ಮೆಸ್ಕಾಂ ಹೆಚ್ಚುವರಿ ಡಿಪಾಸಿಟ್ ವಸೂಲಿಗೆ ಡಿವೈಎಫ್ಐ ವಿರೋಧ: ಪ್ರತಿಭಟನೆಯ ಎಚ್ಚರಿಕೆ
ಮಂಗಳೂರು, ಫೆ. 1: ನಗರದ ವಿವಿಧೆಡೆ ಮೆಸ್ಕಾಂ ಇಲಾಖೆ ಹೆಚ್ಚುವರಿ ಡಿಪಾಸಿಟ್ ಹಣ ಪಾವತಿಗೆ ಒತ್ತಾಯಿಸಿ ಹಾಗೂ ವಿದ್ಯುತ್ ಸಂಪರ್ಕ ಕಡಿತ ಮಾಡುವ ಎಚ್ಚರಿಕೆಯನ್ನು ನೀಡುತ್ತಿರುವ ಮೆಸ್ಕಾಂ ನೀತಿಯನ್ನು ಡಿವೈಎಫ್ಐ ದ.ಕ. ಜಿಲ್ಲಾ ಸಮಿತಿ ವಿರೋಧಿಸಿದೆ.
ವಿದ್ಯುತ್ ಸರಬರಾಜು ಒಂದು ಸೇವಾ ಕ್ಷೇತ್ರ. ಸರಕಾರದ ಸೇವಾಕ್ಷೇತ್ರಗಳನ್ನು ಲಾಭದ ಉದ್ದೇಶಗಳಿಗೆ ಗ್ರಾಹಕರಿಂದ ಹೆಚ್ಚುವರಿ ಡಿಪಾಸಿಟ್ ಹೆಸರಿನಲ್ಲಿ ಪೀಡಿಸುವುದು ಸರಿಯಲ್ಲ, ಈಗಾಗಲೇ ದುಡಿದು ತಿನ್ನುವ ಜಿಲ್ಲೆಯ ಜನಸಾಮಾನ್ಯರ ಪರಿಸ್ಥಿತಿ ಶೋಚನೀಯವಾಗಿದೆ. ಒಂದು ಕಡೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಪೆಟ್ರೋಲ್, ಡೀಸೆಲ್ ದರ ದಿನೇದಿನೇ ಏರುತ್ತಿದೆ. ನಿವೇಶನ ರಹಿತರು ಮನೆ ಬಾಡಿಗೆ ಕಟ್ಟಲಾಗದೆ ಕಂಗಾಲಾಗಿದ್ದಾರೆ. ಬಡವರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ದುಬಾರಿ ಶುಲ್ಕವನ್ನು ಭರಿಸಲಾಗದೆ, ಅನಾರೋಗ್ಯ ಪೀಡಿತರಿಗೆ ಖಾಸಗಿ ಆಸ್ಪತ್ರೆಗಳ ದುಬಾರಿ ವೆಚ್ಚವನ್ನು ಭರಿಸಲಾಗದ ಅತಂತ್ರ ಸ್ಥಿತಿಯಲ್ಲಿ ಜೀಸುತ್ತಿರುವ ಸಂದರ್ಭದಲ್ಲಿ ಮೆಸ್ಕಾಂ ಇಲಾಖೆ ಈ ರೀತಿ ಡಿಪಾಸಿಟ್ ಹೆಸರಲ್ಲಿ ಮಾಡುವ ವಸೂಲಿ ನೀತಿಯು ಜನರ ನೋವಿಗೆ ಇನ್ನಷ್ಟು ಬರೆಯನ್ನು ಎಳೆದಂತಾಗಿದೆ. ಆದ್ದರಿಂದ ಮೆಸ್ಕಾಂ ಇಲಾಖೆ ಕೂಡಲೇ ಹೆಚ್ಚುವರಿ ಡಿಪಾಸಿಟ್ ವಸೂಲಿ ನೀತಿಯನ್ನು ಕೈಬಿಡಬೇಕು ಎಂದು ಡಿವೈಎಫ್ಐ ಒತ್ತಾಯಿಸುತ್ತದೆ.
ಇಲ್ಲದಿದ್ದಲ್ಲಿ ಮುಂದಿನ ದಿನ ಮೆಸ್ಕಾಂ ಕಚೇರಿಗಳ ಎದುರು ಪ್ರತಿಭಟನೆ ನಡೆಸುವ ತೀರ್ಮಾನವನ್ನು ಕೈಗೊಳ್ಳಲಿದ್ದೇವೆ ಎಂದು ಡಿವೈಎಫ್ಐ ಜಿಲ್ಲಾ ಅಧ್ಯಕ್ಷ ಬಿ.ಕೆ. ಇಮ್ತಿಯಾಝ್ ಹಾಗೂ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





