ಬಿಜೆಪಿಯನ್ನು ಸೋಲಿಸಬಹುದು ಅಂದುಕೊಳ್ಳುವುದು ಸಿದ್ದರಾಮಯ್ಯರ ಮೂರ್ಖತನ: ಸಿ.ಟಿ.ರವಿ
![ಬಿಜೆಪಿಯನ್ನು ಸೋಲಿಸಬಹುದು ಅಂದುಕೊಳ್ಳುವುದು ಸಿದ್ದರಾಮಯ್ಯರ ಮೂರ್ಖತನ: ಸಿ.ಟಿ.ರವಿ ಬಿಜೆಪಿಯನ್ನು ಸೋಲಿಸಬಹುದು ಅಂದುಕೊಳ್ಳುವುದು ಸಿದ್ದರಾಮಯ್ಯರ ಮೂರ್ಖತನ: ಸಿ.ಟಿ.ರವಿ](https://www.varthabharati.in/sites/default/files/images/articles/2018/02/1/ravi.jpg)
ಮೈಸೂರು,ಫೆ.1: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸೈದ್ದಾಂತಿಕ ನಿಲುವಿನಿಂದ ಬಿಜೆಪಿಯನ್ನು ಸೋಲಿಸ ಬಹುದು ಅಂದುಕೊಂಡರೆ ಅದು ಅವರ ದಡ್ಡತನ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಾಸಕ ಸಿ.ಟಿ.ರವಿ ತಿಳಿಸಿದರು.
ಮೈಸೂರಿನಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ, ಅವರು ಗೌರಿ ಲಂಕೇಶ್ ಹತ್ಯೆಗೆ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರ ಮೇಲೆ ಆರೋಪ ಹೊರಿಸುವ ಕಾರ್ಯಕ್ಕೆ ಕಾಂಗ್ರೆಸ್ ಮುಂದಾಗಿದೆ. ಪಕ್ಷದ ಸಿದ್ದಾಂತಕ್ಕೆ ಎಲ್ಲರೂ ಕಟಿ ಬದ್ದರಾಗಿದ್ದೇವೆ. ನಮಗೆ ವ್ಯಕ್ತಿಗಿಂತ ಪಕ್ಷಮುಖ್ಯ. ಪಕ್ಷಕ್ಕಿಂತ ನಾವೇ ದೊಡ್ಡವರೆಂದವರು ಪಕ್ಷ ಬಿಡುತ್ತಿದ್ದಾರೆ. ಪಕ್ಷಕ್ಕೆ ಯಾರೇ ಬಂದರೂ ಹೋದರೂ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು.
ಬಿಜೆಪಿ ಕಾರ್ಯಕರ್ತ ಸಂತೋಷ್ ಹತ್ಯೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹಿಂದೂ ಹಾಗೂ ಬಿಜೆಪಿ ಕಾರ್ಯಕರ್ತರ ಹತ್ಯೆಯೂ ಕೂಡಾ ಕಾಂಗ್ರೆಸ್ ಸಾಧನೆ. ಭ್ರಷ್ಟಾಚಾರದ ಸಾಧನೆ ಜೊತೆಗೆ ಇದೊಂದು ಸಾಧನೆ ಕೂಡಾ ಸೇರಿದೆ ಎಂದರು.
ಗೌರಿ ಹತ್ಯೆ ಹಂತಕರು ಕರಾವಳಿ ಭಾಗದಲ್ಲಿದ್ದಾರೆ ಎಂಬ ದೊರೆಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ದೊರೆಸ್ವಾಮಿಯವರು ಹಿರಿಯರು. ಅವರ ಮಾತಿಗೆ ಗೌರವ ಕೊಡಬೇಕು. ಸಿಎಂ ಸಿದ್ದರಾಮಯ್ಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು. ಸರ್ಕಾರದ ಮಾನಸಿಕತೆ ಸರಿಯಿಲ್ಲ. ಪಿಎಫ್ಐ ಸಂಘಟನೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಮುಖ್ಯಮಂತ್ರಿಯಾಗಿ ಕೂರುವ ನೈತಿಕತೆ ಸಿದ್ದರಾಮಯ್ಯನವರಿಗಿಲ್ಲ ಎಂದು ಹೇಳಿದರು.