ಕಾಸ್ಗಂಜ್ ಗಲಭೆ: ರಾಜ್ಯಸಭೆಯಲ್ಲಿ ಕೋಲಾಹಲ
ಹೊಸದಿಲ್ಲಿ,ಫೆ.2: ಉತ್ತರಪ್ರದೇಶದ ಕಾಸ್ಗಂಜ್ನಲ್ಲಿ ಭುಗಿಲೆದ್ದ ಕೋಮು ಗಲಭೆಯನ್ನು ಖಂಡಿಸಿ ರಾಜ್ಯಸಭೆಯಲ್ಲಿ ಶುಕ್ರವಾರ ಸಮಾಜವಾದಿ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿ, ಗದ್ದಲ ಎಬ್ಬಿಸಿದ್ದರಿಂದ ಸದನ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಲಾಯಿತು.
ಪ್ರತಿಭಟನಾ ನಿರತ ಸಮಾಜವಾದಿ ಪಕ್ಷದ ಸದಸ್ಯರ ಜೊತೆ, ರಾಜಧಾನಿಯಲ್ಲಿ ದಿಲ್ಲಿ ನಗರಪಾಲಿಕೆಗಳು ನಡೆಸುತ್ತಿರುವ ಸೀಲಿಂಗ್ ಅಭಿಯಾನವನ್ನು ಖಂಡಿಸಿ ಆಮ್ಆದ್ಮಿ ಪಕ್ಷದ ಸದ ಸ್ಯರೂ ಕೂಡಾ ಸ್ಪೀಕರ್ ಎದುರಿನ ಅಂಗಣಕ್ಕೆ ಧಾವಿಸಿ ಘೋಷಣೆಗಳನ್ನು ಕೂಗಿದರು.
ಈ ಮಧ್ಯೆ ಆಂಧ್ರದ ಕಾಂಗ್ರೆಸ್ ಸದಸ್ಯ ಕೆವಿಪಿ ರಾಮಚಂದ್ರರಾವ್‘ಆಂಧ್ರ ಪ್ರದೇಶಕ್ಕೆ ನೆರವಾಗಿ’ ಎಂಬ ಘೋಷಣೆಯ ಭಿತ್ತಿಪತ್ರ ಪ್ರದರ್ಶಿಸುತ್ತಾ ಸದನದ ಅಂಗಣಕ್ಕೆ ಧುಮುಕಿದರು.
ಇಂದು ಬೆಳಗ್ಗೆ ರಾಜ್ಯಸಭೆಯಲ್ಲಿ ಸದನದ ಕಲಾಪ ಆರಂಭಗೊಂಡ ಕೆಲವೇ ನಿಮಿಷಗಳ ಬಳಿಕ ಸಮಾಜವಾದಿ ಪಕ್ಷದ ರಾಮ್ಗೋಪಾಲ್ ಯಾದವ್ ಅವರು ಕಾಸ್ಗಂಜ್ನಲ್ಲಿ ಕಳೆದವಾರ ಭುಗಿಲೆದ್ದ ಕೋಮುಗಲಭೆಯನ್ನು ಪ್ರಸ್ತಾಪಿಸಿದರು.
‘‘ಕಾಸ್ಗಂಜ್ನಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವೆಸಗಲಾಗಿದೆ. ಅವರನ್ನು ದಮನಿಸಲಾಗುತ್ತಿದೆ ಹಾಗೂ ಅವರ ಮನೆಗಳನ್ನು ಧ್ವಂಸಗೊಳಿಸಲಾಗಿದೆ’’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗ ಸಮಾಜವಾದಿ ಪಕ್ಷದ ಇತರ ಸದಸ್ಯರೂ ಅವರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದರು.
ಆಗ ಉಪಸ್ಪೀಕರ್ ಪಿ.ಜೆ. ಕುರಿಯನ್ ಅವರು, ಈ ವಿಷಯಸದನದಲ್ಲಿ ಪ್ರಸ್ತಾಪಿಸಲು ನೋಟಿಸ್ ನೀಡುವಂತೆ ಎಸ್ಪಿ ಸದಸ್ಯರಿಗೆ ಸೂಚಿಸಿದರು. ಆದಾಗ್ಯೂ ಅದಕ್ಕೆ ಕಿವಿಗೊಡದ ಎಸ್ಪಿ ಸದಸ್ಯರು ಸದನದ ಮುಂದಿನ ಅಂಗಣಕ್ಕೆ ಧಾವಿಸಿ ಘೋಷಣೆಗಳನ್ನು ಕೂಗಿದರು.
ಈ ನಡುವೆ ದಿಲ್ಲಿ ನಗರಪಾಲಿಕೆಗಳು ನಡೆಸುತ್ತಿರುವ ಸೀಲಿಂಗ್ ಅಭಿಯಾನವನ್ನು ಖಂಡಿಸಿ ಆಮ್ಆದ್ಮಿ ಪಕ್ಷದ ಸದಸ್ಯರು ಸದನದ ಅಂಗಣಕ್ಕೆ ಧಾವಿಸಿತ ಪ್ರತಿಭಟನೆ ನಡೆಸಿದರು. ಆಸನಕ್ಕೆ ಹಿಂತಿರುಗುವಂತೆ ಉಪಸ್ಪೀಕರ್ ಅವರು ಎಸ್ಪಿ ಹಾಗೂ ಆಪ್ ಸದಸ್ಯರಿಗೆ ಪದೇ ಪದೇ ಮನವಿ ಮಾಡಿದರೂ, ಪ್ರಯೋಜನವಾಗದೇ ಇದ್ದಾಗ ಅನಿವಾರ್ಯವಾಗಿ ಸದನವನ್ನು ಮಧ್ಯಾಹ್ನದವರೆಗೆ ಮುಂದೂಡಿದರು.
ಜನವರಿ 26ರಂದು ಕಾಸ್ಗಂಜ್ ಪಟ್ಟಣದಲ್ಲಿ ಭುಗಿಲೆದ್ದ ಕೋಮುಗಲಭೆಯಲ್ಲಿ ಓರ್ವ ಮೃತಪಟ್ಟು, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.