ಜಮ್ಮು ಕಾಶ್ಮೀರದ ನಾಲ್ಕು ನದಿಗಳು ‘ರಾಷ್ಟ್ರೀಯ ಜಲಮಾರ್ಗ’
ಜಮ್ಮು, ಜ.31: ಜಮ್ಮು ಮತ್ತು ಕಾಶ್ಮೀರದ ನಾಲ್ಕು ಪ್ರಮುಖ ನದಿಗಳಾದ ಝೇಲಂ, ಚೆನಾಬ್, ಇಂಡಸ್ ಮತ್ತು ರಾವಿ ನದಿಗಳನ್ನು ಕೇಂದ್ರ ಸರಕಾರ ರಾಷ್ಟ್ರೀಯ ಜಲಮಾರ್ಗವೆಂದು ಘೋಷಿಸಿದ್ದು, ಈ ಮೂಲಕ ಜಲಸಾರಿಗೆ ಹಾಗೂ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯಲಿದೆ ಎಂದು ರಾಜ್ಯಸರಕಾರ ತಿಳಿಸಿದೆ.
ಈ ನಾಲ್ಕು ನದಿಗಳನ್ನು ಕ್ರಮಬದ್ಧ ರೀತಿಯಲ್ಲಿ ಅಭಿವೃದ್ಧಿಗೊಳಿಸಲಾಗುವುದು. ಈ ರಾಷ್ಟ್ರೀಯ ಜಲಮಾರ್ಗಗಳ ಅಭಿವೃದ್ಧಿಯಿಂದ ದೇಶೀಯ ಜಲಸಾರಿಗೆ ವ್ಯವಸ್ಥೆಗೆ ಹಾಗೂ ಜಮ್ಮು ಕಾಶ್ಮೀರ ರಾಜ್ಯದ ಸಂಭಾವ್ಯ ಪ್ರವಾಸೋದ್ಯಮ ಸಾಮರ್ಥ್ಯವನ್ನು ಬಳಸಿಕೊಳ್ಳಲು ಪ್ರೋತ್ಸಾಹ ದೊರೆತಂತಾಗುವುದು . ಅಲ್ಲದೆ ಈ ಪ್ರದೇಶದ ಜನರ ಸಾಮಾಜಿಕ -ಆರ್ಥಿಕ ರೂಪುರೇಷೆ ಬದಲಾಗಲಿದೆ ಎಂದು ರಾಜ್ಯದ ಸಾರ್ವಜನಿಕ ಆರೋಗ್ಯ, ಇಂಜಿನಿಯರಿಂಗ್, ನೀರಾವರಿ ಹಾಗೂ ಪ್ರವಾಹ ನಿಯಂತ್ರಣ ಇಲಾಖೆಯ ಸಚಿವ ಶ್ಯಾಮ್ಲಾಲ್ ಚೌಧರಿ ಹೇಳಿದ್ದಾರೆ.
ದೇಶೀಯ ಸಮುದ್ರಯಾನ ಹಾಗೂ ಟರ್ಮಿನಲ್ಗಳ ನಿರ್ಮಾಣದ ನಿಟ್ಟಿನಲ್ಲಿ ದೇಶೀಯ ಜಲಮಾರ್ಗ ಪ್ರಾಧಿಕಾರ ಸಲ್ಲಿಸಿರುವ ಕಾರ್ಯಸಾಧ್ಯತೆ- ತಥಾ- ವಿಸ್ತೃತ ಯೋಜನಾ ವರದಿಯನ್ನು ರಾಜ್ಯ ಸರಕಾರ ಪರಿಶೀಲಿಸುತ್ತಿದೆ.
ಎಂದು ಸಚಿವ ಚೌಧರಿ ಹೇಳಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಥಮ ಹಂತದ ಸಮಗ್ರ ಪ್ರವಾಹ ನಿರ್ವಹಣಾ ಯೋಜನೆಯಡಿ ಝೇಲಂ ನದಿಗೆ ಮೀಸಲಿಡಲಾದ 399.29 ಕೋಟಿ ರೂ. ಮೊತ್ತದಲ್ಲಿ 196.12 ಕೋಟಿ ರೂ. ಬಿಡುಗಡೆಯಾಗಿದ್ದು, ಇದರಲ್ಲಿ 177.20 ಕೋಟಿ ರೂ. ಮೊತ್ತದ ಕಾಮಗಾರಿ ನಡೆದಿದೆ . ಝೇಲಂ ನದಿಗೆ ಎರಡನೇ ಸಮಗ್ರ ಪ್ರವಾಹ ನಿರ್ವಹಣಾ ಯೋಜನೆಯಡಿ 1684.60 ಕೋಟಿ ರೂ. ಮೊತ್ತದ ಕಾಮಗಾರಿಯನ್ನು ಕೇಂದ್ರ ಸರಕಾರದ ಜಲಸಂಪನ್ಮೂಲ ಇಲಾಖೆಯ ಅಧಿಕೃತ ಏಜೆನ್ಸಿ ‘ವಾಪ್ಕೋಸ್’ಗೆ ವಹಿಸಲಾಗಿದ್ದು ಮೂರು ತಿಂಗಳೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಶಹಾಪುರ್ ಕಾಂಡಿ ಅಣೆಕಟ್ಟು ನಿರ್ಮಾಣದ ವಿಷಯದಲ್ಲಿ ಪಂಜಾಬ್ ಸರಕಾರದೊಡನೆ ಇದ್ದ ವಿವಾದ ಬಗೆಹರಿದಿದ್ದು ಎರಡೂ ರಾಜ್ಯಗಳು ಹೊಸ ಒಪ್ಪಂದವನ್ನು ಅಂಗೀಕರಿಸಿವೆ ಎಂದರು. ಜಮ್ಮು ಪ್ರದೇಶದಲ್ಲಿ ಚೆನಾಬ್ ನದಿ ಪಾತ್ರದಲ್ಲಿ ಪ್ರವಾಹ ಸುರಕ್ಷೆ ಯೋಜನೆಗಾಗಿ 2,314 ಕೋಟಿ ರೂ. ವೆಚ್ಚದ ಯೋಜನಾ ವರದಿಯನ್ನು ರೂಪಿಸಲಾಗಿದ್ದು ಇದನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಸಚಿವರು ತಿಳಿಸಿದರು.