ಕಾಸ್ ಗಂಜ್ ಹಿಂಸಾಚಾರದ ವರದಿ ಕೇಂದ್ರಕ್ಕೆ ರವಾನೆ
ಲಕ್ನೋ,ಜ.31: ಉತ್ತರ ಪ್ರದೇಶ ಸರಕಾರವು ಕಾಸ್ ಗಂಜ್ನಲ್ಲಿ ನಡೆದ ಕೋಮು ಹಿಂಸಾಚಾರ ಮತ್ತು ಈವರೆಗೆ ಕೈಗೊಳ್ಳಲಾಗಿರುವ ಕ್ರಮಗಳ ವಿವರಗಳನ್ನೊಳಗೊಂಡ ವರದಿಯೊಂದನ್ನು ಕೇಂದ್ರಕ್ಕೆ ಕಳುಹಿಸಿದೆ ಎಂದು ಅಧಿಕಾರಿಯೋರ್ವರು ಬುಧವಾರ ಇಲ್ಲಿ ತಿಳಿಸಿದರು. ಗಣತಂತ್ರ ದಿನದಂದು ನಡೆದ ಕೋಮು ಘರ್ಷಣೆಗಳಲ್ಲಿ ಓರ್ವ ಯುವಕ ಮೃತಪಟ್ಟು, ಇತರ ಇಬ್ಬರು ಗಾಯಗೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ 118 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ರಾಜ್ಯ ಸರಕಾರದ ವರದಿಯು ಬಂಧನಗಳು ಮತ್ತು ಚಂದನ್ ಗುಪ್ತಾ ಸಾವಿಗೆ ಕಾರಣವಾದ ಘಟನಾವಳಿಗಳ ವಿವರಗಳನ್ನೊಳಗೊಂಡಿದೆ.
ಪೊಲೀಸರು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ ಮತ್ತು ಹಿಂಸಾಚಾರವು ಪೂರ್ವ ಯೋಜಿತವಾಗಿತ್ತೇ ಎನ್ನುವುದನ್ನು ತಿಳಿದುಕೊಳ್ಳಲು ಎಲ್ಲ ಅಂಶಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ರಾಜ್ಯ ಸರಕಾರವು ಕೇಂದ್ರ ಗೃಹ ಸಚಿವಾಲಯಕ್ಕೆ ತಿಳಿಸಿದೆ.
ತಿರಂಗಾ ಬೈಕ್ ರ್ಯಾಲಿಯ ಬಳಿಕ ಕೋಮು ಹಿಂಸಾಚಾರ ಭುಗಿಲ್ಲೆದ್ದ ಸಂದರ್ಭದಲ್ಲಿ ಉದ್ರಿಕ್ತ ಗುಂಪುಗಳು ಕನಿಷ್ಠ ಮೂರು ಅಂಗಡಿಗಳು, ಒಂದು ಕಾರು ಮತ್ತು ಎರಡು ಬಸ್ಗಳಿಗೆ ಬೆಂಕಿಯನ್ನೂ ಹಚ್ಚಿದ್ದವು.