ಬನ್ನಂಜೆ; ಫೆ.8ರಂದು 450 ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ
ಉಡುಪಿ, ಫೆ.5: ಶ್ರೀರಾಮ್ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಶ್ರೀರಾಮ್ ಟ್ರಾನ್ಸ್ಪೋರ್ಟ್ ಫೈನಾನ್ಸ್ ಕಂಪೆನಿ ಲಿಮಿಟೆಡ್ ಆಶ್ರಯದಲ್ಲಿ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ಫೆ.8ರಂದು ಬೆಳಗ್ಗೆ 10:30ಕ್ಕೆ ಬನ್ನಂಜೆ ಶ್ರೀನಾರಾಯಣ ಗುರು ಸಭಾಭವನದಲ್ಲಿ ಆಯೋಜಿಸಲಾಗಿದೆ.
ಸಾರಿಗೆ ಉದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ಉಡುಪಿ ಜಿಲ್ಲೆಯ ಎಂಟನೆ ತರಗತಿಯಿಂದ ಪಿಯುಸಿವರೆಗಿನ ಶೇ.60ಕ್ಕಿಂತ ಹೆಚ್ಚಿನ ಅಂಕ ಪಡೆದ ಪ್ರತಿ ಭಾನ್ವಿತ 450 ಮಕ್ಕಳಿಗೆ ತಲಾ 3000ರೂ.ನಂತೆ ಒಟ್ಟು 13.50 ಲಕ್ಷ ರೂ. ವಿದ್ಯಾರ್ಥಿ ವೇತನವನ್ನು ವಿತರಿಸಲಾಗುವುದು ಎಂದು ಫೈನಾನ್ಸ್ನ ಮಂಗಳೂರು ವಿಭಾಗದ ಪ್ರಾದೇಶಿಕ ವ್ಯವಹಾರ ಮುಖ್ಯಸ್ಥ ಶರತ್ಚಂದ್ರ ಭಟ್ ಸುದ್ದಿಗೋಷ್ಠಿ ಯಲ್ಲಿಂದು ತಿಳಿಸಿದ್ದಾರೆ.
ಸಮಾರಂಭವನ್ನು ಫೈನಾನ್ಸ್ನ ಎಂಡಿ ಉಮೇಶ್ ರೇವನ್ಕರ್ ಉದ್ಘಾಟಿಸಲಿ ವರು. ಸಚಿವ ಪ್ರಮೋದ್ ಮಧ್ವರಾಜ್ ವಿದ್ಯಾರ್ಥಿ ವೇತನ ವಿತರಿಸಲಿರುವರು. ಸ್ವಚ್ಛ ಭಾರತ್ ಕಾರ್ಯಕ್ರಮದಡಿ ಸಂತೆಕಟ್ಟೆ ಕಲ್ಯಾಣಪುರದಲ್ಲಿ ಜಿಲ್ಲಾ ಟ್ಯಾಕ್ಸಿ ಮೆನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ಸಹಕಾರದೊಂದಿಗೆ ನಿರ್ಮಿಸ ಲಾದ ಸಾರ್ವಜನಿಕ ಶೌಚಾಲಯವನ್ನು ಇದೇ ದಿನ ಉದ್ಘಾಟಿಸಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ವಿಭಾಗದ ಪ್ರಾದೇಶಿಕ ಕಲೆಕ್ಷನ್ ಹೆಡ್ ನಾಗರಾಜ್ ಬಿ., ಪ್ರಮೋದ್ ಅಂಚನ್, ಕುಂದಾಪುರ ಶಾಖಾ ವ್ಯವಸ್ಥಾಪಕ ಸದಾಶಿವ, ಉಡುಪಿ ಶಾಖಾ ವ್ಯವಸ್ಥಾಪಕ ಚೇತನ್ ಅರಸ್ ಉಪಸ್ಥಿತರಿದ್ದರು.







