ರಾಜ್ಯದ ಜನತೆಗೆ ಈ ಬಾರಿ ಜೆಡಿಎಸ್ ಅನಿವಾರ್ಯವಾಗಿದೆ: ಬಿ.ಹೆಚ್.ಹರೀಶ್
ಮನೆಮನೆಗೆ ಕುಮಾರಣ್ಣ ಅಭಿಯಾನಕ್ಕೆ ಚಾಲನೆ

ಚಿಕ್ಕಮಗಳೂರು, ಫೆ.4: ಬಿಜೆಪಿ ಮತ್ತು ಕಾಂಗ್ರೆಸ್ ನ ದುರಾಡಳಿತದಿಂದ ಬೇಸತ್ತಿರುವ ರಾಜ್ಯದ ಜನತೆಗೆ ಈ ಬಾರಿ ಜೆಡಿಎಸ್ ಅನಿವಾರ್ಯವಾಗಿದೆ ಎಂದು ಪಕ್ಷದ ಸಂಭವನೀಯ ಅಭ್ಯರ್ಥಿ ಬಿ.ಹೆಚ್.ಹರೀಶ್ ಹೇಳಿದರು.
ಅವರು ಬಾನುವಾರ ನಗರದ ಗೃಹಮಂಡಳಿ ಬಡಾವಣೆಯಲ್ಲಿ ಜೆಡಿಎಸ್ ಹಮ್ಮಿಕೊಂಡಿದ್ದ ಮನೆಮನೆಗೆ ಕುಮಾರಣ್ಣ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ವ್ಯಾಪಕ ಭ್ರಷ್ಟಾಚಾರ, ದುರಾಡಳಿತ, ಸ್ವಜನ ಪಕ್ಷಪಾತ ನಡೆಸಿವೆ. ಇದರಿಂದ ರಾಜ್ಯದ ಜನತೆ ರೋಸಿ ಹೋಗಿದ್ದಾರೆ, ಬರಗಾಲದಿಂದ ಕಂಗೆಟ್ಟು ಆತ್ಮಹತ್ಯೆ ಹಾದಿ ತುಳಿದಿರುವ ರೈತರ ನೆರವಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಧಾವಿಸದೇ ರಾಜಕಾರಣದಲ್ಲಿ ತೊಡಗಿರುವುದು ಜನರನ್ನು ರೊಚ್ಚಿಗೆಬ್ಬಿಸಿದೆ ಎಂದರು.
ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಈ ಬಾರಿ ಬದಲಾವಣೆಯ ಗಾಳಿ ಬೀಸಿದೆ. ಜನ ಜೆಡಿಎಸ್ ಪರ ಸ್ಪಷ್ಟವಾಗಿ ವಾಲಿದ್ದಾರೆ ಎಂದ ಅವರು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಈ ಸನ್ನಿವೇಶವನ್ನು ಸಮಪರ್ಕವಾಗಿ ಬಳಸಿಕೊಳ್ಳಬೇಕು. ಆಂತರಿಕ ಭಿನ್ನಾಭಿಪ್ರಾಯವನ್ನು ಬದಿಗೊತ್ತಿ ಪಕ್ಷವನ್ನು ಅಧಿಕಾರಕ್ಕೆ ತರಲು ದುಡಿಯಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ವಕ್ತಾರ ಹೊಲದಗದ್ದೆ ಗಿರೀಶ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಜನಪರ ಕಾರ್ಯಕ್ರಮಗಳು ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ನ ಕೈ ಹಿಡಿಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಡಿ.ರಮೇಶ್ ಮಾತನಾಡಿ, ಕಾರ್ಯಕರ್ತರು ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಪಕ್ಷವನ್ನು ಗೆಲ್ಲಿಸಲು ಪಣತೊಡಬೇಕು ಎಂದು ಮನವಿ ಮಾಡಿದರು.
ಶ್ರೀ ಪಂಚಮುಖಿ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಮಧ್ಯಾಹ್ನದ ವರೆಗೆ ಬಡಾವಣೆಯ ಮನೆಮನೆಗಳಿಗೆ ತೆರಳಿ ಜೆಡಿಎಸ್ ಸರ್ಕಾರದ ಸಾಧನೆಗಳನ್ನು ವಿವರಿಸಿದರು.
ಪಕ್ಷದ ಮುಖಂಡರಾದ ಜಿ.ಹೆಚ್.ಚಂದ್ರಪ್ಪ, ಜಯರಾಜ್ ಅರಸ್, ಐ.ಡಿ.ಚಂದ್ರಶೇಖರ್, ಜಮೀಲ್ ಅಹಮದ್, ಭೈರೇಗೌಡ, ಯೋಗೀಶ್, ಯು.ಸಿ.ಉಮೇಶ್, ನಗರಸಭೆ ಸದಸ್ಯ ದಿನೇಶ್ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.







