ಎಸೆಸೆಲ್ಸಿ-ಪಿಯುಸಿ ಪರೀಕ್ಷಾ ಏಕೀಕರಣ ನಿರ್ವಹಣಾ ವ್ಯವಸ್ಥೆಗೆ ರಾಜ್ಯ ಸಂಪುಟ ಅಸ್ತು
![ಎಸೆಸೆಲ್ಸಿ-ಪಿಯುಸಿ ಪರೀಕ್ಷಾ ಏಕೀಕರಣ ನಿರ್ವಹಣಾ ವ್ಯವಸ್ಥೆಗೆ ರಾಜ್ಯ ಸಂಪುಟ ಅಸ್ತು ಎಸೆಸೆಲ್ಸಿ-ಪಿಯುಸಿ ಪರೀಕ್ಷಾ ಏಕೀಕರಣ ನಿರ್ವಹಣಾ ವ್ಯವಸ್ಥೆಗೆ ರಾಜ್ಯ ಸಂಪುಟ ಅಸ್ತು](https://www.varthabharati.in/sites/default/files/images/articles/2018/01/31/T.B.Jayachandra.jpg)
ಬೆಂಗಳೂರು, ಜ.31: ಎಸೆಸೆಲ್ಸಿ ಸಾರ್ವತ್ರಿಕ ಪರೀಕ್ಷೆ ನಡೆಸುವ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹಾಗೂ ದ್ವೀತೀಯ ವರ್ಷದ ಪದವಿ ಪೂರ್ವ ಸಾರ್ವತ್ರಿಕ ಪರೀಕ್ಷೆ ನಡೆಸುವ ಪದವಿ ಪೂರ್ವ ಶಿಕ್ಷಣ ಇಲಾಖೆಯ ಪರೀಕ್ಷಾ ಏಕೀಕರಣ ನಿರ್ವಹಣಾ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕಗೊಳಿಸಿ ಪ್ರಶ್ನೆ ಪತ್ರಿಕೆ, ದತ್ತಾಂಶ ಕೋಶ, ಉತ್ತರ ಪತ್ರಿಕೆಯ ಮೌಲ್ಯಮಾಪನ, ಫಲಿತಾಂಶ ಸಂಕಲನಾ ವಿಧಾನ ಎಲ್ಲವನ್ನೂ ಏಕೀಕೃತಗೊಳಿಸಲು ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಈ ವಿಷಯವನ್ನು ತಿಳಿಸಿದರು.
ರಾಜ್ಯದ ಒಳನಾಡು ಮೀನುಗಾರಿಕೆ ಕಾರ್ಯನೀತಿ-2016ಕ್ಕೆ ಕೆಲವು ತಿದ್ದುಪಡಿ ಹಾಗೂ ಸೇರ್ಪಡೆಗಳನ್ನು ಮಾಡಿ ಸಂಪುಟ ಅನುಮೋದನೆ ನೀಡಿದೆ. ಇದರಿಂದ ಗುತ್ತಿಗೆ ನಿಯಮಾವಳಿಗಳನ್ನು ಸರಳೀಕರಣಗೊಳಿಸಿದಂತಾಗಿದೆ. ಅಲ್ಲದೆ, ರಾಜ್ಯದ ಒಳನಾಡು ಮೀನುಗಾರಿಕೆ ಪ್ರದೇಶವನ್ನು ವಿಸ್ತರಿಸಲು ಪೂರಕ ವಾತಾವರಣ ಸೃಷ್ಟಿಸಿದಂತಾಗಿದೆ. ಇದರಿಂದಾಗಿ, ಪಾರಂಪರಿಕವಾಗಿ ಈ ಕಸುಬನ್ನು ಅವಲಂಬಿಸಿದ್ದ ವೃತ್ತಿನಿರತ ಬೆಸ್ತ, ಅಂಬಿಗ, ಬೋಯಿ, ರಾಜಬೋಯಿ ಮತ್ತಿತರ ಸಮುದಾಯಗಳಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.
ರಾಜ್ಯಾದ್ಯಂತ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಹೊರಡಿಸಲಾಗಿದ್ದ ಮಾರ್ಗಸೂಚಿಗಳನ್ನು ಎರಡನೆ ಬಾರಿಗೆ ಪರಿಷ್ಕರಣೆ ಮಾಡಿ ನೂತನ ನಿಯಮಾವಳಿ ಅನ್ವಯ ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅಡುಗೆ ಕೋಣೆ ಸಹಿತ ಮತ್ತು ರಹಿತ ಒಳಗೊಂಡಂತೆ 173 ಕ್ಯಾಂಟೀನ್ ತೆರೆಯಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಅವರು ತಿಳಿಸಿದರು.
ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕಿನ ಸರಗೂರು ಗ್ರಾಮದ ಬಳಿ ಕಾವೇರಿ ನದಿಯಿಂದ ನೀರನ್ನು ಎತ್ತಿ ಗುಂಡಾಳ ಜಲಾಶಯದ ಬಾಧಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಒದಗಿಸಲು ಹಾಗೂ ಕೊಳ್ಳೆಗಾಲ ತಾಲ್ಲೂಕಿನ ಎರಡು ಕೆರೆಗಳಿಗೆ 129 ಕೋಟಿ ರೂ. ವೆಚ್ಚದಲ್ಲಿ ನೀರು ತುಂಬಿಸುವ ಯೋಜನೆಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಜಯಚಂದ್ರ ತಿಳಿಸಿದರು.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹೆಬ್ಬಳ್ಳ ಚೆನ್ನಯ್ಯ ನಾಲೆಯ ಬಾಧಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಒದಗಿಸಲು ಹಾಗೂ 44 ಕೋಟಿ ರೂ.ವೆಚ್ಚದ ಏತ ನೀರಾವರಿ ಯೋಜನೆಯ ಮೂಲಕ 19,500 ಎಕರೆ ಪ್ರದೇಶಕ್ಕೆ ನೀರು ಹಾಯಿಸಲು ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.
ಬೆಳಗಾವಿ ಜಿಲ್ಲೆಯ ಸೂಳೆಬಾವಿ ಗ್ರಾಮದಲ್ಲಿ ರಾಡಾರ್ ಘಟಕ ಸ್ಥಾಪಿಸಲು ಭಾರತೀಯ ವಾಯು ಪಡೆಗೆ 250 ಎಕರೆ ಉಚಿತ ಜಮೀನು ಮಂಜೂರು ಮಾಡಲು ಸಂಪುಟ ಅನುಮೋದನೆ ನೀಡಿದೆ. ಸಾರ್ವಜನಿಕ ಉದ್ದೇಶದ ಯೋಜನೆಗಳಿಗಾಗಿ ಸರಕಾರ ಮತ್ತು ಇತರ ಭೂ ಕೋರಿಕೆ ಸಂಸ್ಥೆಗಳು ಖಾಸಗಿ ಜಮೀನನ್ನು ನೇರವಾಗಿ ಖರೀದಿಸುವ ಕುರಿತಂತೆ ಹೊರಡಿಸಿರುವ ಮಾರ್ಗಸೂಚಿಗೆ ಹೆಚ್ಚುವರಿ ನಿರ್ಬಂಧ ವಿಧಿಸುವ ಅಂಶಗಳನ್ನು ಸೇರ್ಪಡೆ ಮಾಡಲು ಸಂಪುಟ ತೀರ್ಮಾನಿಸಿದೆ ಎಂದು ಅವರು ತಿಳಿಸಿದರು.
ಬೆಳಗಾವಿ ಕಣಬಿರಗಿ ಗ್ರಾಮದ ಜಮೀನುಗಳ ಭೂಮಾಲಕರ ಹಾಗೂ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಸಹಭಾಗಿತ್ವದಲ್ಲಿ ವಸತಿ ಯೋಜನೆಗೆ ನೀಡಿರುವ ಒಪ್ಪಿಗೆಗೆ ನ್ಯಾಯಾಲಯದ ಮುಂದೆ ಹೇಳಿಕೆ ಸಲ್ಲಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಜಯಚಂದ್ರ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹಳೆವೆರವಟ್ಟಾ ಗ್ರಾಮದ ಲಯನ್ಸ್ ಹ್ಯೂಮ್ಯಾನಿಟೇರಿಯನ್ ಸರ್ವಿಸ್ ಟ್ರಸ್ಟ್ಗೆ ಗುತ್ತಿಗೆ ಆಧಾರದ ಮೇಲೆ ಒದಗಿಸಿರುವ 0.06 ಗುಂಟೆ ಜಮೀನನ್ನು ಅದೇ ಸಂಸ್ಥೆಗೆ ಖಾಯಂ ಆಗಿ ಮಂಜೂರು ಮಾಡಲು ಸಂಪುಟ ಒಪ್ಪಿೆ ನೀಡಿದೆ ಎಂದು ಅವರು ಹೇಳಿದರು.
