ರಾಜಸ್ಥಾನದಲ್ಲಿ ನಡೆಯಲಿಲ್ಲ ಮೋದಿ ಮೋಡಿ, ರಾಹುಲ್ಗೆ ಹೊಸ ವರ್ಷದ ಉಡುಗೊರೆ
ಜೈಪುರ, ಫೆ.2: ಇನ್ನು ಹತ್ತೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ಆಡಳಿತರೂಢ ಬಿಜೆಪಿ ಭಾರೀ ಹಿನ್ನಡೆ ಅನುಭವಿಸಿದೆ. ಗುರುವಾರ ಪ್ರಕಟವಾದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಎರಡು ಲೋಕಸಭಾ ಕ್ಷೇತ್ರ ಹಾಗೂ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಜಯ ಸಾಧಿಸಿ ಬಿಜೆಪಿಗೆ ಮರ್ಮಾಘಾತ ನೀಡಿದೆ.
ರಾಜಸ್ಥಾನದಲ್ಲಿ ಕಾಂಗ್ರೆಸ್ ಕ್ಲೀನ್ಸ್ವೀಪ್ ಸಾಧಿಸುವ ಮೂಲಕ ಪಕ್ಷದ ನೂತನ ಅಧ್ಯಕ್ಷ ರಾಹುಲ್ ಗಾಂಧಿಗೆ ಹೊಸ ವರ್ಷದ ಉಡುಗೊರೆ ನೀಡಲಾಗಿದೆ ಎಂದು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್ ಹೇಳಿದ್ದಾರೆ.
ಆಲ್ವಾರ್ ಹಾಗೂ ಅಜ್ಮೇರ್ ಲೋಕಸಭಾ ಕ್ಷೇತ್ರಗಳಲ್ಲಿ 2014ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಕಾಂಗ್ರೆಸ್ನ ಮತ ಹಂಚಿಕೆ ಪ್ರಮಾಣ 11 ಶೇ.ದಿಂದ 25 ಶೇ. ಹೆಚ್ಚಳವಾಗಿದೆ. ಈ ಎರಡು ಕ್ಷೇತ್ರಗಳಲ್ಲಿ ಬಿಜೆಪಿಯ ಮತ ಹಂಚಿಕೆಯು 20 ಶೇ.ದಿಂದ 10 ಶೇ.ಕ್ಕೆ ಕುಸಿದಿದೆ.
ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್ 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅಜ್ಮೇರ್ ಕ್ಷೇತ್ರದಲ್ಲಿ ಬಿಜೆಪಿಯ ಸನ್ವರ್ ಲಾಲ್ ಜಾಟ್ ವಿರುದ್ಧ 1.71 ಲಕ್ಷ ಮತಗಳಿಂದ ಸೋತಿದ್ದರು. ಜಾಟ್ ಕಳೆದ ವರ್ಷದ ಜುಲೈಯಲ್ಲಿ ತೀರಿಕೊಂಡಿದ್ದಾರೆ. ಜಾಟ್ ನಿಧನದಿಂದ ತೆರವಾಗಿರುವ ಅಜ್ಮೇರ್ ಕ್ಷೇತ್ರದಲ್ಲಿ ನಡೆದಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಘು ಶರ್ಮ 51 ಶೇ. ಮತಹಂಚಿಕೆ ದಾಖಲಿಸಿದ್ದಾರೆ.
ರಾಜ್ಯಾದ್ಯಂತ ರೈತರ ಪ್ರತಿಭಟನೆ, ಗುಜ್ಜರ್ ಮೀಸಲಾತಿ ಮಸೂದೆಗೆ ಹೈಕೋರ್ಟ್ ತಡೆ ಹೇರಿಕೆ, ಗೋ ಸಂರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಹಿಂಸಾಚಾರ ಹಾಗೂ ಇತ್ತೀಚೆಗೆ ಬಿಡುಗಡೆಯಾಗಿರುವ 'ಪದ್ಮಾವತ್' ಚಿತ್ರದ ಬಗ್ಗೆ ರಜಪೂತ್ ಸಮುದಾಯದ ಆಕ್ರೋಶವೂ ಉಪ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮಬೀರಿದೆ.
