ಜನಾರ್ಧನರೆಡ್ಡಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ: ಎಚ್.ಎನ್.ವಿಜಯರಾಘವ ಆರೋಪ
ಬೆಂಗಳೂರು, ಫೆ.6: ಮಾಜಿ ಸಚಿವ ಜನಾರ್ಧನ ರೆಡ್ಡಿ ಇತ್ತೀಚೆಗೆ ನಡೆದ ವೇಮನ ಜಯಂತಿ ಹಾಗೂ ಸಾರ್ವಜನಿಕ ಸಭೆಗಳಲ್ಲಿ ಅಸಂಬದ್ಧ ಹೇಳಿಕೆಗಳನ್ನು ನೀಡುವ ಮೂಲಕ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ಕರ್ನಾಟಕ ರೆಡ್ಡಿ ಜನಸಂಘದ ಅಧ್ಯಕ್ಷ ಎಚ್.ಎನ್.ವಿಜಯರಾಘವ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೆಡ್ಡಿ ಜನಸಂಘದ ಮುಂಚೂಣಿಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಹೇಮ-ವೇಮ ಬೃಹತ್ ಮಹಾಸಮಾವೇಶ ಸಂಘಟನಾ ಸಮಿತಿ ಅಡಿಯಲ್ಲಿ ನಡೆದ ವೇದಿಕೆಯನ್ನು ಅವರು ದುರ್ಬಳಕೆ ಮಾಡಿಕೊಂಡಿದ್ದಾರೆ. ಹಿಂಬಾಲಕರನ್ನು ತರೆತಂದು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅನಗತ್ಯವಾಗಿ ವೇದಿಕೆ ಮೂಲಕ ಸುಳ್ಳನ್ನು ಹೇಳಿ ನಾನೇ ಎಲ್ಲ ಮಾಡಿಸಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ರೆಡ್ಡಿಗೆ ನಿಜವಾಗಿ ಜನಪರ ಕಾಳಜಿ ಇದ್ದಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡಿ, ಜನರಿಗೆ ನೆರವಾಗಲಿ. ನೊಂದವರಿಗೆ ನೆರವಾಗಲಿ ಹಾಗೂ ಬಡವರಿಗೆ ಅಗತ್ಯ ನೆರವು ಕಲ್ಪಿಸಲಿ. ಅದನ್ನು ಬಿಟ್ಟು, ಅಸಂಬಂದ್ಧ ಹೇಳಿಕೆಗಳನ್ನು ನೀಡಿ, ಜನರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುವುದನ್ನು ನಿಲ್ಲಿಸಲು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಮುನಿನಾಗಪ್ಪ ಉಪಸ್ಥಿತರಿದ್ದರು.