ಮೈಸೂರಿನ ಪೊಲೀಸ್ ಪಬ್ಲಿಕ್ ಶಾಲೆಯ ಹೆಚ್ಚುವರಿ ಕಾಮಗಾರಿಗಳಿಗಾಗಿ 12 ಕೋಟಿ ರೂ.ಮಂಜೂರು ಮಾಡಲು ಹಾಗೂ ಬೆಂಗಳೂರು ನಗರದಲ್ಲಿ ಬಿ-ಟ್ರ್ಯಾಕ್ ಯೋಜನೆಯಡಿ ಸಿಂಕ್ರೋನೈಜ್ಡ್ ಪಾದಾಚಾರಿ ಮಾರ್ಗಗಳಲ್ಲಿನ ದೀಪಗಳು ಮತ್ತು ರಸ್ತೆ ಪರಿಕರಗಳನ್ನು ಒಳಗೊಂಡಂತೆ ಈಗಿರುವ 363 ಟ್ರಾಫಿಕ್ ಸಿಗ್ನಲ್ಗಳ ಉನ್ನತೀಕರಣ, ಅಳವಡಿಕೆ ಮತ್ತು ನಿರ್ವಹಣೆ ಹಾಗೂ ನೂತನ 100 ಟ್ರಾಫಿಕ್ ಜಂಕ್ಷನ್ಗಳಲ್ಲಿ ವಾಟ್ಸ್ಗಳನ್ನು ಒದಗಿಸಿ ಅಳವಡಿಸಲು 85.34 ಕೋಟಿ ರೂ.ವೆಚ್ಚಕ್ಕೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.
ಗದಗ, ಕೊಪ್ಪಳ, ಚಾಮರಾಜನಗರ ವೈದ್ಯಕೀಯ ಕಾಲೇಜುಗಳಲ್ಲಿ ತಲಾ 100 ಕೋಟಿ ರೂ.ವೆಚ್ಚದಲ್ಲಿ 450 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಗಳು ಹಾಗೂ ಕೊಡಗು ಮತ್ತು ಕೊಪ್ಪಳದಲ್ಲಿ ತಲಾ 20 ಕೋಟಿ ರೂ. ಹಾಗೂ ಗದಗದಲ್ಲಿ 19 ಕೋಟಿ ರೂ. ವೆಚ್ಚದಲ್ಲಿ ಅಲ್ಲಿನ ವೈದ್ಯಕೀಯ ಕಾಲೇಜುಗಳಲ್ಲಿ ಹೆಚ್ಚುವರಿ ವಸತಿ ನಿಲಯ ನಿರ್ಮಾಣಕ್ಕೆ ಸಂಪುಟ ಅನುಮೋದನೆ ನಿೀಡಿದೆ ಎಂದು ಜಯಚಂದ್ರ ತಿಳಿಸಿದರು.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಗೂರನಹಳ್ಳಿ ಗ್ರಾಮದಲ್ಲಿ ಸವಿತಾ ಸಮಾಜ ಸಮುದಾಯ ಭವನ ನಿರ್ಮಾಣಕ್ಕೆ ಮೂರು ಗುಂಟೆ ಸರಕಾರಿ ಗೋಮಾಳ ಜಮೀನನ್ನು ಉಚಿತವಾಗಿ ನೀಡಲು ಸಂಪುಟ ಒಪ್ಪಿಗೆ ನೀಡಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ರಕ್ಷೀ ಗ್ರಾಮದ ಮುಫತ್ ಗಾಯರಾಣದಲ್ಲಿ 122.09 ಎಕರೆ ಜಮೀನಿನ ಪೈಕಿ ಒಂದು ಎಕರೆ ಜಮೀನನ್ನು ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಕಟ್ಟಡಕ್ಕೆ ಸಮಾಜ ಕಲ್ಯಾಣ ಇಲಾಖೆಗೆ ಮಂಜೂರು ಮಾಡಲು ಸಂಪುಟ ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕಸಬಾ ಹೋಬಳಿ ಲಕ್ಕವನಹಳ್ಳಿಯಲ್ಲಿ 20.09 ಎಕರೆ ಜಮೀನನ್ನು ಆಶ್ರಯ ಯೋಜನೆಯಡಿ ನಿವೇಶನರಹಿತರಿಗೆ ನಿವೇಶನ ಒದಗಿಸಲು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಲಯ ನಿಗಮಕ್ಕೆ ಉಚಿತವಾಗಿ ಮಂಜೂರು ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಅವರು ತಿಳಿಸಿದರು.