ಬಿಜೆಪಿಯ ಕಾರ್ಯಸೂಚಿಗಳನ್ನು ಬುಡಮೇಲು ಮಾಡುತ್ತೇವೆ : ಡಿ.ಕೆ.ಶಿವಕುಮಾರ್
ಕೆಪಿಸಿಸಿ ಪ್ರಚಾರ ಸಮಿತಿಯ ಮೊದಲ ಸಭೆ
ಬೆಂಗಳೂರು, ಜ.31: ಹೊರ ರಾಜ್ಯದವರನ್ನು ಕರೆಸಿ ನಮ್ಮ ಸರಕಾರದ ವಿರುದ್ಧ ಆರೋಪಗಳನ್ನು ಮಾಡಿಸುವ ಮೂಲಕ ಬಿಜೆಪಿ ಜಾದೂ ಮಾಡಲಿಕ್ಕೆ ಹೊರಟಿದೆ. ಅವರ ಎಲ್ಲ ಕಾರ್ಯಸೂಚಿಗಳನ್ನು ಬುಡಮೇಲು ಮಾಡಲಾಗುವುದು ಎಂದು ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬುಧವಾರ ನಗರದ ಖಾಸಗಿ ಹೊಟೇಲ್ನಲ್ಲಿ ನಡೆದ ಕೆಪಿಸಿಸಿ ಪ್ರಚಾರ ಸಮಿತಿಯ ಮೊದಲ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯ ಯಾವ ಕಾರ್ಯಸೂಚಿಗಳು ಇಲ್ಲಿ ಯಶಸ್ವಿಯಾಗುವುದಿಲ್ಲ. ನಮ್ಮ ಸಾಮಾನ್ಯ ಕಾರ್ಯಕರ್ತನೂ ಪಕ್ಷ ಸಂಘಟನೆ ಮಾಡಲಿದ್ದಾನೆ ಎಂದರು.
ಸಾಕಷ್ಟು ಸಮೀಕ್ಷೆಗಳು ಈ ಬಾರಿ ಅತಂತ್ರ ವಿಧಾನಸಭೆ ರಚನೆಯಾಗಲಿದೆ ಎಂದು ಹೇಳುತ್ತಿವೆ. ಆದರೆ, ಅದೆಲ್ಲವನ್ನೂ ರಾಜ್ಯದ ಮತದಾರ ಸುಳ್ಳಾಗಿಸಲಿದ್ದಾನೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
2013ರಲ್ಲಿ ಸರಕಾರ ರಚನೆ ಮಾಡಿದಾಗಿನಿಂದ ಸರಕಾರದ ಕಾರ್ಯಕ್ರಮಗಳನ್ನ ಜನರಿಗೆ ತಿಳಿಸುತ್ತಲೇ ಬಂದಿದ್ದೇವೆ. ಚುನಾವಣೆಯ ಹೊಸ್ತಿಲಿನಲ್ಲಿ ಪ್ರಚಾರವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು. ಜಿಲ್ಲಾ, ಬ್ಲಾಕ್, ಬೂತ್ ಮಟ್ಟದಲ್ಲೂ ಪ್ರಚಾರ ಸಮಿತಿ ರಚನೆ ಮಾಡಲಾಗುವುದು. ಪ್ರತಿಯೊಬ್ಬ ಮತದಾರನಿಗೂ ತಲುಪುವ ಕೆಲಸವನ್ನು ಪ್ರಚಾರ ಸಮಿತಿ ಮಾಡಲಿದೆ ಎಂದು ಶಿವಕುಮಾರ್ ತಿಳಿಸಿದರು.
