ಬಹುನಿರೀಕ್ಷೆಯ ಬಜೆಟ್-2018 ನಾಳೆ ಮಂಡನೆ
ಸಮತೋಲನ ಕಾಯ್ದುಕೊಳ್ಳಲು ಜೇಟ್ಲಿ ಕಠಿಣ ಕಸರತ್ತು
ಹೊಸದಿಲ್ಲಿ,ಜ.31: ವಿತ್ತಸಚಿವ ಅರುಣ್ ಜೇಟ್ಲಿ ಅವರು ಗುರುವಾರ ಸಂಸತ್ತಿನಲ್ಲಿ ಎನ್ಡಿಎ ಸರಕಾರದ ಐದನೇ ಮುಂಗಡಪತ್ರವನ್ನು ಮಂಡಿಸಲಿದ್ದಾರೆ. ಎಲ್ಲರ ನಿರೀಕ್ಷೆಯ ಕಣ್ಣುಗಳು ಅವರ ಮೇಲೆಯೇ ಇವೆ. ಹೀಗಾಗಿ ಕೃಷಿ ಸಂಕಷ್ಟಕ್ಕೆ ಪರಿಹಾರ ಮತ್ತು ಉದ್ಯೋಗ ಸೃಷ್ಟಿಗೆ ಮಾರ್ಗ ಕಂಡುಕೊಳ್ಳಬೇಕಾದ ಮತ್ತು ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡುವ ಅನಿವಾರ್ಯತೆಯ ಜವಾಬ್ದಾರಿ ನಿರ್ವಹಿಸಬೇಕಿರುವ ಜೊತೆಗೆ ಇದೇ ವೇಳೆ ಆರ್ಥಿಕ ಬುದ್ಧಿವಂತಿಕೆಯನ್ನೂ ಪ್ರದರ್ಶಿಸಬೇಕಿರುವುದರಿಂದ ಜೇಟ್ಲಿ ಅವರ ಪಾಲಿಗಂತೂ ಇದು ಕಠಿಣ ಮುಂಗಡಪತ್ರವಾಗಲಿದೆ.
ಬಿಜೆಪಿಯ ಆಡಳಿತವಿರುವ ಮೂರು ಪ್ರಮುಖ ರಾಜ್ಯಗಳು ಸೇರಿದಂತೆ ಮುಂಬರುವ ಎಂಟು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಮತ್ತು ಮುಂದಿನ ವರ್ಷ ನಡೆಯಲಿ ರುವ ಸಾರ್ವತ್ರಿಕ ಚುನಾವಣೆಗಳ ಹಿನ್ನೆಲೆಯಲ್ಲಿ ಈ ಮುಂಗಡಪತ್ರದಲ್ಲಿ ಹೊಸ ಗ್ರಾಮೀಣ ಯೋಜನೆಗಳು ಘೋಷಣೆಯಾಗುವ ನಿರೀಕ್ಷೆಗಳಿವೆ. ಜೊತೆಗೆ ನರೇಗಾದಂತಹ ಹಾಲಿ ಗ್ರಾಮೀಣ ಕಾರ್ಯಕ್ರಮಗಳಿಗೂ ಹೆಚ್ಚಿನ ಆರ್ಥಿಕ ನೆರವು ದೊರೆಯುವ ಸಾಧ್ಯತೆಗಳು ದಟ್ಟವಾಗಿವೆ.
ಇತ್ತೀಚಿನ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮತಗಳಿಕೆ ಪ್ರಮಾಣ ಕುಸಿದಿರುವ ಹಿನ್ನೆಲೆಯಲ್ಲಿ ಜೇಟ್ಲಿ ಅವರು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹಗಳನ್ನು ಪ್ರಕಟಿಸಬಹುದು.
ಸಾಂಪ್ರದಾಯಿಕವಾಗಿ ಬಿಜೆಪಿಯನ್ನು ಬೆಂಬಲಿಸುತ್ತಲೇ ಬಂದಿರುವ ಸಣ್ಣ ಉದ್ಯಮಗಳು ಗೊಂದಲಗಳ ಮಧ್ಯೆಯೇ ಜಾರಿಗೊಂಡ ಜಿಎಸ್ಟಿ ಮತ್ತು ನೋಟು ಅಮಾನ್ಯದಿಂದ ಅನುಭವಿಸಿದ್ದ ಕಷ್ಟಗಳಿಗೆ ಸ್ವಲ್ಪ ಪರಿಹಾರವನ್ನೂ ಈ ಮುಂಗಡಪತ್ರದಲ್ಲಿ ನಿರೀಕ್ಷಿಸಬಹುದಾಗಿದೆ.
