ಶಿಕ್ಷಕರಿಗೆ ಸಮಸ್ಯೆಯಾಗದಂತೆ ಪರಿಶೀಲಿಸಿ ಕ್ರಮ: ತನ್ವೀರ್ ಸೇಠ್
6ನೆ ವೇತನ ಆಯೋಗದ ವರದಿ

ಬೆಂಗಳೂರು, ಫೆ.1: ಶಿಕ್ಷಕ ಸಮುದಾಯಕ್ಕೆ ಸಮಸ್ಯೆಯಾಗದಂತೆ ರಾಜ್ಯ ಸರಕಾರದ 6ನೆ ವೇತನ ಆಯೋಗದ ವರದಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ತನ್ವೀರ್ ಸೇಠ್ ಭರವಸೆ ನೀಡಿದರು.
ಗುರುವಾರ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ನಗರದ ಶಿಕ್ಷಕರ ಸದನದಲ್ಲಿ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರ ಮತ್ತು ರಾಜ್ಯ ಮಟ್ಟದ ಪದಾಧಿಕಾರಿಗಳ ಶೈಕ್ಷಣಿಕ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರಿ ನೌಕರರಲ್ಲಿ ಶೇ.50ರಷ್ಟು ನೌಕರರು ಶಿಕ್ಷಕ ಸಮುದಾಯವಾಗಿದೆ. ಹೀಗಾಗಿ 6ನೆ ವೇತನ ಆಯೋಗದ ವರದಿ ಶಿಕ್ಷಕ ಸಮುದಾಯಕ್ಕೆ ಅತಿ ಮುಖ್ಯವಾಗಿರುತ್ತದೆ. ಇನ್ನು ಆಯೋಗದ ಅಂತಿಮ ವರದಿ ಬರಲು ಮೂರು ತಿಂಗಳು ಬೇಕಾಗುತ್ತದೆ. ಅಲ್ಲಿಯವರೆಗೆ ವರದಿಯ ಕುರಿತು ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಚುನಾವಣೆಯ ನಂತರ ಕೌನ್ಸಲಿಂಗ್: ಮುಂದಿನ ವಿಧಾನಸಭಾ ಚುನಾವಣೆಯ ನಂತರ ಶಿಕ್ಷಕರ ವರ್ಗಾವಣೆಯ ಕೌನ್ಸಲಿಂಗ್ ನಡೆಸಲು ತೀರ್ಮಾನಿಸಲಾಗಿದೆ. ಇಲ್ಲಿಯವರೆಗೆ ಕೌನ್ಸಲಿಂಗ್ಗಾಗಿ ಸುಮಾರು 92ಸಾವಿರ ಅರ್ಜಿಗಳು ಬಂದಿವೆ. ಪ್ರತಿ ಶಿಕ್ಷಕರ ಕುರಿತು ವಿಶೇಷ ಕಾಳಜಿ ವಹಿಸಿ ವರ್ಗಾವಣೆ ಪ್ರಕ್ರಿಯೆ ನಡೆಸಲಾಗುವುದು ಎಂದು ಅವರು ಹೇಳಿದರು.
ಪ್ರೌಢಶಾಲೆಯಲ್ಲಿ ಆಗಾಗ ಖಾಲಿಯಾಗುವ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳುವ ಅಧಿಕಾರವನ್ನು ಶಿಕ್ಷಣ ಇಲಾಖೆಯ ಅಪರ ಆಯುಕ್ತರಿಗೆ ನೀಡಲಾಗಿದೆ. ಹಾಗೂ ಪ್ರೌಢಶಾಲೆಯ ಶಿಕ್ಷಕರನ್ನು ಅರ್ಹತೆಯ ಮೇರೆಗೆ ಮುಖ್ಯೋಪಾಧ್ಯಯರನ್ನಾಗಿ ನೇಮಿಸುವ ಅಧಿಕಾರವನ್ನು ನೀಡಲಾಗಿದೆ. ಇದು ಪರಿಣಾಮಕಾರಿಯಾಗಿ ಜಾರಿಯಾಗುವಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ತರಬೇತಿ ಪಡೆದು(ಟಿಜಿಟಿ) ನೇಮಕವಾಗಿರುವ ಶಿಕ್ಷಕರನ್ನು ಪ್ರೌಢಶಾಲೆಯಲ್ಲಿ ಖಾಲಿ ಇರುವ ಜಾಗಕ್ಕೆ ಅರ್ಹತೆಯ ಅನುಸಾರವಾಗಿ ಭರ್ತಿ ಮಾಡಿಕೊಳ್ಳಲು ಸೂಚಿಸಲಾಗಿದೆ. ಈ ಆಯ್ಕೆ ಪ್ರಕ್ರಿಯೆಯಿಂದ ಸುಮಾರು 25ಸಾವಿರ ಮಂದಿ ಪ್ರೌಢಶಾಲೆಗೆ ನೇಮಕವಾಗಲಿದ್ದಾರೆ ಎಂದು ಅವರು ಹೇಳಿದರು.
ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನೇತೃತ್ವದ ಸಮಿತಿ ಅನುದಾನಿತ ಶಾಲಾ ಶಿಕ್ಷಕರಿಗೆ ಕಾಲ್ಪನಿಕ ವೇತನ ಭಡ್ತಿಯನ್ನು ಪರಿಹರಿಸಿಕೊಡಲು ನೀಡಿರುವ ವರದಿಯನ್ನು ಸಭಾಪತಿ ಡಿ.ಎಚ್.ಶಂಕರಮೂರ್ತಿಗೆ ನೀಡಲಾಗಿದೆ. ಆ ವರದಿ ಸದನಕ್ಕೆ ಬರಲಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸಭಾಪತಿ ಮರಿತಿಬ್ಬೇಗೌಡ, ವಿಧಾನಪರಿಷತ್ ಸದಸ್ಯ ಶರಣಪ್ಪ ಮಟ್ಟೂರು, ಶಿಕ್ಷಕ ಸಂಘಟನೆಗಳ ಮುಖಂಡರಾದ ಬಸವರಾಜ ಗುರಿಕಾರ, ಎಂ.ಎನ್.ಚಂದ್ರೇಗೌಡ, ತಿಮ್ಮಯ್ಯ ಪುರ್ಲೆ, ಕೆ.ಜಿ.ಅಂಜಿನಪ್ಪ, ಡಾ.ರಾಮೋಜಿಗೌಡ ಹಾಗೂ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಕೆ.ಮಂಜುನಾಥ್ ಮತ್ತಿತರರಿದ್ದರು.
ಅನಾರೋಗ್ಯದ ಹಿನ್ನೆಲೆಯಲ್ಲಿ ವರ್ಗಾವಣೆ ಬಯಸುವ ಶಿಕ್ಷಕರಿಗೆ ವಿಶೇಷ ರಿಯಾಯಿತಿ ಇದೆ. ಆದರೆ, ಇದನ್ನೆ ದುರ್ಬಳಕೆ ಮಾಡಿಕೊಂಡು ಕಳೆದ ವರ್ಷ ಸುಮಾರು 268ಶಿಕ್ಷಕರು ಸುಳ್ಳು ವೈದ್ಯಕೀಯ ಪ್ರಮಾಣಪತ್ರ ನೀಡಿ ವರ್ಗಾವಣೆ ಪಡೆದುಕೊಂಡಿದ್ದಾರೆ. ಇದರಿಂದ ಶಿಕ್ಷಕ ಸಮುದಾಯ ಸಮಾಜದೆದುರು ತಲೆ ತಗ್ಗಿಸುವಂತಾಗಿದೆ. ಹೀಗಾಗಿ ವರ್ಗಾವಣೆ ಬಯಸುವ ಅನಾರೋಗ್ಯದ ಶಿಕ್ಷಕರು ನೇರವಾಗಿ ನನ್ನನ್ನೇ ಭೇಟಿ ಮಾಡಲಿ. ನಾನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ.
-ತನ್ವೀರ್ ಸೇಠ್, ಶಿಕ್ಷಣ ಸಚಿವ







