ಕೇಂದ್ರ ಸರ್ಕಾರದ ನೆರವಿಗಿಂತ ಬಾಹುಬಲಿ ಗಳಿಕೆ ಜಾಸ್ತಿ: ಟಿಡಿಪಿ ವಾಗ್ದಾಳಿ
ಹೊಸದಿಲ್ಲಿ, ಫೆ. 8: ಬಿಜೆಪಿ ಜತೆಗಿನ ಮೈತ್ರಿ ಮುಂದುವರಿಸಲು ತೆಲುಗುದೇಶಂ ಪಕ್ಷ ನಿರ್ಧರಿಸಿದ್ದರೂ, ಬುಧವಾರ ಕೂಡಾ ಸಂಸತ್ನಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದೆ.
ಲೋಕಸಭೆಯಲ್ಲಿ ಮಾತನಾಡಿದ ಪಕ್ಷದ ಸಂಸದ ಜಯದೇವ್ ಗಲ್ಲಾ, "ಕೇಂದ್ರ ಸರ್ಕಾರ ಆಂಧ್ರಕ್ಕೆ ನೀಡಿದ ನೆರವಿಗಿಂತ ಬಾಹುಬಲಿ ಚಿತ್ರದ ಗಳಿಕೆ ಹೆಚ್ಚು" ಎಂದು ವ್ಯಂಗ್ಯವಾಡಿದರು.
ಕೇಂದ್ರ ಆಂಧ್ರಕ್ಕೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಆಪಾದಿಸಿ ಉಭಯ ಸದನಗಳಲ್ಲಿ ಆಂಧ್ರಪ್ರದೇಶ ಸದಸ್ಯರ ಪ್ರತಿಭಟನೆ ಮುಂದುವರಿದಿದೆ. ಬಜೆಟ್ ಮೇಲಿನ ಚರ್ಚೆ ವೇಳೆ ಸಭಾತ್ಯಾಗ ಮಾಡಿದರು.
ರಾಜ್ಯ ವಿಭಜನೆ ವೇಳೆ ಎನ್ಡಿಎ ಸರ್ಕಾರ ನೀಡಿದ ಭರವಸೆ ಈಡೇರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಏನನ್ನೂ ಮಾಡಿಲ್ಲ. ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಆಂಧ್ರಕ್ಕಾಗಿ ಏನು ಮಾಡಿದೆ ಎಂದು ಬಹಿರಂಗಪಡಿಸಲಿ ಎಂಬ ಸವಾಲು ಹಾಕಿದರು. ಕೇಂದ್ರ ಸರ್ಕಾರದಿಂದ ಆಂಧ್ರ ಪಡೆದ ನೆರವಿಗಿಂತ ತೆಲುಗು ಚಿತ್ರ ಬಾಹುಬಲಿ ಹೆಚ್ಚು ಹಣ ಗಳಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತ ಹಾಗೂ ಸಾಗರೋತ್ತರ ದೇಶಗಳಲ್ಲಿ ಬಾಹುಬಲಿ ಚಿತ್ರ 1700 ಕೋಟಿ ರೂಪಾಯಿ ಆದಾಯ ಗಳಿಸಿದೆ.