ಕೇಂದ್ರ ಸರಕಾರದ ವಿರುದ್ಧ ಬಿಎಸ್ಎನ್ಎಲ್ ನೌಕರರ ಪ್ರತಿಭಟನೆ

ಮಡಿಕೇರಿ,ಜ.31 : ದೇಶದಲ್ಲಿರುವ 75 ಸಾವಿರ ಬಿಎಸ್ಎನ್ಎಲ್ ಮೊಬೈಲ್ ಟವರ್ಗಳನ್ನು ಖಾಸಗಿಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಸರ್ಕಾರಿ ಆಸ್ತಿಯನ್ನು ಖಾಸಗಿಯವರಿಗೆ ಹಸ್ತಾಂತರಿಸಿ ಬಿಎಸ್ಎನ್ಎಲ್ ಅನ್ನು ದಿವಾಳಿ ಮಾಡಲು ಕೇಂದ್ರ ಸರ್ಕಾರ ಹುನ್ನಾರ ನಡೆಸಿದೆ ಎಂದು ಆರೋಪಿಸಿ ಮಡಿಕೇರಿಯ ಕೇಂದ್ರ ಕಚೇರಿ ಎದುರು ಬಿಎಸ್ಎನ್ಎಲ್ ನೌಕರರು ಮತ್ತು ಅಧಿಕಾರಿಗಳ ಸಂಘದ ಪದಾಧಿಕಾರಿಗಳು ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಫೆ.3ರವರೆಗೆ ಧರಣಿ ಸತ್ಯಾಗ್ರಹದ ಮೂಲಕ ಕೇಂದ್ರ ಸರ್ಕಾರದ ನಿಲುವನ್ನು ವಿರೋಧಿಸಿ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.
ಕೇಂದ್ರ ಸರ್ಕಾರ ಖಾಸಗೀಕರಣದ ಮೂಲಕ ಕಾರ್ಪೋರೇಟ್ ಕಂಪೆನಿಗಳಿಗೆ ಮಣೆ ಹಾಕಲು ಹೊರಟಿದೆ. ಖಾಸಗಿಕರಣದಿಂದ ಶೇ.50ರಷ್ಟು ಲಾಭಾಂಶ ಬಿಎಸ್ಎನ್ಎಲ್ಗೆ ನಷ್ಟವಾಗಲಿದ್ದು, ಸಂಸ್ಥೆ ಮುಚ್ಚುವ ಹಂತ ತಲುಪಲಿದೆ ಎಂದು ಧರಣಿ ನಿರತರು ಆರೋಪಿಸಿದರು.
2017ರ ಜನವರಿಯಿಂದ ವೇತನ ಹೆಚ್ಚಳ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಈ ಹಿಂದೆ ಭರವಸೆ ನೀಡಿತ್ತಾದರೂ ಇಂದಿಗೂ ಅದನ್ನು ಈಡೇರಿಸಿಲ್ಲವೆಂದು ಬಿಎಸ್ಎನ್ಎಲ್ ನೌಕರರು ಅಸಮಾಧಾನ ವ್ಯಕ್ತಪಡಿಸಿದರು.
ಬಿಎಸ್ಎನ್ಎಲ್ ನೌಕರರು ಮತ್ತು ಅಧಿಕಾರಿಗಳ ಸಂಘದ ಪ್ರಮುಖರಾದ ಕುಶಾಲಪ್ಪ, ಅಂತೋಣಿ, ಕೃಷ್ಣ, ಶಿವಣ್ಣ ಸೇರಿದಂತೆ ಜಿಲ್ಲೆಯ ವಿವಿಧ ಶಾಖೆಗಳ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.





