ಮೂಡಿಗೆರೆ ತಾಪಂ ಅಧ್ಯಕ್ಷ ಕೆ.ಸಿ.ರತನ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ
![ಮೂಡಿಗೆರೆ ತಾಪಂ ಅಧ್ಯಕ್ಷ ಕೆ.ಸಿ.ರತನ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಮೂಡಿಗೆರೆ ತಾಪಂ ಅಧ್ಯಕ್ಷ ಕೆ.ಸಿ.ರತನ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ](https://www.varthabharati.in/sites/default/files/images/articles/2018/01/31/thapam sabhe.jpg)
ಮೂಡಿಗೆರೆ, ಜ.31:ಎಂಜಿನಿಯರ್ಗೆ ಶೇ.3 ರಷ್ಟು ಹಣ ಕೊಡದಿದ್ದರೆ ಫೈಲ್ ಮುಟ್ಟುವುದಿಲ್ಲ ಎನ್ನುವ ಆರೋಪವಿದೆ. ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ಎಂಎಲ್ಸಿ ಎಂ.ಕೆ.ಪ್ರಾಣೇಶ್ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಬುಧವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಪಂ ಅಧ್ಯಕ್ಷ ಕೆ.ಸಿ.ರತನ್ ಅಧ್ಯಕ್ಷತೆಯಲ್ಲಿ ನಡೆದ ತಾಪಂ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಕಮಿಷನ್ ದಂದೆಯನ್ನು ಬಿಟ್ಟು ಮೊದಲು ಜನಪರವಾದ ಕೆಲಸ ಮಾಡಿ. ಪಾಪದವರ ಶಾಪ ತಟ್ಟಿದರೆ ಮುಂದೆ ನೀವೇ ಅನುಭವಿಸುತ್ತೀರಿ. ಜನರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಜನರು ತಿರುಗಿ ಬೀಳುವುದಕ್ಕೂ ಮುನ್ನ ಎಚ್ಚೆತ್ತುಕೊಂಡು ಪಾರದರ್ಶಕ ಕೆಲಸ ಮಾಡಿ ಎಂದು ಎಚ್ಚರಿಕೆ ನೀಡಿದರು.
ಆರಂಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಅನುಪಾಲನೆ ವರದಿ ಸಲ್ಲಿಸುವಾಗ ಉಪ ತಹಸೀಲ್ದಾರ್ ಚೇತನ್ ಮಾತನಾಡಿ, 94ಸಿ ಯಲ್ಲಿ 9642 ಅರ್ಜಿ ಬಂದಿದ್ದು, ಅದರಲ್ಲಿ 347 ಹಕ್ಕುಪತ್ರ ವಿತರಿಸಲಾಗಿದೆ. ಈಗಾಗಲೇ 1060 ಫಲಾನುಭವಿಗೆ ಹಕ್ಕು ಪತ್ರ ನೀಡಲು ತಯಾರು ಮಾಡಲಾಗಿದೆ. ಉಳಿದ 8235 ಅರ್ಜಿ ಪರಿಶೀಲಿಸಿದ ನಂತರ ಹಕ್ಕು ಪತ್ರ ನೀಡಲು ಕ್ರಮಕೈಗೊಳ್ಳಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.
ಎಂಜಿಎಂ ವೈದ್ಯಾಧಿಕಾರಿ ಡಾ.ಯೋಗೇಶ್ ಮಾತನಾಡಿ, ಆಸ್ಪತ್ರೆ ಆವರಣದಲ್ಲಿ ಹೊಸ ಕಟ್ಟಡ ಪೂರ್ಣಗೊಳ್ಳುವ ಹಂತದಲ್ಲಿದೆ. ವಿದ್ಯುತ್ ವೈರಿಂಗ್ ಕಾಮಗಾರಿ ನಡೆಯುತ್ತಿದೆ. ಐಸಿಯುನಲ್ಲಿ ಕೆಲಸ ಮಾಡಲು 3 ವೈದ್ಯರು ಅವಶ್ಯಕತೆ ಇದೆ. ಅಲ್ಲದೆ. 3 ನರ್ಸ್, ಒಬ್ಬರು ಪಿಜಿಷನ್, ಸ್ಕಾನಿಂಗ್ ಯಂತ್ರ ಅವಶ್ಯಕತೆ ಇದೆ ಎಂದು ಮಾಹಿತಿ ನೀಡಿದರು. ಇದರಂತೆ ವಿವಿಧ ಇಲಾಖೆ ಅಧಿಕಾರಿಗಳು ಅನುಪಾಲನೆ ವರದಿ ಮಂಡಿಸಿದರು.
