ದಾವಣಗೆರೆ: ಅಕ್ರಮ ಪಂಪ್ಸೆಟ್ ತೆರವುಗೊಳಿಸದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ

ದಾವಣಗೆರೆ,ಫೆ.01: ಭದ್ರಾ ನಾಲೆ ಮೇಲ್ಭಾಗದ ರೈತರು ಅಳವಡಿಸಿರುವ ಅಕ್ರಮ ಪಂಪ್ಸೆಟ್ಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ರೈತರು ಕುಂದುವಾಡ ಚಾನಲ್ ಬಳಿ ಗುರುವಾರ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ರೈತ ಮುಖಂಡರು ಮಾತನಾಡಿ, ನಾಟಿ ಕಾರ್ಯ ಇದೀಗ ಚುರುಕಾಗಿದ್ದು, ಗದ್ದೆಗಳಿಗೆ ನೀರಿನ ಅಗತ್ಯತೆ ಹೆಚ್ಚಿದೆ. ಆದರೆ, ಮೇಲ್ಬಾಗದ ರೈತರು ಅಕ್ರಮವಾಗಿ ಪಂಪ್ಸೆಟ್ ಅಳವಡಿಸಿ ನಾಲೆಯ ನೀರು ಕದಿಯುತ್ತಿರುವುದರಿಂದ ಸಮರ್ಪಕ ನೀರು ದೊರೆಯದೇ ನಾಟಿ ಮಾಡುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ. ಆದ್ದರಿಂದ ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಅಕ್ರಮ ಪಂಪ್ಸೆಟ್ ತೆರವುಗೊಳಿಸಬೇಕು ಎಂದ ಪ್ರತಿಭಟನಾಕಾರರು, ಟಿವಿ ಸ್ಟೇಷನ್ ಕೆರೆ ನೀರು ತುಂಬಿಸಲು ಇನ್ನು ಕಾಲಾವಕಾಶ ಇದೆ. ಈಗ ರೈತರು ಭತ್ತ ನಾಟಿ ಮಾಡುತ್ತಿರುವುದರಿಂದ ಹೆಚ್ಚಿನ ನೀರು ಬೇಕು. ಹಾಗಾಗಿ, ಟಿವಿ ಸ್ಟೇಷನ್ ಕೆರೆಗೆ ಹೋಗುವ ನೀರನ್ನು ಸದ್ಯ ಬಂದ್ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಭೇಟಿ ನೀಡಿ ಬೆಂಬಲು ಸೂಚಿಸಿ, ಪ್ರತಿಭಟನಾಕಾರರೊಂದಿಗೆ ಸಮಾಲೋಚನೆ ನಡೆಸಿ, ಸಂಬಂಧಿತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಕುಂದುವಾಡ, ಆವರಗೊಳ್ಳ, ಕಕ್ಕರಗೊಳ್ಳ, ಸತ್ಯನಾರಯಣ ಕ್ಯಾಂಪ್ ರೈತರು ಇದ್ದರು.





