ಬೆಂಗಳೂರು: ಎರಡನೇ ದಿನಕ್ಕೆ ಕಾಲಿಟ್ಟ ಶ್ರವಣದೋಷಿಗಳ ಧರಣಿ
ಬೆಂಗಳೂರು, ಫೆ.8: ಶ್ರವಣದೋಷ ಉಳ್ಳವರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಿವುಡರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಸಂಘದ ಅಧ್ಯಕ್ಷ ಗಣೇಶ್ ರಾವ್ ಮಾತನಾಡಿ, ಎಸೆಸೆಲ್ಸಿ, ಪದವಿ ಸೇರಿದಂತೆ ಉನ್ನತ ಶಿಕ್ಷಣ ಪಡೆದುಕೊಂಡಿರುವ ನೂರಾರು ಶ್ರವಣ ದೋಷವುಳ್ಳವರು ನಿರುದ್ಯೋಗಿಗಳಾಗಿ ಕೆಲಸವಿಲ್ಲದೆ, ಜೀವನ ನಡೆಸುತ್ತಿದ್ದಾರೆ. ಹೀಗಾಗಿ, ಸರಕಾರಿ ಕಚೇರಿಗಳು ಮಾತ್ರವಲ್ಲದೆ ಖಾಸಗಿ ಉದ್ದಿಮೆಗಳಲ್ಲೂ ಸಿ ಮತ್ತು ಡಿ ದರ್ಜೆಯ ಹುದ್ದೆಗಳನ್ನು ಮೀಸಲಿಡುವಂತೆ ಚರ್ಚಿಸಿ, ಆದೇಶಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.
ಶ್ರವಣಮಾಂದ್ಯರ ದಿನಾಚರಣೆದಂದು ಅವರ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರಲು ಈ ಧರಣಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಕೇಂದ್ರಗಳಲ್ಲಿ ನೆಪಕ್ಕೆ ಉದ್ಯೋಗ ಮೇಳ ನಡೆಸಲಾಗುತ್ತದೆ. ಈ ವೇಳೆ ಹೊರ ರಾಜ್ಯದವರನ್ನು ಆಯ್ಕೆ ಮಾಡಿ, ಸ್ಥಳೀಯರಿಗೆ ಅನ್ಯಾಯ ಮಾಡಲಾಗುತ್ತಿದೆ. ಹಾಗಾಗಿ ಮೊದಲು ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಅಂಗವಿಕಲ ಮೀಸಲಾತಿ ಅನುಪಾತ ಶೇ.3ರಷ್ಟಿದ್ದು, ಈ ಮೀಸಲಾತಿಯಿಂದ ಯಾವುದೇ ಪ್ರಯೋಜನವಿಲ್ಲ. ಮೀಸಲಾತಿಯಲ್ಲಿ ಸಾಕಷ್ಟು ಅನ್ಯಾಯ ಆಗುತ್ತಿದ್ದು, ಅದನ್ನು ತಡೆಗಟ್ಟಬೇಕು ಹಾಗೂ ಮೀಸಲಾತಿಯನ್ನು ಶೇ.20ಕ್ಕೆ ಹೆಚ್ಚಿಸಬೇಕು. ವಯೋಮಿತಿಯನ್ನು 45 ವರ್ಷಕ್ಕೆ ಹೆಚ್ಚಿಸಬೇಕು ಎಂದರು. ಶ್ರವಣದೋಷವುಳ್ಳ ಮಕ್ಕಳಿಗೆ ಶಾಲಾ ಕಾಲೇಜುಗಳಲ್ಲಿ ಸನ್ನೆಯಿಂದ ಪಾಠ ಮಾಡಬೇಕು. ಆದರೆ, ಆ ರೀತಿ ಕೆಲಸ ಮಾಡುವ ಶಿಕ್ಷಕರ ಸಂಖ್ಯೆ ಕಡಿಮೆ ಇದೆ. ಹೀಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರ ನೇಮಕ ಮಾಡಿಕೊಳ್ಳಬೇಕು ಹಾಗೂ ಈ ಮೂಲಕ ಶಿಕ್ಷಕರ ಕೊರತೆ ನೀಗಿಸಬೇಕು. ಈ ಮೂಲಕ ಮಕ್ಕಳು ವಿದ್ಯೆಯಿಂದ ವಂಚಿತರಾಗುವುದನ್ನು ತಪ್ಪಿಸಬೇಕು ಎಂದು ಮನವಿ ಮಾಡಿದರು.
ಅಂಗವಿಕಲ ದಂಪತಿಗಳಿಗೆ ನೀಡುತ್ತಿರುವ ವಿವಾಹ ಪ್ರೋತ್ಸಾಹ ಧನವನ್ನು ಶ್ರವಣಮಾಂದ್ಯ ದಂಪತಿಗೂ ವಿಸ್ತರಿಸಬೇಕು ಹಾಗೂ ಅವಿವಾಹಿತ ಶ್ರವಣ ಮಾಂದ್ಯರಿಗೂ ಇಂತಹ ಸೌಲಭ್ಯ ನೀಡಬೇಕು. ಅವರಿಗೆ ನೀಡುವ ಪಿಂಚಣಿ ಹಣವನ್ನು ಬ್ಯಾಂಕ್ನ ಖಾತೆಗೆ ನೇರವಾಗಿ ಜಮಾ ಮಾಡುವ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಮುಖಂಡರಾದ ದೇವರಾಜ್, ಕೆ.ಎಚ್.ಶಂಕರ್ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಿಂದ ಸದಸ್ಯರು ಹಾಗೂ ಶ್ರವಣದೋಷವುಳ್ಳ ಯುವಕರು ಪಾಲ್ಗೊಂಡಿದ್ದರು.







