ಬಿಜೆಪಿ ಕಾರ್ಯಕರ್ತರಿಗೆ 'ಪಕೋಡಾ' ತಿನ್ನಿಸಿ ಪ್ರತಿಭಟನೆ !
ಬೆಂಗಳೂರಿನಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ

ಬೆಂಗಳೂರು, ಫೆ. 4: ‘ಪಕೋಡಾ ಮಾರಾಟ ಮಾಡುವುದು ಒಂದು ಉದ್ಯೋಗವಲ್ಲವೇ ? ಎಂಬ ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ವಿರೋಧಿಸಿ, ಪ್ರತಿಭಟನೆ ನಡೆಸಿದ ಕೆಲ ಯುವಕರು, ‘ಬಿಜೆಪಿ ಕಾರ್ಯಕರ್ತರಿಗೆ ಪಕೋಡಾ ತಿನ್ನಿಸಿ’ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ರವಿವಾರ ನಗರದ ಅರಮನೆ ಮೈದಾನದಲ್ಲಿ ಬಿಜೆಪಿಯ ಪರಿವರ್ತನಾ ಯಾತ್ರೆ ಸಮಾರಂಭ ಹಿನ್ನೆಲೆಯಲ್ಲಿ ನಾನಾ ಕಡೆಗಳಿಂದ ಬಸ್ ಗಳಲ್ಲಿ ಬರುತ್ತಿದ್ದ ಬಿಜೆಪಿ ಕಾರ್ಯಕರ್ತರಿಗೆ ಕೆಲ ಯುವಕರು, ಪದವೀಧರರ ವೇಶ ಹಾಕಿಕೊಂಡು 'ಪಕೋಡಾ' ಹಂಚಿದರು.
ಪದವೀಧರ ಯುವಕರು, ಸ್ವಾಭಿಮಾನಿ ಪಕೋಡಾ ಸ್ಟಾಲ್ ತೆರೆದು, ಈರುಳ್ಳಿ ಬೋಂಡಾ, ಪಕೋಡಾ ತಯಾರಿಸಿ ಸಾರ್ವಜನಿಕರಿಗೆ ಮಾರಾಟ ಮಾಡುವ ಮೂಲಕ ವಿದ್ಯಾವಂತ ನಿರುದ್ಯೋಗಿಗಳನ್ನು ಅಣಕಿಸುತ್ತಿರುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿದರು.
ಚುನಾವಣೆ ಸಮಯದಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಭರವಸೆ ನೀಡಿ, ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಉದ್ಯೋಗ ಸೃಷ್ಟಿ ಮಾಡಲು ವಿಫಲರಾಗಿದ್ದಾರೆ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದ್ದ ಪ್ರಧಾನಿ ಅವರು ಪಕೋಡ ಮಾರುವುದು ಉದ್ಯೋಗವಲ್ಲವೇ ಎಂದು ಪ್ರಶ್ನಿಸಿ ನಿರುದ್ಯೋಗಿ ಯುವಕರನ್ನು ಅಣಕಿಸಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಸ್ವಯಂ ಉದ್ಯೋಗಸ್ಥರಿಗೆ ಸಾಮಾಜಿಕ ಭದ್ರತೆಯನ್ನು ರೂಪಿಸುವ ಯೋಜನೆಯನ್ನು ರೂಪಿಸಲು 100 ದಿನಗಳ ಕಾಲಾವಕಾಶ ತೆಗೆದುಕೊಳ್ಳಿ. ಆದರೆ, ರಾಜ್ಯಕ್ಕೆ ಭೇಟಿ ಮಾಡುವ ಸಂದರ್ಭದಲ್ಲಿ ಈ ಯೋಜನೆಯನ್ನು ಘೋಷಣೆ ಮಾಡಿ ಎಂದು ಒತ್ತಾಯಿಸಿದರು.
ಬಂಧನ: ಪ್ರತಿಭಟನಾನಿರತ ಯುವರಕನ್ನು ಪೊಲೀಸರು ವಶಕ್ಕೆ ಪಡೆದರು. ಅವರೆಲ್ಲಾ ನಗರದ ವಿವಿಧ ಕಾಲೇಜಿನ ವಿದ್ಯಾರ್ಥಿಗಳೆಂದು ತಿಳಿದುಬಂದಿದೆ.







