಖಲಿಸಲಾದ ಸಾರ್ವಜನಿಕ ಹಿತಾಸಕ್ತಿ ದಾವೆ ಹಿನ್ನೆಲೆಯಲ್ಲಿ ಕೇರಳ ಉಚ್ಚ ನ್ಯಾಯಾಲಯ ಸೋಮವಾರ ಕೇಂದ್ರ ಸರಕಾರಕ್ಕೆ ನೋಟಿಸು ಜಾರಿ ಮಾಡಿದೆ.
ಈ ನಿರ್ಧಾರ ಕಡಿಮೆ ಶಿಕ್ಷಣ ಪಡೆದ ಹಾಗೂ ಕಡಿಮೆ ಆರ್ಥಿಕ ಮಟ್ಟ ಇರುವ ವ್ಯಕ್ತಿಗಳನ್ನು ಪ್ರತ್ಯೇಕಿಸುತ್ತದೆ ಎಂದು ನ್ಯಾಯವಾದಿ ಶಂಸುದ್ದೀನ್ ಕರುನಗಪಳ್ಳಿ ಮನವಿಯಲ್ಲಿ ಪ್ರತಿಪಾದಿಸಿದ್ದಾರೆ.
ಇತ್ತೀಚಿನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಹೇಳಿಕೆಯಲ್ಲಿ, ಎಮಿಗ್ರೇಶನ್ ಪರಿಶೀಲನೆ ಅಗತ್ಯವಿರುವ ಪಾಸ್ಪೋರ್ಟ್ ಹೊಂದಿರುವವರಿಗೆ ಕಿತ್ತಳೆ ಬಣ್ಣದ ಕವಚವಿರುವ ಪಾಸ್ ಪೋರ್ಟ್ ನೀಡಲಾಗುತ್ತದೆ ಹಾಗೂ ಎಮಿಗ್ರೇಶನ್ ಪರಿಶೀಲನೆ ಅಗತ್ಯವಿರದೇ ಇರುವವರಿಗೆ ನೀಲಿ ಬಣ್ಣದ ಪಾಸ್ಪೋರ್ಟ್ ವಿತರಣೆ ಮುಂದುವರಿಯಲಿದೆ ಎಂದಿತ್ತು.
10ನೇ ತರಗತಿ ಒಳಗೆ ಶಿಕ್ಷಣ ಹಾಗೂ ತೆರಿಗೆ ನೀಡುವುದಕ್ಕಿಂತ ಕಡಿಮೆ ಆದಾಯ ಹೊಂದಿ ಉದ್ಯೋಗಕ್ಕಾಗಿ ವಲಸೆ ಕೋರುವ ಪಾಸ್ಪೋರ್ಟ್ ಹೊಂದಿರುವವರು ಎಮಿಗ್ರೇಶನ್ ಪರಿಶೀಲನೆ ನಡೆಸುವ ಅಗತ್ಯತೆ ಇದೆ ಎಂದು ದೂರುದಾರರು ಹೇಳಿದ್ದಾರೆ.
ಈ ನಿರ್ಧಾರದಿಂದ ಪ್ರತ್ಯೇಕ ಬಣ್ಣದ ಮೂಲಕ ನಮ್ಮ ಬಡತನ ಸಾರ್ವಜನಿಕವಾಗಿ ಬಹಿರಂಗವಾಗುತ್ತದೆ. ಇದು ನಮ್ಮ ಮೂಲಭೂತ ಹಾಗೂ ಖಾಸಗಿ ಹಕ್ಕಿನ ಉಲ್ಲಂಘನೆ ಎಂದು ದೂರುದಾರರು ಪ್ರತಿಪಾದಿಸಿದ್ದಾರೆ.