ಸೊರಬ: ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಶಾಸಕರಿಂದ ಶಂಕು ಸ್ಥಾಪನೆ
![ಸೊರಬ: ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಶಾಸಕರಿಂದ ಶಂಕು ಸ್ಥಾಪನೆ ಸೊರಬ: ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಶಾಸಕರಿಂದ ಶಂಕು ಸ್ಥಾಪನೆ](https://www.varthabharati.in/sites/default/files/images/articles/2018/02/2/2SORAB-1.jpg)
ಸೊರಬ,ಫೇ.02: ರಾಜ್ಯಾದ್ಯಂತ ಕುಮಾರಸ್ವಾಮಿಯವರ ನಾಯಕತ್ವವನ್ನು ಜನ ಒಪ್ಪಿ ಕೊಂಡಿದ್ದು, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಅಧಿಕಾರ ನೀಡಲಿದ್ದಾರೆ ಎಂದು ಶಾಸಕ ಮಧುಬಂಗಾರಪ್ಪ ತಿಳಿಸಿದರು.
ಶುಕ್ರವಾರ ತಾಲೂಕಿನ ಉದ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿದರಗೇರಿ ಗ್ರಾಮದಲ್ಲಿ ಮುಂದುವರೆದ ಕಾಂಕ್ರೀಟ್ ರಸ್ತೆ ನಿರ್ಮಾಣದ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ತಾಲೂಕಿನಲ್ಲಿಯೂ ಜೆಡಿಎಸ್ ಪಕ್ಷಕ್ಕೆ ಹೆಚ್ಚಿನ ಒಲವಿದ್ದು, ಚುನಾವಣೆಯಲ್ಲಿ ಮತ್ತೊಮ್ಮೆ ತನ್ನನ್ನು ಶಾಸಕರನ್ನಾಗಿ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ 5 ವರ್ಷಗಳಿಂದ ತಾಲೂಕಿನಾದ್ಯಂತ ರಸ್ತೆ, ಕುಡಿಯುವ ನೀರು ಸೇರಿದಂತೆ ಇಲಾಖಾ ಕಟ್ಟಡಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಿದ್ದೇನೆ. ಅಬಿವೃದ್ಧಿ ಕಾರ್ಯಗಳಿಗೆ ಸರ್ಕಾರ ಬಿಡುಗಡೆ ಮಾಡುವ ಅನುದಾನ ಕಡಿಮೆ ಇದ್ದರೂ ವೈಯಕ್ತಿಕ ಆಸಕ್ತಿ ವಹಿಸಿ ಹೆಚ್ಚಿನ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ ತೃಪ್ತಿ ನನಗಿದೆ ಎಂದರು.
ರೈತಾಪಿ ವರ್ಗದ ಜನರಿಗೆ ಆರ್ಥಿಕ ಬಲ ನೀಡುವ ಉದ್ದೇಶದಿಂದ ಬಗರ್ ಹುಕುಂ ಜಮೀನು ಮಂಜೂರಾತಿಗೆ ಹೆಚ್ಚಿನ ಒತ್ತು ನೀಡಿ ಸಾವಿರಾರು ಕುಟುಂಬಗಳಿಗೆ ಹಕ್ಕು ಪತ್ರ ನೀಡಲಾಗಿದೆ ಎಂದು ತಿಳಿಸಿದರು.
ತಾಪಂ ಸದಸ್ಯರಾದ ಬಂಗರಪ್ಪ ಗೌಡ, ಸುನೀಲ್ ಗೌಡ, ಗ್ರಾಪಂ. ಅಧ್ಯಕ್ಷ ಹೆಚ್.ಭೀಮಪ್ಪ, ಸದಸ್ಯರಾದ ಕೆ. ಶಿವಾನಂದ, ಮಾರುತಿ, ಡೇಕಮ್ಮ, ಶಿವಪ್ಪ, ಚಂದ್ರಪ್ಪ, ಗ್ರಾಮ ಸಮಿತಿ ಅಧ್ಯಕ್ಷ ಭೀಮಪ್ಪ, ಪ್ರಮುಖರಾದ ಹೆಚ್.ಗಣಪತಿ, ಕೆರಿಯಪ್ಪ ಯಡಗೊಪ್ಪ, ಶೇಖರ್ ವಕೀಲ, ನಿರಂಜನ ದೇವತಿಕೊಪ್ಪ, ಚಂದ್ರಪ್ಪ, ಡಿ.ಪರಶುರಾಮಪ್ಪ, ಭೀಮಪ್ಪ ಮಾಸ್ತರ್ ಮತ್ತಿತರರಿದ್ದರು.