ಪ್ರಧಾನಿಯಿಂದ ನಿರುದ್ಯೋಗಿಗಳಿಗೆ ಅನ್ಯಾಯ: ಎಚ್.ಡಿ.ಕುಮಾರಸ್ವಾಮಿ
![ಪ್ರಧಾನಿಯಿಂದ ನಿರುದ್ಯೋಗಿಗಳಿಗೆ ಅನ್ಯಾಯ: ಎಚ್.ಡಿ.ಕುಮಾರಸ್ವಾಮಿ ಪ್ರಧಾನಿಯಿಂದ ನಿರುದ್ಯೋಗಿಗಳಿಗೆ ಅನ್ಯಾಯ: ಎಚ್.ಡಿ.ಕುಮಾರಸ್ವಾಮಿ](https://www.varthabharati.in/sites/default/files/images/articles/2018/02/7/7MDY-3A.jpg)
ಮಂಡ್ಯ, ಫೆ.7: ನಾನು ಪ್ರಧಾನಿ ನರೇಂದ್ರ ಮೋದಿಯಂತೆ ಬರೀ ಭಾಷಣ ಮಾಡಿ ಭರವಸೆ ನೀಡುವುದಿಲ್ಲ. ನೀಡಿದ ಭರವಸೆಯನ್ನು ಈಡೇರಿಸುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಮಳವಳ್ಳಿ ತಾಲೂಕಿನಲ್ಲಿ ಬುಧವಾರ ಕುಮಾರಪರ್ವ ವಿಕಾಸ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯುವಕರಿಗೆ ಉದ್ಯೋಗ ನೀಡುತ್ತೇನೆಂದು ಭರವಸೆ ನೀಡಿದ್ದ ಮೋದಿ, ಈಗ ರಸ್ತೆ ಬದಿಯಲ್ಲಿ ಪಕೋಡ ಮಾರಿ ಜೀವನ ಸಾಗಿಸಬಹುದೆಂದು ಹೇಳುವ ಮೂಲಕ ನಿರುದ್ಯೋಗಿಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಟೀಕಿಸಿದರು.
ಬೆಂಗಳೂರಿಗೆ ಬಂದಿದ್ದ ನರೇಂದ್ರಮೋದಿ ಮೋದಿ ಕಾವೇರಿ, ಮಹಾದಾಯಿ ಬಗ್ಗೆ ಬಾಯಿ ಬಿಡಲಿಲ್ಲ. ಸಿದ್ದರಾಮಯ್ಯ ಸರಕಾರ ಕೋಟಿಗಟ್ಟಲೆ ಸಾಲವನ್ನು ರಾಜ್ಯದ ಜನರ ಮೇಲೆ ಹೇರಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೇಸ್ ಅನ್ನು ತಿರಸ್ಕರಿಸಿ ಜೆಡಿಎಸ್ ಸರಕಾರವನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ಸರಕಾರ ಅಧಿಕಾರಕ್ಕೆ ತಂದರೆ ರೈತರ ಎಲ್ಲ ಸಾಲಮನ್ನಾ ಮಾಡಲಾಗುವುದು. 6 ತಿಂಗಳ ನಂತರ ಗರ್ಭಿಣಿಯರಿಗೆ ಮಾಸಿಕ 6 ಸಾವಿರ ಮಾಸಾಶನ ನೀಡಲಾಗುವುದು. ಒಟ್ಟಾರೆ, ಜನಪರ ಸರಕಾರ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.
ಮಾಜಿ ಶಾಸಕ ಡಾ.ಅನ್ನದಾನಿ ನೀವೇ ಸಾಕಿದ ಮಗ, ಪ್ರಾಮಾಣಿಕ ವ್ಯಕ್ತಿ. ಶಾಸಕನಾಗಿದ್ದ ಅವಧಿಯಲ್ಲಿ ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದಾನೆ. ಮುಂಬರುವ ಚುನಾವಣೆಯಲ್ಲಿ ಅತ್ಯಧಿಕ ಮತದಿಂದ ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.
ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಝಫರುಲ್ಲಾಖಾನ್, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಜಿಲ್ಲಾಧ್ಯಕ್ಷ ಡಿ.ರಮೇಶ್, ಜಿಲ್ಲಾ ಪಂಚಾಯತ್ ಸದಸ್ಯ ಕಂಸಾಗರ ರವಿ, ಇತರ ಮುಖಂಡರು ಉಪಸ್ಥಿತರಿದ್ದರು.