ತಾಪಂ ಅಧ್ಯಕ್ಷ ಕೆ.ಸಿ.ರತನ್ ಮಾತನಾಡಿ, ತಾ.ಪಂ. ಅನುದಾನದಲ್ಲಿ 172 ವಿವಿಧ ಕಾಮಗಾರಿ ನಡೆಸಲು ಕ್ರಿಯಾಯೋಜನೆ ಪಟ್ಟಿ ತಯಾರು ಮಾಡಲು ಜಿ.ಪಂ. ಎಂಜಿನಿಯರ್ಗೆ ತಿಳಿಸಲಾಗಿತ್ತು. ಆದರೆ 111 ಕಾಮಗಾರಿಯ ಕ್ರಿಯಾಯೋಜನೆ ಪಟ್ಟಿಯನ್ನು ನಮಗೆ ಕಳುಹಿಸಿದ್ದು, ಉಳಿದ 61 ಕಾಮಗಾರಿಯ ಪಟ್ಟಿ ಇಂದಿಗೂ ಸಲ್ಲಿಸಿಲ್ಲ. ಚುನಾವಣೆ ಹತ್ತಿರ ಬಂದರೆ ಅಗ್ರಿಮೆಂಟ್ ಮಾಡಲಾಗುವುದಿಲ್ಲ. ಬಂದ ಹಣ ವಾಪಾಸು ಹೋಗುತ್ತದೆ. ಇದರ ಹೊಣೆ ಎಂಜಿನಿಯರ್ಗಳೆ ಹೊತ್ತುಕೊಳ್ಳಬೇಕಾಗುತ್ತದೆ. ಗ್ರಾ.ಪಂ.ಯಲ್ಲಿ ಎನ್ಆರ್ಐಜಿ ಕೆಲಸ ಮಾಡುವವರು ನುರಿತ ಕಂಪ್ಯೂಟರ್ ತಜ್ಞರನ್ನೇ ನೇಮಕ ಮಾಡಿಕೊಳ್ಳಬೇಕು. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಎಲ್ಲಾ ಗ್ರಾ.ಪಂ. ಪಿಡಿಒ ಬಂದರೆ ಅನುಕೂಲವಾಗುತ್ತದೆ. ಪ್ರತಿ ಸಭೆಗೆ ಪಿಡಿಒಗಳನ್ನು ಕರೆಸಬೇಕೆಂದು ಸಂಬಂಧಿಸಿದ ಅಧಿಕಾರಿಗೆ ಸೂಚಿಸಿದರು.
ತಾ.ಪಂ. ಸದಸ್ಯ ಸುಂದರ್ ಕುಮಾರ್ ಮಾತನಾಡಿ, ಗೋಣಿಬೀಡು ಸೇರಿದಂತೆ ತಾಲೂಕಿನಲ್ಲಿ ಬಹುತೇಕ ಕಡೆ ಕುಡಿಯುವ ನೀರಿಗಾಗಿ ಬೋರ್ ತೋಡಲಾಗಿದೆ. ಆದರೆ ಅದಕ್ಕೆ ವಿದ್ಯುತ್, ಪೈಪ್, ಮೋಟಾರು ಅಳವಡಿಸುವವರು ಯಾರು? ಸುಮ್ಮನೆ ಬೋರ್ ಕೊರೆಸಿ ಮುಚ್ಚಳ ಹಾಕಿಬಿಟ್ಟರೆ ಜನರು ನೀರು ಕುಡಿಯುವುದಾದರೂ ಹೇಗೆ? ಸರಕಾರ ಕುಡಿಯುವ ನೀರಿಗಾಗಿ ಕೇವಲ ಬೋರ್ ಕೊರೆಸುವುದಕ್ಕೆ ಮಾತ್ರ ಹಣ ಕೊಟ್ಟರೆ ಸಾಧ್ಯವಾಗುವುದಿಲ್ಲ. ವಿದ್ಯುತ್ ಮತ್ತು ಪೈಪ್ ಅಳವಡಿಕೆಗೆ ಹಣ ನೀಡಬೇಕೆಂದು ತಾ.ಪಂ. ನಿರ್ಣಯ ಕೈಗೊಂಡು ಸರಕಾರಕ್ಕೆ ಕಳುಹಿಸಬೇಕೆಂದು ಮನವಿ ಮಾಡಿದರು.
ತಾ.ಪಂ. ಸದಸ್ಯ ಹಿತ್ತಲಮಕ್ಕಿ ರಾಜೇಂದ್ರ ಮಾತನಾಡಿ, ಮುಖ್ಯಮಂತ್ರಿ ಸಿದ್ದಾರಾಮಯ್ಯ ಮೂಡಿಗೆರೆಗೆ ಆಗಮಿಸಿದ್ದಾಗ ತಾ.ಪಂ. ಸದಸ್ಯರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕಿದ್ದಾರೆ. ಆದರೆ ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯನೂ ಅಲ್ಲದಂತಹ ವ್ಯಕ್ತಿಗಳನ್ನು ಕೂರಿಸಿ, ಚುನಾಯಿತ ಪ್ರತಿನಿಧಿಯನ್ನು ಕೂರಿಸದೇ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿ ಅವಮಾನಿಸಲಾಗಿದೆ. ಈ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗಳಿಗೆ ಕಳುಹಿಸಬೇಕೆಂದು ಒತ್ತಾಯಿಸಿದರು. ಇದಕ್ಕೆ ಅಧ್ಯಕ್ಷರು ಸೇರಿದಂತೆ ಸರ್ವ ಸದಸ್ಯರು ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತ ಶಿಷ್ಟಾಚಾರ ಉಲ್ಲಂಘನೆ ಮಾಡಿದೆ ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಈ ವೇಳೆ ಕೈಗಾರಿಕಾ ಇಲಾಖೆ ವತಿಯಿಂದ ಗಾರೆ ಮತ್ತು ಮರಕೆಲಸ ಮಾಡುವ 19 ಫಲಾನುಭವಿಗಳಿಗೆ ಪರಿಕರವನ್ನು ವಿತರಿಸಲಾಯಿತು.
ತಾ.ಪಂ. ಉಪಾಧ್ಯಕ್ಷೆ ಸವಿತಾ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ, ಸದಸ್ಯರಾದ ದೇವರಾಜು, ವೀಣಾ ಉಮೇಶ್, ರಾಜೇಂದ್ರ ಪ್ರಸಾದ್, ವೇದಾವತಿ ಲಕ್ಷ್ಮಣ್, ಭಾರತೀ ರವೀಂದ್ರ, ಪ್ರಮೀಳ, ತಾಪಂ ಇಓ ತಾರನಾಥ್ ಮತ್ತಿತರಿದ್ದರು.