ರಾಜ್ಯ ಸರಕಾರ ಹಾಗೂ ಕಾಂಗ್ರೆಸ್ ಪಕ್ಷದ ವತಿಯಿಂದ ಈಗಾಗಲೆ 170 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಪೂರ್ಣಗೊಳಿಸಲಾಗಿದೆ. ರಾಜ್ಯ ಮಟ್ಟದ ಪ್ರಚಾರದ ರೀತಿಯಲ್ಲೆ ಆಯಾ ಕ್ಷೇತ್ರದ ಸಮಸ್ಯೆ ಹಾಗೂ ಯೋಜನೆಯ ಬಗ್ಗೆ ಬೂತ್ ಮಟ್ಟದಲ್ಲೂ ಪ್ರಚಾರ ಮಾಡಲಾಗುವುದು ಎಂದು ಅವರು ಹೇಳಿದರು.
ಕೇಂದ್ರದ ಬಿಜೆಪಿ ಸರಕಾರದ ವೈಫಲ್ಯವನ್ನು ಜನರ ಬಳಿ ಪ್ರಚಾರ ಸಮಿತಿ ಮುಖಾಂತರ ತೆಗದುಕೊಂಡು ಹೋಗಲಾಗುವುದು. ಆಯಾ ಕ್ಷೇತ್ರದಲ್ಲಿ ಸ್ಥಳೀಯ ವಿಚಾರಗಳನ್ನಿಟ್ಟುಕೊಂಡು ಸಮಿತಿ ಕೆಲಸ ಮಾಡಲಿದೆ ಎಂದು ಶಿವಕುಮಾರ್ ತಿಳಿಸಿದರು.
ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ದೇವಸ್ಥಾನಗಳಿಗೆ ಭೇಟಿ ನೀಡುವುದು ಮತಗಳಿಕೆಗಾಗಿ ಅಲ್ಲ, ಅದು ಅವರವರ ಮನಸ್ಸಿಗೆ ಬಿಟ್ಟ ವಿಚಾರ. ರಾಷ್ಟ್ರಧ್ವಜ ನಮ್ಮ ಧರ್ಮ ಅಂತಾ ರಾಹುಲ್ಗಾಂಧಿ ಹೇಳಿದ್ದಾರೆ. ಕಾಂಗ್ರೆಸ್ ಕಚೇರಿಯೆ ನಮಗೆ ದೇವಸ್ಥಾನ. ಫೆ.10ಕ್ಕೆ ರಾಹುಲ್ಗಾಂಧಿ ರಾಜ್ಯಕ್ಕೆ ಭೇಟಿ ನೀಡಲಿದ್ದು, ಹಂಪಿಯ ವಿರೂಪಾಕ್ಷ ದೇವಸ್ಥಾನದ ದರ್ಶನ ಮಾಡಲಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.
ಇಂದು ನಡೆದ ಚುನಾವಣಾ ಸಮಿತಿಯ ಮೊದಲ ಸಭೆಯಲ್ಲಿ ಸಂಸದರಾದ ವೀರಪ್ಪಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ ಸಂಸತ್ ಅಧಿವೇಶನದ ಹಿನ್ನೆಲೆಯಲ್ಲಿ ಗೈರು ಹಾಜರಾಗಿದ್ದರು. ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಮಾಗಡಿಯ ಕಾರ್ಯಕ್ರಮದಲ್ಲಿದ್ದಾರೆ. ಶಾಸಕ ಅಂಬರೀಶ್ ಆರೋಗ್ಯ ಸಮಸ್ಯೆಯಿಂದ ಸಭೆಗೆ ಬಂದಿರಲಿಲ್ಲ. ಅವರು ನಮ್ಮ ಪಕ್ಷದ ಫೈರ್ ಬ್ರಾಂಡ್ ಇದ್ದ ಹಾಗೆ ಎಂದು ಅವರು ಹೇಳಿದರು.
ಎಂಐಎಂ ಅಧ್ಯಕ್ಷ ಅಸಾದುದ್ದೀನ್ ಉವೈಸಿ ಜೊತೆ ಬಿಜೆಪಿ ಹೊಂದಾಣಿಕೆ, ಮೈತ್ರಿ ಮಾಡಿಕೊಂಡಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಆದರೆ, ನಮಗೆ ಅಂತಹ ಸ್ಥಿತಿ ಇಲ್ಲ ಎಂದು ಶಿವಕುಮಾರ್ ತಿಳಿಸಿದರು.