ಮಂಡ್ಯ: ನಿವೇಶನ ಹಕ್ಕು ಪತ್ರಕ್ಕೆ ಒತ್ತಾಯಿಸಿ ಮನವಿ ಸಲ್ಲಿಕೆ
![ಮಂಡ್ಯ: ನಿವೇಶನ ಹಕ್ಕು ಪತ್ರಕ್ಕೆ ಒತ್ತಾಯಿಸಿ ಮನವಿ ಸಲ್ಲಿಕೆ ಮಂಡ್ಯ: ನಿವೇಶನ ಹಕ್ಕು ಪತ್ರಕ್ಕೆ ಒತ್ತಾಯಿಸಿ ಮನವಿ ಸಲ್ಲಿಕೆ](https://www.varthabharati.in/sites/default/files/images/articles/2018/02/3/3MDY-2.jpg)
ಮಂಡ್ಯ, ಫೆ.3: ನಿವೇಶನ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿ ನೇತೃತ್ವದಲ್ಲಿ ಫಲಾನುಭವಿಗಳು ಶನಿವಾರ ತಹಸೀಲ್ದಾರ್ ನಾಗೇಶ್ ಅವರಿಗೆ ಮನವಿ ಸಲ್ಲಿಸಿದರು.
ಕಳೆದ ತಿಂಗಳ 18 ರಿಂದ 26ರವರೆಗೆ ಹಕ್ಕುಪತ್ರಕ್ಕಾಗಿ ಫಲಾನುಭವಿಗಳು ಅನಿರ್ಧಿಷ್ಟಾವಧಿ ಧರಣಿ ಆರಂಭಿದ್ದ ವೇಳೆ ಹಕ್ಕುಪತ್ರ ನೀಡಲು ಕ್ರಮವಹಿಸಲಾಗುವುದು, ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕೆಂದು ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಈ ಮನವಿ ಸಲ್ಲಿಸಲಾಯಿತು.
ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಮಾಯಿಸಿದ ಫಲಾನುಭವಿಗಳು ಅಲ್ಲಿಂದ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿ ತಿಂಗಳೊಳಗೆ ನಿವೇಶನ ಹಕ್ಕುಪತ್ರ ವಿತರಿಸಲು ಕ್ರಮವಹಿಸಬೇಕೆಂದು ಒತ್ತಾಯಿಸಿದರು.
ನಗರವ್ಯಾಪ್ತಿ ಫಲಾನುಭವಿಗಳ ಅರ್ಜಿಯನ್ನು ಸ್ವೀಕರಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಜತೆ ಮಾತಿನ ಚಕಮಕಿ ನಡೆಯಿತು. ನಂತರ ಪೊಲೀಸರು ಮಧ್ಯೆಪ್ರವೇಶಿಸಿದ ಸಮಾಧಾನಪಡಿಸಿದರು.
ಅಂತಿಮವಾಗಿ ನಗರ ವ್ಯಾಪ್ತಿಯ ಅರ್ಜಿಗಳನ್ನೂ ಸ್ವೀಕರಿಸಿದ ತಹಸೀಲ್ದಾರ್, ಜಾಗ ಗುರುತಿಸಿ ಸರಕಾರಕ್ಕೆ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದರು.
ಹೋರಾಟ ಸಮಿತಿ ಸಂಚಾಲಕ ಎಂ.ಬಿ.ನಾಗಣ್ಣಗೌಡ, ಚಲನಚಿತ್ರ ನಿರ್ದೇಶಕ ಅಭಿಗೌಡ, ಆರ್.ಬಾಬು ವಿಕ್ಟರ್, ರೇಷ್ಮಾ, ಫರ್ಹಾದ್, ಫಾತಿಮಾ, ಇತರರಿದ್ದರು.