ಅಲ್ಪಸಂಖ್ಯಾತರ ಗುರಿಯಾಗಿಸಿ ನಡೆಯುತ್ತಿರುವ ದಾಳಿಗಳ ಬಗ್ಗೆ ಆತಂಕ: ಮಾಜಿ ಉನ್ನತ ಅಧಿಕಾರಿಗಳಿಂದ ಪ್ರಧಾನಿಗೆ ಪತ್ರ
ಹೊಸದಿಲ್ಲಿ,ಜ.31: ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ದೇಶದಲ್ಲಿ ನಡೆಯುತ್ತಿರುವ ವಿವೇಚನಾರಹಿತ ಹಿಂಸೆ ಹಾಗೂ ಕಾನೂನು ಜಾರಿ ಸಂಸ್ಥೆಗಳು ಈ ಘಟನೆಗಳಿಗೆ ತೋರುತ್ತಿರುವ ಅನಾಸ್ಥೆಯ ಬಗ್ಗೆ ತಮ್ಮ ತೀವ್ರ ಆತಂಕ ವ್ಯಕ್ತಪಡಿಸಿ ಸುಮಾರು 67 ಮಂದಿ ನಿವೃತ್ತ ಅಧಿಕಾರಿಗಳು ಬಹಿರಂಗ ಪತ್ರ ಬರೆದಿದ್ದಾರೆ. ಎಲ್ಲಾ 67 ಮಂದಿ ಅಧಿಕಾರಿಗಳು ಈ ಪತ್ರಕ್ಕೆ ಸಹಿ ಹಾಕಿದ್ದು ರಾಜಸ್ಥಾನದಲ್ಲಿ ನಡೆದ ಪೆಹ್ಲೂ ಖಾನ್ ಹತ್ಯೆಯಿಂದ ಹಿಡಿದು ಕಳೆದ ವರ್ಷ ನಡೆದ ಐದು ಘಟನೆಗಳನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿಯಿಂದ ಸ್ಪಷ್ಟ ಪ್ರತಿಕ್ರಿಯೆ ಕೇಳಿದ್ದಾರಲ್ಲದೆ ಘಟನೆಗೆ ಕಾರಣೀಕರ್ತರಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಈ ಪತ್ರಕ್ಕೆ ಸಹಿ ಹಾಕಿದವರಲ್ಲಿ ಮಾಜಿ ಆರೋಗ್ಯ ಕಾರ್ಯದರ್ಶಿಗಳಾದ ಕೇಶವ್ ದೇಸಿರಾಜ ಹಾಗೂ ಕೆ. ಸುಜಾತ ರಾವ್, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಮಾಜಿ ಕಾರ್ಯದರ್ಶಿ ಭಾಸ್ಕರ್ ಘೋಷ್, ಮಾಜಿ ಮುಖ್ಯ ಮಾಹಿತಿ ಆಯುಕ್ತ ವಜಾಹತ್ ಹಬೀಬುಲ್ಲಾ, ಮಾಜಿ ಐಟಿ ಕಾರ್ಯದರ್ಶಿ ಬೃಜೇಶ್ ಕುಮಾರ್ ಮತ್ತು ಸಾಮಾಜಿಕ ಕಾರ್ಯರ್ಕರಾದ ಹರ್ಷ ಮಂದರ್ ಹಾಗೂ ಅರುಣಾ ರಾಯ್ ಸೇರಿದ್ದಾರೆ.
ಮುಸ್ಲಿಮರಿಗೆ ಆಸ್ತಿ ಮಾರಾಟ ಅಥವಾ ಅವರಿಗೆ ಬಾಡಿಗೆಗೆ ಮನೆಗಳನ್ನು ನೀಡಲು ಇರುವ ಸಂಘಟಿತ ವಿರೋಧದ ಘಟನೆಗಳನ್ನೂ ಪತ್ರದಲ್ಲಿ ಉಲ್ಲೇಖಿಸಲಾಗಿದ್ದು “ಪ್ರತಿ ದಿನ ಮುಸ್ಲಿಮರು ಈ ರೀತಿ ಹಾಗೂ ಇನ್ನಿತರ ರೀತಿಗಳಲ್ಲಿ ಎದುರಿಸುತ್ತಿರುವ ಅವಮಾನಗಳಿಂದ ಸಮುದಾಯದಲ್ಲಿ ಅಸಮಾಧಾನದ ವಾತಾವರಣ ಸೃಷ್ಟಿಯಾಗಿ ಈಗಾಗಲೇ ಇರುವ ಕೆಟ್ಟ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಬಹುದು'' ಎಂದು ಪತ್ರದಲ್ಲಿ ಹೇಳಲಾಗಿದೆ. ಸತ್ನಾದಲ್ಲಿ ಕ್ಯಾರೋಲ್ ಹಾಡುತ್ತಿದ್ದ ತಂಡವನ್ನು ಪೊಲೀಸರು ವಶಪಡಿಸಿಕೊಂಡ ಘಟನೆಯನ್ನೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.