ವಿಶ್ವಮಾನವ ಪರಿಕಲ್ಪನೆಯನ್ನು ಪರಿಚಯಿಸಿದ ಕುವೆಂಪು ವಿಶ್ವಮಾನವರಾಗಿದ್ದವರು: ಸೂರಿ ಶ್ರೀನಿವಾಸ್

ಚಿಕ್ಕಮಗಳೂರು, ಜ.30: ಕುವೆಂಪು ಅವರು ಮನುಜ ಮತ ಮತ್ತು ವಿಶ್ವ ಪಥವನ್ನು ಸಾರಿದ ಮಾಹಾನ್ ಮಾನವತಾವಾದಿ ಹಾಗೂ ವಿಶ್ವಮಾನವ ಪರಿಕಲ್ಪನೆಯನ್ನು ಮಾನವ ಸಂಕುಲಕ್ಕೆ ಪರಿಚಯಿಸಿದ ಕುವೆಂಪು ವಿಶ್ವಮಾನವರಾಗಿದ್ದವರು ಎಂಬುದಾಗಿ ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಸೂರಿಶ್ರೀನಿವಾಸ್ ತಿಳಿಸಿದರು.
ಅವರು ಬೀರೂರು ಬಳಿಯ ಪಟ್ಟಣಗೆರೆ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಜಿಲ್ಲಾ ಕನ್ನಡ ಜಾನಪದ ಪರಿಷತ್ ಮತ್ತು ಅಜ್ಜಂಪುರ ಜಿ. ಸೂರಿ ಪ್ರತಿಷ್ಠಾನ ಹಾಗೂ ಸರ್ಕಾರಿ ಪಿಯು ಕಾಲೇಜು ಪಟ್ಟಣಗೆರೆ ಆಶ್ರಯದಲ್ಲಿ ಆಯೋಜಿಸಿದ್ದ ಕುವೆಂಪು ಸಂಸ್ಮರಣೆ ಪ್ರಯುಕ್ತ 50ನೇ ವರ್ಷದ ಸಂಭ್ರಮಾಚರಣೆಯಲ್ಲಿ ಕುವೆಂಪು ಒಂದು ನೆನಪು ಕಾರ್ಯಕ್ರಮ ಹಾಗೂ ಸಾಹಿತ್ಯ ಮತ್ತು ಸಂಗೀತ ಸಾಧಕರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕುವೆಂಪು ಅವರು ಬರೆಯಲು ಪ್ರಾರಂಭಿಸಿದ ಕಾಲಘಟ್ಟವನ್ನು ನವೋದಯ ಕಾಲ ಎಂದು ಕರೆಯಲಾಯಿತು. ಕುವೆಂಪು ಅವರಿಗೆ ಶ್ರೀ ರಾಮಾಯಣ ದರ್ಶನಂ ಕೃತಿಯಿಂದ ಅಪಾರವಾದ ಜನಪ್ರಿಯತೆ ದೊರಕಿತು. ಈ ಕೃತಿಗೆ ಸಾಹಿತ್ಯಕ್ಕೆ ಕೊಡಮಾಡುವ ಶ್ರೇಷ್ಠ ಪ್ರಶಸ್ತಿ ಜ್ಞಾನಪೀಠ ಪ್ರಶಸ್ತಿ ದೊರಕಿತು. ಆ ಸಂದರ್ಭದಲ್ಲಿ ಎಸ್.ವಿ.ಪರಮೇಶ್ವರ ಭಟ್ಟರು ತಮ್ಮ ರಸಋಷಿ ಕುವೆಂಪು ಕೃತಿಯಲ್ಲಿ ಕುವೆಂಪು ರಾಮಾಯಣವನ್ನು ಸೃಷ್ಠಿಸಲಿಲ್ಲ. ರಾಮಾಯಣವೇ ಕುವೆಂಪು ಅವರನ್ನು ಸೃಷ್ಠಿಸಿದೆ ಎಂದು ತಮ್ಮ ಬರಹದಲ್ಲಿ ತಿಳಿಸಿದರು ಎಂದರು.
ಜಿಲ್ಲಾ ಕನ್ನಡ ಜಾನಪದ ಪರಿಷತ್ ಸಂಚಾಲಕ ತುರುವನಹಳ್ಳಿ ಟಿ.ರೇಣುಕಪ್ಪ ಮಾತನಾಡಿ, ಶಿಕ್ಷಣವೆಂದರೆ ನೌಕರಿಗಾಗಿ, ರ್ಯಾಂಕುಗಳಿಸುವುದಕ್ಕಾಗಿ ಸಿದ್ಧವಸ್ತು ತಯಾರಿಸುವ ಕಾರ್ಖಾನೆಗಳಲ್ಲ. ಅದರ ಬದಲಾಗಿ ಸಂಸ್ಕಾರಯುತ ಮಕ್ಕಳನ್ನು ತಯಾರಿಸಬೇಕು. ಪ್ರತಿಯೊಬ್ಬರೂ ಸಹ ಆದರ್ಶ ಶಿಕ್ಷಕರಾದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ. ಹಾಗೆಯೇ ಮಕ್ಕಳಲ್ಲಿ ಸಂಸ್ಕಾರ ಬೆಳೆಯಲು ಸಾಧ್ಯ ಎಂದು ತಿಳಿಸಿದರು.
ಕೊಪ್ಪ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಚಾವಲ್ಮನೆ ಸುರೇಶ್ ನಾಯಕ್ ಅವರಿಗೆ ಮತ್ತು ಶೃಂಗೇರಿ ತಾಲ್ಲೂಕಿನ ಗಾಯಕ ರಾಘವೇಂದ್ರಕಿಗ್ಗ ಅವರಿಗೆ ಅಜ್ಜಂಪುರ ಜಿ.ಸೂರಿ ಪ್ರತಿಷ್ಠಾನ ವತಿಯಿಂದ ಕನ್ನಡ ಸಿರಿ ಪ್ರಶಸ್ತಿ ನೀಡಿ ಅಭಿನಂದಿಸಿ ಗೌರವಿಸಲಾಯಿತು. ಗಾಯಕ ರಾಘವೇಂದ್ರ ಕಿಗ್ಗ ಕುವೆಂಪು ಅವರ ಸ್ಮರಣಾರ್ಥ ಕುವೆಂಪು ಅವರ ಕವನಗಳ್ಲು ಸುಶ್ರಾವ್ಯವಾಗಿ ಹಾಡಿ ಸಭಿಕರನ್ನು ರಂಜಿಸಿದರು. ಜಿಲ್ಲಾ ಸಿರಿಗನ್ನಡ ವೆದಿಕೆ ಸಂಚಾಲಕ ಸರಸ್ವತಿಪುರ ಎಸ್.ಎಲ್.ಮಂಜುನಾಥ್, ವಿನೋದ ಶಿವಕುಮಾರ್, ಮಾರುತಿ, ರಾಜೇಶ್, ಅರ್ಪಿತ, ಪ್ರೀತಿ ಮಾತನಾಡಿದರು.
ಪಟ್ಟಣಗೆರೆ ಸರ್ಕಾರಿ ಪಿಯು ಕಾಲೇಜು ಪ್ರಾಂಶುಪಾಲರಾದ ಕೆ.ಸುಧಾಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಪಿ.ರಂಗಸ್ವಾಮಿ, ರಾಜ್ಯಶಾಸ್ತ್ರ ಉಪನ್ಯಾಸಕಾರದ ಎಸ್.ಎಲ್.ಮಮತ ಉಪಸ್ಥಿತರಿದ್ದರು.







