ಸಮಾಜದಲ್ಲಿ ಕಂದಕ ಸೃಷ್ಠಿಸುವಂತಹ ಸಂಕ್ರಮಣದಲ್ಲಿದ್ದೇವೆ: ಡಾ.ನಿರ್ಮಲಾನಂದನಾಥ ಸ್ವಾಮೀಜಿ
![ಸಮಾಜದಲ್ಲಿ ಕಂದಕ ಸೃಷ್ಠಿಸುವಂತಹ ಸಂಕ್ರಮಣದಲ್ಲಿದ್ದೇವೆ: ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಮಾಜದಲ್ಲಿ ಕಂದಕ ಸೃಷ್ಠಿಸುವಂತಹ ಸಂಕ್ರಮಣದಲ್ಲಿದ್ದೇವೆ: ಡಾ.ನಿರ್ಮಲಾನಂದನಾಥ ಸ್ವಾಮೀಜಿ](https://www.varthabharati.in/sites/default/files/images/articles/2018/02/3/3MDY-1.jpg)
ಮಂಡ್ಯ, ಫೆ.3: ಸಮಾಜದಲ್ಲಿ ಕಂದಕ ಸೃಷ್ಠಿಸುವಂತಹ ಸಂಕ್ರಮಣ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿರುವ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಅದನ್ನು ಸಂಸ್ಕೃತಿಯ ಮೂಲಕ ಬೆಸೆಯುವ ಕಾರ್ಯವನ್ನು ಮಾಡಬೇಕಿದೆ ಎಂದು ಹೇಳಿದ್ದಾರೆ.
ಸಾಂಸ್ಕೃತಿಕ ಒಕ್ಕೂಟ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕಲಾಮಂದಿರದಲ್ಲಿ ಶನಿವಾರ ನಡೆದ ಸಂಕ್ರಾಂತಿ ಸಂಭ್ರಮ ಸಾಂಸ್ಕೃತಿಕ ಉತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮನುಷ್ಯ ಮಾನಸಿಕವಾಗಿ ಪ್ರಬುದ್ಧನಾಗಿದ್ದರೂ, ಭೌತಿಕವಾಗಿ ಪ್ರಬುದ್ಧನಾಗಿಲ್ಲ. ಆದ ಕಾರಣ ಸಮಾಜದಲ್ಲಿ ಅಶಾಂತಿಯ ಹೊಗೆಯಾಡುತ್ತಿದೆ. ಪಂಚೇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕಿದೆ ಎಂದು ಅವರು ತಿಳಿಸಿದರು.
ಎಲ್ಲರನ್ನೂ ಸುಸಂಸ್ಕೃತರನ್ನಾಗಿ ಒಟ್ಟಿಗೆ ಕರೆದೊಯ್ಯುವ ಕೆಲಸ ಆಗಬೇಕಿದೆ. ಇದು ಸಾಂಸ್ಕೃತಿಕ ಉತ್ಸವಗಳು ಮತ್ತು ವಾತಾವರಣದಿಂದ ಮಾತ್ರ ಸಾಧ್ಯ. ಸಂಗೀತದಿಂದ ಮನಸ್ಸು ಪ್ರಫುಲ್ಲವಾಗುತ್ತದೆ. ನೋವು, ದುಃಖ, ದುಮ್ಮಾನಗಳನ್ನು ದೂರ ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಸಂಗೀತವೂ ಸುಲಭವಾಗಿ ಒಲಿಯುವುದಿಲ್ಲ. ಸತತ ಸಾಧನೆ, ಪರಿಶ್ರಮ ಬೇಕಾಗುತ್ತದೆ. ಸಂಗೀತದಲ್ಲಿ ಸ್ವಲ್ಪವೂ ಅಪಸ್ವರ ಬಾರದಂತೆ ನುಡಿಸುವುದು, ನಡೆಯುವುದು ಮುಖ್ಯ. ಹೊಗಳಿಕೆಗೆ ಕಿವಿಕೊಟ್ಟಲ್ಲಿ ಸಂಗೀತ ಸಿದ್ಧಿಸುವುದಿಲ್ಲ ಎಂದು ಅವರು ಕಿವಿಮಾತು ಹೇಳಿದರು.
ದೆಹಲಿ ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಂ.ನಾಗರಾಜು, ಉದ್ಯಮಿ ಎಸ್. ಲೋಕೇಶ್, ಪರಿಸರ ಅಧಿಕಾರಿ ಮಂಜುನಾಥ್, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶಗೌಡ, ಒಕ್ಕೂಟದ ಪದಾಧಿಕಾರಿಗಳಾದ ಎಂ.ಕೆ.ಹರೀಶ್ಕುಮಾರ್, ಜಯರಾಂ, ಸೋಮಶೇಖರ್ ಇತರರು ಉಪಸ್ಥಿತರಿದ್ದರು.
ವಿಕಲಚೇತನ ನೃತ್ಯಪಟು ಎಸ್.ಬೂಸೇಗೌಡ ಹಾಗೂ ನಿವೃತ್ತ ಅಧಿಕಾರಿ ಎಚ್.ಎಸ್. ಗೋವಿಂದೇಗೌಡ ಅವರನ್ನು ಸನ್ಮಾನಿಸಲಾಯಿತು. ಬೆಂಗಳೂರಿನ ಪ್ರವೀಣ್ ಡಿ.ರಾವ್ ಮತ್ತು ತಂಡದವರು ಸಂಗೀತ ಫ್ಯೂಷನ್ ನಡೆಸಿಕೊಟ್ಟರು.