"ನಾಲ್ವರು ನ್ಯಾಯಾಧೀಶರು ದಾಖಲಿಸಿರುವ ಹೇಳಿಕೆಗಳಲ್ಲಿ ವಿರೋಧಾಭಾಸಗಳಿವೆ"
ನ್ಯಾ.ಲೋಯಾ ಸಾವು ಪ್ರಕರಣ
ಹೊಸದಿಲ್ಲಿ, ಫೆ.3: ಸಿಬಿಐ ವಿಶೇಷ ನ್ಯಾಯಾಧೀಶ ಬಿ.ಎಚ್. ಲೋಯಾ ನಿಗೂಢ ಸಾವಿನ ಬಗ್ಗೆ ಮಹಾರಾಷ್ಟ್ರ ಪೊಲೀಸರ ಎದುರು ನಾಲ್ವರು ನ್ಯಾಯಾಧೀಶರು ದಾಖಲಿಸಿರುವ ಹೇಳಿಕೆಗಳಲ್ಲಿ ವಿರೋಧಾಭಾಸಗಳಿವೆ ಎಂದು ಪ್ರಕರಣದ ಸ್ವತಂತ್ರ ತನಿಖೆಗೆ ಆಗ್ರಹಿಸಿ ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.
ಈ ಮಧ್ಯೆ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಎ.ಎಂ.ಖನ್ವೀಲ್ಕರ್ ಹಾಗೂ ಡಿ.ವೈ.ಚಂದ್ರಚೂಡ್ ಅವರನ್ನು ಒಳಗೊಂಡ ನ್ಯಾಯಪೀಠ, "ಈ ಬಗೆಗೆ ಪುರಾವೆಗಳನ್ನು ಪರಿಶೀಲಿಸಲಾಗುತ್ತಿದೆ" ಎಂದು ಅರ್ಜಿದಾರರ ಪರವಾಗಿ ಹಾಜರಾಗಿರುವ ಹಿರಿಯ ವಕೀಲ ದುಶ್ಯಂತ್ ದವೆ ಅವರಿಗೆ ತಿಳಿಸಿದೆ. ಅರ್ಜಿದಾರರಾದ ಮುಂಬೈ ವಕೀಲರ ಸಂಘದ ಪರವಾಗಿ ದವೆ ವಿಚಾರಣೆಗೆ ಹಾಜರಾಗಿದ್ದರು.
ನ್ಯಾಯಾಧೀಶರು ಲೋಯಾ ಅವರೊಂದಿಗೆ ಆಸ್ಪತ್ರೆಗೆ ತೆರಳಿದ್ದೆವು ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ. ಆದರೆ ಈ ಯಾರೂ ಲೋಯಾ ಸಾವಿಗೀಡಾದ ರಾತ್ರಿ ಆಸ್ಪತ್ರೆಗೆ ಅವರೊಂದಿಗೆ ತೆರಳಿರಲಿಲ್ಲ ಎಂದು ದವೆ ವಾದಿಸಿ, ನ್ಯಾಯಾಧೀಶರ ನಡತೆಯನ್ನು ಪ್ರಶ್ನಿಸಿದ್ದರು. ಆಗ ನ್ಯಾಯಪೀಠ ಮೇಲಿನಂತೆ ಅಭಿಪ್ರಾಯಪಟ್ಟಿದೆ.
ಅಧಿಕೃತ ದಾಖಲೆಗಳ ಪ್ರಕಾರ ಲೋಯಾ (48), ನಾಗ್ಪುರದಲ್ಲಿ 2014ರ ಡಿಸೆಂಬರ್ 1ರಂದು ಸಹೋದ್ಯೋಗಿ ನ್ಯಾಯಾಧೀಶೆ ಸ್ವಪ್ನಾ ಜೋಶಿಯವರ ಮಗಳ ವಿವಾಹ ಕೂಟದಲ್ಲಿ ಪಾಲ್ಗೊಂಡು ವಾಪಸ್ಸಾದ ಬಳಿಕ ಹೃದಯಾಘಾತದಿಂದ ನಿಧನರಾಗಿದ್ದರು.