ವೇತನದಾರರು ಮತ್ತು ಉದ್ಯಮಿಗಳ ತೆರಿಗೆ ಪಾವತಿಯಲ್ಲಿ ಅಸಮಾನತೆ:ಆಧಿಯಾ
ಹೊಸದಿಲ್ಲಿ.ಫೆ.5: ವೇತನದಾರ ವರ್ಗದವರು ಮತ್ತು ಉದ್ಯಮಿಗಳು ಪಾವತಿಸುವ ಆದಾಯ ತೆರಿಗೆಗಳಲ್ಲಿ ಅಸಮಾನತೆಯಿದ್ದು, ಆದಾಯ ತೆರಿಗೆ ರಿಟರ್ನ್ಗಳನ್ನು ಸಲ್ಲಿಸುವ ಏಳು ಲಕ್ಷ ಕಂಪನಿಗಳ ಪೈಕಿ ಶೇ.50ರಷ್ಟು ಶೂನ್ಯ ಅಥವಾ ಋಣಾತ್ಮಕ ಆದಾಯವನ್ನು ತೋರಿಸುತ್ತವೆ ಎಂದು ಹಣಕಾಸು ಕಾರ್ಯದರ್ಶಿ ಹಸ್ಮುಖ್ ಆಧಿಯಾ ಅವರು ಸೋಮವಾರ ಇಲ್ಲಿ ತಿಳಿಸಿದರು.
ಸರಕಾರವು ದೋಷರಹಿತ ತಂತ್ರಜ್ಞಾನ ವ್ಯವಸ್ಥೆಯನ್ನು ಬಳಸಿ ವಿವಿಧ ವರ್ಗಗಳ ಜನರು ಪಾವತಿಸುತ್ತಿರುವ ತೆರಿಗೆಗಳಲ್ಲಿನ ಅಸಮಾನತೆಯನ್ನು ನಿವಾರಿಸಲು ಶ್ರಮಿಸುತ್ತಿದೆ ಎಂದರು.
ಜಿಎಸ್ಟಿ ಜಾರಿ ಮತ್ತು ನೋಟು ಅಮಾನ್ಯದ ಬಳಿಕ ಆದಾಯ ತೆರಿಗೆಯನ್ನು ಪಾವತಿಸುತ್ತಿರುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ ಮತ್ತು ಭಾರತವನ್ನು ತೆರಿಗೆ ವಿಧೇಯ ಸಮಾಜವನ್ನಾಗಿಸಲು ಸಂಘಟಿತ ಪ್ರಯತ್ನಗಳು ಜಾರಿಯಲ್ಲಿವೆ ಎಂದ ಅವರು, ನೂತನ ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ಇ-ವೇ ಬಿಲ್ ಮತ್ತು ಇನ್ವಾಯ್ಸ್ನ ತಾಳೆ ಹಾಕುವಿಕೆಯು ತೆರಿಗೆ ವಂಚನೆಯನ್ನು ತಡೆಗಟ್ಟಲು ನೆರವಾಗಲಿದೆ ಎಂದು ಹೇಳಿದರು.
ಭಾರತೀಯ ಕೈಗಾರಿಕೆಗಳ ಒಕ್ಕೂಟ(ಸಿಐಐ)ದ ಬಜೆಟೋತ್ತರ ಸಭೆಯಲ್ಲಿ ಮಾತನಾಡುತ್ತಿದ್ದ ಆಧಿಯಾ, ವೈಯಕ್ತಿಕ ಆದಾಯ ತೆರಿಗೆ ವರ್ಗದಲ್ಲಿ ವೇತನದಾರರು ಉದ್ಯಮಿಗಳಿಗಿಂತ ಹೆಚ್ಚಿನ ತೆರಿಗೆಯನ್ನು ಪಾವತಿಸುತ್ತಿದ್ದಾರೆ ಎನ್ನುವುದನ್ನು ಅಂಕಿಅಂಶಗಳ ಸಹಿತ ವಿವರಿಸಿದರು.
ಜಿಎಸ್ಟಿಗೆ ಅತ್ಯಂತ ಭರವಸೆದಾಯಕ ಭವಿಷ್ಯವಿದೆ. ಜಿಎಸ್ಟಿಯಲ್ಲಿ ಪ್ರಾಮಾಣಿಕತೆಗೆ ಹೆಚ್ಚಿನ ಪ್ರೋತ್ಸಾಹ ದೊರೆಯಲಿದೆ ಎಂದರು.
ಕಾರ್ಪೊರೇಟ್ ತೆರಿಗೆ ದರವನ್ನು ಕಡಿತಗೊಳಿಸಬೇಕೆಂಬ ಬೇಡಿಕೆಯ ಕುರಿತು ಅವರು, ಜಾಗತಿಕವಾಗಿ ವೈಯಕ್ತಿಕ ಆದಾಯ ತೆರಿಗೆಯಿಂದ ಸಂಗ್ರಹವಾಗುವ ಆದಾಯವು ಕಾರ್ಪೊರೇಟ್ ಆದಾಯ ತೆರಿಗೆಗೆ ಹೋಲಿಸಿದರೆ ತೀರಾ ಹೆಚ್ಚಿದೆ. ಭಾರತದಲ್ಲಿ ವೈಯಕ್ತಿಕ ಆದಾಯ ತೆರಿಗೆ ಸಂಗ್ರಹ ಹೆಚ್ಚಬೇಕಿದೆ. ಹಾಗಾದರೆ ಇನ್ನಷ್ಟು ರಿಯಾಯಿತಿಗಳನ್ನು ನೀಡಲು ಸಾಧ್ಯ ಎಂದು ಹೇಳಿದರು.
2016,ನವೆಂಬರ್ನಲ್ಲಿ ನೋಟು ನಿಷೇಧದ ಬಳಿಕ ಬ್ಯಾಂಕುಗಳಲ್ಲಿ ಭಾರೀ ಠೇವಣಿಯನ್ನಿರಿಸಿದವರಿಗೆ ಕಳುಹಿಸಲಾಗಿರುವ ನೋಟಿಸ್ಗಳಿಗೆ ಸಂಬಂಧಿಸಿದಂತೆ ಆಧಿಯಾ, ಈ ಪೈಕಿ ಕೆಲವರು ಅತ್ಯಂತ ಕಡಿಮೆ ಆದಾಯವನ್ನು ತೋರಿಸಿ ಆದಾಯ ತೆರಿಗೆ ರಿಟರ್ನ್ಗಳನ್ನು ಸಲ್ಲಿಸಿದ್ದರೆ, ಹೆಚ್ಚಿನವರು ರಿಟರ್ನ್ಗಳನ್ನು ಸಲ್ಲಿಸಿಲ್ಲ ಎಂದು ತಿಳಿಸಿದರು.
ಈ ನೋಟಿಸುಗಳಿಗೆ ಮುಂದಿನ 2-3 ವರ್ಷಗಳಲ್ಲಿ ತಾರ್ಕಿಕ ಅಂತ್ಯ ಕಾಣಿಸಲಾ ಗುವುದು. ಹೀಗಾಗಿ ಅಧಿಕ ತೆರಿಗೆ ಹರಿವು ಮುಂದಿನ ವರ್ಷವೂ ಇರಲಿದೆ ಮತ್ತು ನಂತರದ ವರ್ಷವೂ ಇರಬಹುದು ಎಂದು ಅವರು ಹೇಳಿದರು.