ಯುವಜನತೆಯ ಸ್ವಉದ್ಯೋಗದಿಂದ ದೇಶ ಬಲಿಷ್ಠ: ಕೊಡಂಚ

ಉಡುಪಿ, ಫೆ.5: ಯುವಜನತೆ ಉದ್ಯೋಗ ಅರಸಿಕೊಂಡು ಹೋಗುವ ಬದಲು ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಬಳಸಿ ಉದ್ಯಮ ಸ್ಥಾಪಿಸಿದರೆ ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆಯಲು ಸಾಧ್ಯ. ಇದರಿಂದ ದೇಶ ಕೂಡ ಬಲಿಷ್ಠವಾಗುತ್ತದೆ ಎಂದುಉಡುಪಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಕೃಷ್ಣರಾವ್ ಕೊಡಂಚ ಅಭಿಪ್ರಾಯ ಪಟ್ಟಿದ್ದಾರೆ.
ಉಡುಪಿ ಪೂರ್ಣಪ್ರಜ್ಞ ಕಾಲೇಜು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾಣಿಜ್ಯ ವಿಭಾಗ ಮತ್ತು ವ್ಯವಹಾರ ಅಧ್ಯಯನ ಕೇಂದ್ರ ಹಾಗೂ ಉಡುಪಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಯೋಗದಲ್ಲಿ ಸೋಮವಾರ ಕೇಂದ್ರ ದಲ್ಲಿ ಜರಗಿದ ‘ಕೇಂದ್ರ ಬಜೆಟ್ 2018-19’ ಕುರಿತ ತಜ್ಞ ಸಮಿತಿಯ ಚರ್ಚೆ ಯಲ್ಲಿ ಅವರು ಮಾತನಾಡುತಿದ್ದರು.
ಪೂರ್ಣಪ್ರಜ್ಞ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಡಾ. ಜಿ.ಎಸ್.ಚಂದ್ರಶೇಖರ್ ಮಾತನಾಡಿ, ಪ್ರಸ್ತುತ ಉದ್ಯೋಗ ಕ್ಷೇತ್ರ ಕೇವಲ ಪದವಿ ಅಂಕಗಳಲ್ಲದೇ, ವೃತ್ತಿಗೆ ಅಗತ್ಯವಾಗ ಕೌಶಲ್ಯಗಳನ್ನು ಅಪೇಕ್ಷಿಸುತ್ತಿದೆ. ಸಂದರ್ಶನಕ್ಕೆ ತೆರಳುವ ವಿದ್ಯಾರ್ಥಿಗಳಲ್ಲಿ ಸಂವಹನ ಹಾಗೂ ಆತ್ಮವಿಶ್ವಾಸದ ಕೊರತೆ ಕಾಣುತ್ತಿದೆ. ವೃತ್ತಿಗೆ ಪೂರಕವಾದ ತರಬೇತಿ ಕಾರ್ಯಕ್ರಮಗಳನ್ನು ಕಾಲೇಜು ಮಟ್ಟದಲ್ಲಿ ಹಮ್ಮಿಕೊಳ್ಳಬೇಕಾಗಿದೆ ಎಂದರು.
ಶಿಕ್ಷಣ ತಜ್ಞ ಪ್ರೊ.ಗಣೇಶ್ ಭಟ್ಟಾಚಾರ್ಯ, ಲೆಕ್ಕಪರಿಶೋಧಕ ಎಂ.ಶ್ರೀಧರ ಕಾಮತ್, ಕೆ.ನರಸಿಂಹ ನಾಯಕ್, ಎಲ್.ಶ್ರೀಕೃಷ್ಣ ಆಚಾರ್ಯ ಮುಖ್ಯ ಅತಿಥಿ ಗಳಾಗಿದ್ದರು. ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಗದೀಶ್ ಶೆಟ್ಟಿ, ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ವಿ.ವಿಷ್ಣು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ದಿವ್ಯ ಸ್ವಾಗತಿಸಿದರು. ಸುಶೀಲ್ ವಂದಿಸಿದರು.