ಆಲ್ವಾರ್ ಹಾಗೂ ಅಜ್ಮೇರ್ ಲೋಕಸಭಾ ಕ್ಷೇತ್ರ ಒಟ್ಟು 16 ವಿಧಾನಸಭಾ ಕ್ಷೇತ್ರಗಳನ್ನು ವ್ಯಾಪಿಸಿದೆ. ಒಟ್ಟು 200 ಅಸೆಂಬ್ಲಿ ಕ್ಷೇತ್ರಗಳಲ್ಲಿ 8.5 ಶೇ. ಭಾಗ ಈ ಎರಡು ಕ್ಷೇತ್ರಗಳಲ್ಲಿದೆ. ಈ ಹಿನ್ನೆಲೆಯಲ್ಲಿ ಉಪ ಚುನಾವಣೆಯು ಮುಂಬರುವ ಅಸೆಂಬ್ಲಿ ಚುನಾವಣೆಗೆ ಸೆಮಿ ಫೈನಲ್ ಹೋರಾಟವಾಗಿ ಬಿಂಬಿಸಲ್ಪಟ್ಟಿತ್ತು.
ಆಲ್ವಾರ್ ಕ್ಷೇತ್ರ ಹರ್ಯಾಣಕ್ಕೆ ಹತ್ತಿರವಾಗಿದೆ. ಅಜ್ಮೇರ್ ಕೇಂದ್ರ ರಾಜಸ್ಥಾನದಲ್ಲಿದೆ ಹಾಗೂ ಮಂಡಲ್ಘರ್ ಮಧ್ಯಪ್ರದೇಶದ ಬಾರ್ಡರ್ನಲ್ಲಿದೆ. ಹೀಗಾಗಿ ಈ ಫಲಿತಾಂಶ ರಾಜ್ಯಾದ್ಯಂತ ಆಡಳಿತ ವಿರೋಧಿ ಅಲೆಯಿದೆ ಎನ್ನುವುದರ ಸಂಕೇತವಾಗಿದೆ.
ಜಾತಿ ಲೆಕ್ಕಾಚಾರವು ಕಾಂಗ್ರೆಸ್ಗೆ ಫೇವರ್ ಆಗಿತ್ತು. 'ಪದ್ಮಾವತ್' ಚಿತ್ರ ವಿವಾದ ಹಾಗೂ ಚತುರ್ ಸಿಂಗ್ ಹಾಗೂ ಗ್ಯಾಂಗ್ಸ್ಟರ್ ಆನಂದ್ಪಾಲ್ ಎನ್ಕೌಂಟರ್ ನಡೆಸಿರುವ ಹಿನ್ನೆಲೆಯಲ್ಲಿ ರಜಪೂತ್ ಸಮುದಾಯ ಕಾಂಗ್ರೆಸ್ಗೆ ಬೆಂಬಲ ನೀಡಿದೆ. ರಾಜ್ಯ ಸರಕಾರ ತರಲು ಮುಂದಾಗಿದ್ದ ಗುಜ್ಜರ್ ಸಮುದಾಯದ ಮೀಸಲಾತಿಯನ್ನು ಹೈಕೋರ್ಟ್ ತಡೆ ಹೇರಿರುವುದಕ್ಕೆ ಗುಜ್ಜರ್ ಸಮುದಾಯ ಬಿಜೆಪಿ ವಿರುದ್ಧ ಮುನಿಸಿಕೊಂಡಿದೆ.
ರೈತರ ಆಂದೋಲನ ಕೂಡ ಚುನಾವಣೆಯಲ್ಲಿ ಪರಿಣಾಮಬೀರಿದೆ. ಕಳೆದ ವರ್ಷ ಸೆಪ್ಟಂಬರ್ನಲ್ಲಿ ರೈತರು 13 ದಿನ ಆಂದೋಲನ ನಡೆಸಿದ್ದಾಗ ಬಿಜೆಪಿಯು 50,000 ಸಾಲ ಮನ್ನಾ ಮಾಡುವುದಾಗಿ ಘೋಷಿಸಿತ್ತು. ಈವರೆಗೆ ಅದನ್ನು ಕಾರ್ಯಗತಗೊಳಿಸಿಲ್ಲ. ಉದ್ಯಮಿಗಳು ಹಾಗೂ ವ್ಯಾಪಾರಿಗಳು ಜಿಎಸ್ಟಿ ಬಗ್ಗೆ ದೂರುತ್ತಿದ್ದಾರೆ.