ತೆಲಂಗಾಣದಲ್ಲಿ ಶೀಘ್ರ ಮುಚ್ಚಲಿದೆ 5 ಸಬ್ ಜೈಲುಗಳು !: ಕಾರಣವೇನು ಗೊತ್ತೆ ?
ಹೈದರಾಬಾದ್,ಫೆ.6: ಕೈದಿಗಳ ಸಂಖ್ಯೆ ಕಡಿಮೆಯಾದ ಹಿನ್ನೆಲೆಯಲ್ಲಿ ತೆಲಂಗಾಣದಲ್ಲಿ ಐದು ಸಬ್ಜೈಲುಗಳನ್ನು ಮುಚ್ಚಲಾಗುತ್ತಿದೆ.ಜೈಲು ಇಲಾಖೆಯ ನೇತೃತ್ವದಲ್ಲಿರುವ ನವೀಕರಣ-ಪುನರ್ವಸತಿ ಕ್ರಮಗಳ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಜೈಲು ನಿರ್ದೇಶಕ ಕನರಲ್ ವಿಕೆ ಸಿಂಗ್ ಹೇಳಿದ್ದಾರೆ.
ತೆಲಂಗಾಣದಲಿ ಒಟ್ಟು 35 ಸಬ್ ಜೈಲುಗಳಿವೆ. ಈ ವರ್ಷದ ಕೊನೆಯಲ್ಲಿ ಇನ್ನೂ ಮೂರು ಸಬ್ ಜೈಲುಗಳನ್ನು ಮುಚ್ಚುವ ಚಿಂತನೆ ನಡೆಯುತ್ತಿದೆ. ನಿಝಾಮಾಬಾದ್ ಜಿಲ್ಲೆಯ ಆರ್ಮೂರ್, ಬೋಧನ್ ಜೈಲುಗಳು, ವಾರಂಗಲ್ನ ನರಸಾಂಪೆ, ಪಾರರ್ಕಲ್ ಜೈಲುಗಳು, ಕಮ್ಮಂನ ಇನ್ನೊಂದು ಜೈಲುಗಳನ್ನು ಮುಚ್ಚಲಾಗುತ್ತಿದೆ.
ಆರ್ಮೂರ್ ಜೈಲಿನಲ್ಲಿ ಹತ್ತು ಮಂದಿಯನ್ನು ಇರಿಸಬಹುದಾದರೂ ಇಲ್ಲಿ ಇಬ್ಬರು ಮಾತ್ರ ಇದ್ದಾರೆ. ಬೋಧನಿನಲ್ಲಿ 17 ಮಂದಿಯನ್ನು ಇರಿಸಬಹುದು. ಆದರೆ ಇಲ್ಲಿಯೂ ಇಬ್ಬರೇ ಇದ್ದಾರೆ. 30 ಮಂದಿ ಕೈದಿಗಳನ್ನು ಇರಿಸುವ ಸೌಕರ್ಯಹೊಂದಿರುವ ನರಸಾಂಪೇಟ್ನಲ್ಲಿ ಏಳುಮಂದಿ, ಪಾರ್ಕಲ್ನಲ್ಲಿ ಇಬ್ಬರು ಮಾತ್ರ ಇದ್ದಾರೆ.
ರಾಜ್ಯದ ಒಟ್ಟು ಕೈದಿಗಳ ಸಂಖ್ಯೆಯಲ್ಲಿ ಕಡಿಮೆ ಆಗಿದೆ. 2014ರಲ್ಲಿ 6012 ಕೈದಿಗಳಿದ್ದರು. ಈಗ 5,348 ಕೈದಿಗಳಿದ್ದಾರೆ. ಸಾಮಾಜಿಕ ಕಾರ್ಯಕರ್ತರು ಮತ್ತು ಜನರ ಸಹಾಯದಿಂದ ಅಪರಾಧಕೃತ್ಯಗಳನ್ನು ಮುಂದಿನ ಐದುವರ್ಷಗಳಲ್ಲಿ ಅರ್ಧಾಂಶ ಕಡಿಮೆ ಮಾಡಲು ಸರಕಾರ ಶ್ರಮಿಸುತ್ತಿದೆ. ಎಲ್ಲ ಮಾಜಿ ಕೈದಿಗಳಿಗೆ, ಒಂಟಿ ಮಹಿಳೆಯರಿಗೆ ಮತ್ತು ಅನಾಥರಿಗೆ ಕೆಲಸಕೊಡಿಸುವ ಯೋಜನೆಯನ್ನು ಸರಕಾರ ಹೊಂದಿದೆ ಎನ್ನಲಾಗಿದೆ.