ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ : ಸವಿತಾ ಬ್ರಿಗೇಡ್ನಿಂದ ಖಂಡನೆ

ಚಿಕ್ಕಮಗಳೂರು, ಜ.31:ಬೀದರ್ ವಿದ್ಯಾರ್ಥಿನಿಯನ್ನು ಅಮಾನುಷವಾಗಿ ಅತ್ಯಾಚಾರ ಹಾಗೂ ಕೊಲೆ ಮಾಡಿರುವುದನ್ನು ಖಂಡಿಸಿ ಸವಿತಾ ಬ್ರಿಗೇಡ್ನಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಸವಿತಾ ಬ್ರಿಗೇಡ್ನ ಸಂಚಾಲಕ ವಿಶ್ವನಾಥ್ ಮಾತನಾಡಿ, ಜ.27ರಂದು ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ಕೋಸಂ ಗ್ರಾಮದಲ್ಲಿ ಅಕ್ಕಮಹಾದೇವಿ ಕಾಲೇಜಿನಲ್ಲಿ ದ್ವಿತೀಯ ಬಿ.ಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯನ್ನು ಪ್ರೀತಿ ನಿರಾಕರಿಸಿದ ಕಾರಣ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಶಂಸುದ್ದೀನ್ ಎಂಬ ಯುವಕ ಮತು ಆತನ ಸಹಚರರು ಸೇರಿಕೊಂಡು ಅತ್ಯಾಚಾರವೆಸಗಿ, ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಮಾನವೀಯತೆ ಇರುವ ಪ್ರತಿಯೊಬ್ಬರು ತಲೆ ತಗ್ಗಿಸುವಂತದಾಗಿದೆ ಎಂದರು.
ರಾಜ್ಯ ಸರ್ಕಾರ ಮತ್ತು ರಾಜ್ಯ ಗೃಹ ಇಲಾಖೆ ಇಂತಹ ಅಮಾನವೀಯ ಘಟನೆಗಳನ್ನು ಗಂಭೀರವಾಗಿ ಪರಿಗಣಿಸದೆ ಇರುವುದರಿಂದ ಸಮಾಜದಲ್ಲಿ ಹೆಚ್ಚೆಚ್ಚು ಮರುಕಳಿಸುತ್ತಿವೆ. ಇದು ಸಾರ್ವಜನಿಕರಿಗೆ ಸಮಾಜದಲ್ಲಿ ಕಾನೂನಿನ ಸುವ್ಯವಸ್ಥೆಯ ಬಗ್ಗೆ ಸಂಶಯ ಮೂಡುವಂತೆ ಮಾಡುತ್ತಿದೆ. ಕೂಡಲೇ ಶಂಸುದ್ದೀನ್ನ ಸಹಚರರನ್ನು ಬಂಧಿಸುವುದಲ್ಲದೆ, ಇಂತಹ ವಿಕೃತ ಮನಸ್ಸಿನ ಯುವಕರಿಗೆ ಪಾಠವಾಗುವಂತೆ ಕಠಿಣ ಶಿಕ್ಷೆಯಾಗುವಂತೆ ಕಾನೂನು ರೂಪಿಸಬೇಕು.
ಅಲ್ಲದೆ ವಿದ್ಯಾರ್ಥಿನಿಯ ಕುಟುಂಬಕ್ಕೆ ದಾನಮ್ಮನ ಕುಟುಂಬಕ್ಕೆ ನೀಡಿದಂತೆ ಹತ್ತು ಲಕ್ಷ ರೂಪಾಯಿಗಳ ಪರಿಹಾರ, ಹಾಗೂ ಅವರ ಕುಟುಂಬದ ಒಬ್ಬರಿಗೆ ಸರ್ಕಾರಿ ಕೆಲಸವನ್ನು ನೀಡಬೇಕು. ಅಲ್ಲದೆ ಇಂತಹ ಪ್ರಕರಣಗಳು ರಾಜ್ಯದಲ್ಲಿ ಮತ್ತೆ ನಡೆಯದಂತೆ ಎಚ್ಚರವಹಿಸಿ ಜನ ಸಾಮಾನ್ಯರು ನೆಮ್ಮದಿಯಿಂದ ಜೀವನ ಮಾಡುವಂತೆ ಮಾಡಬೇಕೆಂದು ಒತ್ತಾಯಿಸಿದರು.
ಈ ವೇಳೆ ಸವಿತಾ ಬ್ರಿಗೇಡ್ನ ಸಂಚಾಲಕ ಜೆ.ಸತ್ಯನಾರಾಯಣ, ಡೋಲ್ ಚಂದ್ರು, ಜೆಸಿಐ ಅಧ್ಯಕ್ಷ ಕೆ.ಇಕ್ಬಾಲ್, ದಲಿತ್ ಜನ ಸೇನಾ ಜಿಲ್ಲಾಧ್ಯಕ್ಷ ಅನಿಲ್ ಆನಂದ್, ಅಂಬಳೆ ಸಿದ್ದರಾಜ್, ಪುರುಷೋತ್ತಮ್, ತೇಗೂರು ವಿಜಯ್, ಆನಂದ್ ಮುಂತಾದವರಿದ್ದರು.







