ಹಿಂಸಾಚಾರದ ಮನೋಭಾವನೆ ಹೆಚ್ಚಿದೆ: ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ
ಬೆಂಗಳೂರು, ಫೆ.5: ಮನಸ್ಸನ್ನು ಜಡವಾಗಿಟ್ಟುಕೊಳ್ಳುವುದರಿಂದ ಹಿಂಸಾಚಾರದ ಮನೋಭಾವನೆ ಹೆಚ್ಚಾಗುತ್ತಿದೆ ಎಂದು ಹಿರಿಯ ಸಾಹಿತಿ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.
ಸೋಮವಾರ ನಗರದ ಅರಮನೆ ರಸ್ತೆಯ ಜೈನ್ ವಿಶ್ವವಿದ್ಯಾನಿಯಲದ ಸಭಾಂಗಣದಲ್ಲಿ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್, ಕನ್ನಡ ಸಾಹಿತ್ಯ ರಂಗದ ವತಿಯಿಂದ ಡಯಾಸ್ಪೋರಾ ಸಾಂಸ್ಕೃತಿಕ ಆಯಾಮಗಳು ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಮಾಜ ಹಿಂಸೆಗೆ ಗುರಿಯಾಗುತ್ತಿದೆ. ಮನಸ್ಸನ್ನು ಜಡವಾಗಿಟ್ಟುಕೊಳ್ಳುವುದರಿಂದ ಹಿಂಸಾಚಾರದ ಮನೋಭಾವನೆ ಹೆಚ್ಚಾಗುತ್ತಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ವಿಷಯಗಳ ಕುರಿತು ಸಂವಾದ ಕಾರ್ಯಕ್ರಮಗಳು ನಡೆಯಬೇಕು. ಇದರಿಂದ ಯುವಕರಲ್ಲಿ ಚಿಂತನೆ ಮೂಡಿಸಲು ಸಾಧ್ಯ ಎಂದು ಹೇಳಿದರು.
ಹಿರಿಯ ಚಿಂತಕ ಲಕ್ಷ್ಮೀಶ್ ತೋಳ್ಪಾಡಿ ಮಾತನಾಡಿ, ವ್ಯಾಕರಣ ಬದ್ಧವಾದ ಮಾತುಗಳು ಅಂತರಂಗದ ಮಾತುಗಳಾಗಿರುವುದಿಲ್ಲ. ಅಲ್ಲದೇ, ವ್ಯಾಕರಣಬದ್ಧ ಮಾತುಗಳು ಮನದ ಮಾತುಗಳನ್ನು ಮರೆ ಮಾಚುತ್ತವೆ. ಅನ್ಯಭಾಷೆಯನ್ನು ಮಾತನಾಡಲು ಇಚ್ಛಿಸುವಾಗ ವ್ಯಾಕರಣದ ಕಡೆ ಹೆಚ್ಚು ಗಮನಹರಿಸಲಾಗುತ್ತದೆ. ಇದರಿಂದ ಆಂತರ್ಯದ ಮಾತುಗಳು ಹೊರಬರುವುದಿಲ್ಲ ಎಂದರು.
ಯುವಕರು ಸಾಧನೆ ಮಾಡಬೇಕಾದರೆ, ಏಕಾಗ್ರತೆ ಇರಬೇಕು. ಒಂದೆಡೆಯಿದ್ದು ಇನ್ನೊಂದೆಡೆ ಯೋಚಿಸುವ ಅನ್ಯ ಮಾನಸಿಕತೆಯನ್ನು ಬಿಡಬೇಕು ಎಂದು ವಿದ್ಯಾರ್ಥಿಗಳಿಗೆ ಲಕ್ಷ್ಮೀಶ್ ತೋಳ್ಪಾಡಿ ಕಿವಿಮಾತು ಹೇಳಿದರು.
ವಿಚಾರ ಸಂಕಿರಣದಲ್ಲಿ ಕನ್ನಡ ಸಾಹಿತ್ಯರಂಗದ ಅಧ್ಯಕ್ಷ ಮೈ.ಶ್ರೀ. ನಟರಾಜ್, ಲೇಖಕ ವಿಕ್ರಂ ಹತ್ವಾರ್, ಲೇಖಕಿ ನಳಿನಿ ಮೈಯ, ವಿಜ್ಞಾನಿ ನಾಗ ಐತಾಳ್ ಸೇರಿದಂತೆ ಪ್ರಮುಖರಿದ್ದರು.