ರಾಜಕಾರಣದಲ್ಲಿ ಭಾಷೆ ಬಳಕೆಯ ಮೇಲೆ ನಿಗಾ ಇರಬೇಕು: ಸಚಿವೆ ಉಮಾಶ್ರಿ
ಶಿವಮೊಗ್ಗ, ಫೆ. 7: ಯಾರೇ ಆಗಲಿ ರಾಜಕಾರಣದಲ್ಲಿ ಭಾಷೆ ಬಳಸುವಾಗ ಎಚ್ಚರಿಕೆಯಿಂದಿರಬೇಕು. ಎಡವಬಾರದು. ಆರೋಪ-ಪ್ರತ್ಯಾರೋಪ ಸಹಜವಾದರೂ ಭಾಷಾ ಪ್ರಯೋಗ ಇತಿಮಿತಿ ದಾಟಬಾರದು. ಸಾರ್ವಜನಿಕರು ನಮ್ಮನ್ನು ಗಮನಿಸುತ್ತಾರೆಂಬ ಅರಿವು ಇರಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ನಗರದ ಪ್ರವಾಸಿ ಮಂದಿರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಚಿತ್ರನಟಿ ರಮ್ಯ ಹಾಗೂ ನಟ ಜಗ್ಗೇಶ್ರವರ ಟ್ವಿಟರ್ ಸಮರದ ಕುರಿತಂತೆ ಅವರು ಮೇಲಿನಂತೆ ಪ್ರತಿಕ್ರಿಯೆ ನೀಡಿದರು.
ಸಿನಿಮಾ ಮತ್ತು ರಾಜಕಾರಣ ಬೇರೆ ಕ್ಷೇತ್ರಗಳಾಗಿವೆ. ಸಿನಿಮಾ ಪಾತ್ರಗಳ ಮೂಲಕ ಜನರು ನಮ್ಮನ್ನು ಗುರುತಿಸುತ್ತಾರೆ. ಹಾಗೆಯೇ ರಾಜಕಾರಣಿಯಾದಾಗಲೂ ಗುರುತಿಸುತ್ತಾರೆ. ಆದರೆ ಯಾವುದೇ ಕ್ಷೇತ್ರವಿರಲಿ ಭಾಷೆ ಪ್ರಯೋಗದ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ತಿಳಿಸಿದ್ದಾರೆ.
ಸರಿಯಲ್ಲ: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದುದಾಗಿದೆ. ಇದರಲ್ಲಿ ಯಾವುದೇ ಹುರುಳಿಲ್ಲ. 'ಪರ್ಸೆಂಟೆಜ್', 'ನಂಗನಾಚ್'ನಂತಹ ಪದಗಳು ಪ್ರಧಾನಿಯವರ ಬಾಯಲ್ಲಿ ಬಂದಿರುವುದು ನಿಜಕ್ಕೂ ಸರಿಯಲ್ಲ. ಈ ರೀತಿಯ ಭಾಷೆ ಬಳಕೆ ಮಾಡಿರುವುದು ಅವರ ಹುದ್ದೆಗೆ ಶೋಭೆ ತರುವುದಿಲ್ಲ. ಸರ್ಕಾರದ ವಿರುದ್ದ ಅವರು ಮಾಡಿರುವ ಆರೋಪಗಳ ಬಗ್ಗೆ ದಾಖಲೆಗಳಿದ್ದರೆ ಅವರು ಬಹಿರಂಗಪಡಿಸಲಿ. ಇಲ್ಲ ಸುಳ್ಳು ಆರೋಪ ಮಾಡುವುದನ್ನು ನಿಲ್ಲಿಸಲಿ ಎಂದರು.
ಧ್ವಜ: ಸರ್ವ ಸಮ್ಮತ ಅಭಿಪ್ರಾಯ ಪಡೆದು ಪ್ರತ್ಯೇಕ ನಾಡ ಧ್ವಜ ರೂಪಣೆಗೆ ಸಂಬಂಧಿಸಿದಂತೆ ಸಮಿತಿ ರಚನೆ ಮಾಡಲಾಗಿತ್ತು. ಸಮಿತಿ ಮಾಡಿರುವ ಶಿಫಾರಸ್ಸುಗಳು ಏನೆಂಬುವುದು ಗೊತ್ತಿಲ್ಲ. ಈ ಕುರಿತಂತೆ ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಈ ಬಗ್ಗೆ ಚರ್ಚೆ ನಡೆಸಿದ ನಂತರ ಪ್ರತಿಕ್ರಿಯೆ ನೀಡುತ್ತೆನೆ. ಈಗ ಏನೇ ಹೇಳಿದರೂ ಅದು ಅರೆಬೆಂದ ಹೇಳಿಕೆಯಾಗುತ್ತದೆ ಎಂದರು.
ನಾಟಕ ಅಕಾಡೆಮಿಯ ಲೋಗೋ ಬದಲಾವಣೆ ಮಾಡಿಲ್ಲ. ಫಲಕದ ವಿನ್ಯಾಸ ಬದಲಾಯಿಸಲಾಗಿದೆ. ಸಾಕಷ್ಟು ಬಾರಿ ಫಲಕದ ವಿನ್ಯಾಸ ಬದಲಾವಣೆ ಮಾಡಿದ ಊದಾಹರಣೆಯಿದೆ. ವಹಿಸಿದ ಖಾತೆಗಳ ಸಮರ್ಥ ನಿಭಾವಣೆ ಮಾಡಿದ್ದೆನೆ. ಎರಡೂ ಇಲಾಖೆಗಳಿಂದ ಅನೇಕ ಕಾರ್ಯಕ್ರಮ ರೂಪಿಸಿ ಕಾರ್ಯಗತಗೊಳಿಸಿದ್ದೇನೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ತೇರದಾಳ ಕ್ಷೇತ್ರದಿಂದ ಸ್ಪರ್ಧೆ
ಕಳೆದ ಎರಡು ಬಾರಿಯಿಂದ ತೇರದಾಳ ವಿಧಾನಸಭಾ ಕ್ಷೇತ್ರದಿಂದ ನಾನು ಕಣಕ್ಕಿಳಿದಿದ್ದೇನೆ. ಮುಂದಿನ ಚುನಾವಣೆಯಲ್ಲಿಯೂ ಅದೇ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಕ್ಷೇತ್ರ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಕ್ಷೇತ್ರದ ಮತದಾರರು ಬೆಂಬಲ ವ್ಯಕ್ತಪಡಿಸುವ ವಿಶ್ವಾಸವಿದೆ ಎಂದು ಸಚಿವೆ ಉಮಾಶ್ರೀ ತಿಳಿಸಿದ್ದಾರೆ.