ಜೇಟ್ಲಿಯವರು ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸುವ ಮೂಲಕ ಆದಾಯ ತೆರಿಗೆಯಲ್ಲಿ ಕೊಂಚ ಪರಿಹಾರ ಕಲ್ಪಿಸಬಹುದು ಎಂದು ಜನಸಾಮಾನ್ಯರು ಕನಸು ಕಾಣುತ್ತಿದ್ದಾರೆ. ಸ್ವಲ್ಪ ಮಟ್ಟಿಗೆ ಈ ಕನಸು ನನಸಾಗುವ ನಿರೀಕ್ಷೆಯಂತೂ ಇದೆ.
ನಾಲ್ಕು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿರುವ ಆರ್ಥಿಕತೆಯ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಲು ಹೆದ್ದಾರಿಗಳಂತಹ ಮೂಲಸೌಕರ್ಯ ಯೋಜನೆಗಳು ಮತ್ತು ರೈಲ್ವೆ ಆಧುನೀಕರಣಕ್ಕೆ ವೆಚ್ಚವನ್ನು ಹೆಚ್ಚಿಸಲು ಜೇಟ್ಲಿ ಮನಸ್ಉ ಮಾಡಬಹುದು. ಆದರೆ ಇವೆಲ್ಲವನ್ನೂ ಅವರು ಮುಂಗಡಪತ್ರ ಕೊರತೆಯನ್ನು ತಗ್ಗಿಸುವ ಮಾರ್ಗಸೂಚಿಗೆ ಅಂಟಿಕೊಂಡೇ ಮಾಡಬೇಕಾಗಿದೆ. ಇದರಲ್ಲಿ ವಿಫಲರಾದರೆ ಜಾಗತಿಕ ಹೂಡಿಕೆದಾರರು ಮತ್ತು ಕಳೆದ ವರ್ಷವಷ್ಟೇ ಅಪರೂಪಕ್ಕೆ ದೇಶದ ಆರ್ಥಿಕತೆಯನ್ನು ಮೇಲ್ದರ್ಜೆಗೇರಿಸಿದ್ದ ರೇಟಿಂಗ್ ಏಜೆನ್ಸಿಗಳ ಅವಕೃಪೆಗೆ ಭಾರತವು ಗುರಿಯಾಗಬೇಕಾಗಬಹುದು.
ವಿತ್ತೀಯ ಕೊರತೆಯನ್ನು ಹಾಲಿ ಆರ್ಥಿಕ ವರ್ಷದಲ್ಲಿ ಜಿಡಿಪಿಯ ಶೇ.3.2ಕ್ಕೆ ಮತ್ತು 2018-19ರಲ್ಲಿ ಶೇ.3ಕ್ಕೆ ತಗ್ಗಿಸಲು ಜೇಟ್ಲಿ ಈ ಹಿಂದೆ ಗುರಿಯನ್ನು ನಿಗದಿಗೊಳಿಸಿದ್ದರು.
ಜನರನ್ನು ಆಕರ್ಷಿಸುವ ಯೋಜನೆಗಳನ್ನು ಪ್ರಕಟಿಸಲು ಮುಂಗಡಪತ್ರವು ಸಾಧನವಾಗ ದಿರಬಹುದು ಮತ್ತು ಶ್ರೀಸಾಮಾನ್ಯರು ಹೆಚ್ಚಿನ ಸೌಲಭ್ಯಗಳನ್ನು ಬಯಸುತ್ತಾರೆ ಎನ್ನುವುದು ಕೇವಲ ಮಿಥ್ಯೆ ಎಂದು ಸುಳಿವು ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಈಗಾಗಲೇ ಸಾರ್ವಜನಿಕ ನಿರೀಕ್ಷೆಗಳಿಗೆ ಕಡಿವಾಣ ಹಾಕಿದಂತಿದೆ.
ಗುರುವಾರದ ಮುಂಗಡಪತ್ರ ಜಿಎಸ್ಟಿ ಜಾರಿಗೊಂಡ ನಂತರದ ಮೊದಲ ಬಜೆಟ್ ಆಗಿದ್ದು, ಏಷ್ಯಾದ ಮೂರನೇ ಬೃಹತ್ ಆರ್ಥಿಕತೆಯ ಬೆಳವಣಿಗೆಗೆ ಉತ್ತೇಜನ ನೀಡಲು ಜೇಟ್ಲಿಯವರು ಏನು ಕಸರತ್ತು ಮಾಡಲಿದ್ದಾರೆ ಎನ್ನುವುದನ್ನು ಕುತೂಹಲದಿಂದ ಕಾಯಲಾಗುತ್ತಿದೆ.