ಮೈಸೂರು: ನೂತನ ಮೇಯರ್ ಭಾಗ್ಯವತಿ ವಿರುದ್ಧ ಪ್ರತಿಭಟನೆ
![ಮೈಸೂರು: ನೂತನ ಮೇಯರ್ ಭಾಗ್ಯವತಿ ವಿರುದ್ಧ ಪ್ರತಿಭಟನೆ ಮೈಸೂರು: ನೂತನ ಮೇಯರ್ ಭಾಗ್ಯವತಿ ವಿರುದ್ಧ ಪ್ರತಿಭಟನೆ](https://www.varthabharati.in/sites/default/files/images/articles/2018/02/4/Protest Photos.jpg)
ಮೈಸೂರು,ಫೆ.4: ನೂತನ ಮೇಯರ್ ಭಾಗ್ಯವತಿ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಅವರು ಪ್ರತಿನಿಧಿಸುವ ವಾರ್ಡ್ 23ರ ನಿವಾಸಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ವಿಯಶ್ರೀಪುರದ ಬಳಿ ರವಿವಾರ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ನಗರ ಪಾಲಿಕೆ ವಾರ್ಡ್ ನಂ.23 ಸದಸ್ಯೆ ಭಾಗ್ಯವತಿ ಅವರು ಆಯ್ಕೆ ಮಾಡಿದ ಮತದಾರರನ್ನು ಮರೆತು, ಅಧಿಕಾರಕ್ಕಾಗಿ ಬೇರೆ ಪಕ್ಷಗಳೊಂದಿಗೆ ಕೈ ಜೋಡಿಸಿದ್ದಾರೆ. ಇಂತಹ ಪ್ರತಿನಿಧಿ ನಮಗೆ ಬೇಕಿಲ್ಲ, ಕೂಡಲೇ ರಾಜೀನಾಮೆ ನೀಡಬೇಕೆಂದು ಗಂಗೋತ್ರಿ ಲೇಔಟ್ ನಾಗರಿಕರ ಹಿತರಕ್ಷಣಾ ಸಮಿತಿ ಸದಸ್ಯರು ಆಗ್ರಹಿಸಿದರು.
ಪ್ರಜಾತಂತ್ರ ವ್ಯವಸ್ಥೆಗೆ ವಿರುದ್ಧವಾಗಿ ಅನ್ಯ ಪಕ್ಷಗಳ ಸದಸ್ಯರೊಡನೆ ಕೈಜೋಡಿಸಿ ವಾಮ ಮಾರ್ಗದಿಂದ ಮೇಯರ್ ಆಗಿದ್ದಾರೆ. ಎಲ್ಲರಿಗೂ ಮೋಸ, ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಅರೋಪಿಸಿ, ಭಾಗ್ಯವತಿರವರು ಈ ಕೂಡಲೇ ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರಾಜೇಶ್, ಭಾಸ್ಕರ್, ಮಾನು, ಅನಸೂಯ, ಲೋಕೇಶ್, ರಾಜೀವ್, ಸೋಮಶೇಖರ್ ಸೇರಿದಂತೆ ಹಲವರು ಭಾಗವಹಿಸಿದ್ದರು.