ಬೆಳ್ತಂಗಡಿ: ಮನೆಗೆ ನುಗ್ಗಿ ನಗ- ನಗದು ಕಳವು
ಬೆಳ್ತಂಗಡಿ, ಫೆ. 9: ಕಳಿಯ ಗ್ರಾಮದ ನ್ಯಾಯತರ್ಪು ನಿವಾಸಿ ವಸಂತ ಎಂಬವರ ಮನೆಗೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ಅಪಹರಿಸಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.
ನಿವೃತ್ತ ಶಿಕ್ಷಕರಾಗಿರುವ ವಸಂತ ಅವರು ಅನಾರೋಗ್ಯದ ಕಾರಣದಿಂದ ಮಂಗಳೂರಿನ ಆಸ್ಪತ್ರಗೆ ದಾಖಲಾಗಿದ್ದು, ಮನೆಯಲ್ಲಿ ಯಾರೂ ಇರಲಿಲ್ಲ. ರಾತ್ರಿಯ ವೇಳೆ ಕಳ್ಳರು ಮನೆಯ ಬೀಗ ಒಡೆದು ಒಳ ನುಗ್ಗಿ ಮನೆಯನ್ನು ಪೂರ್ತಿ ಜಾಲಾಡಿದ್ದು, ಅಲ್ಲಿದ್ದ ವಸ್ತುಗಳನ್ನು ಅಪಹರಿಸಿದ್ದಾರೆ.
ಶುಕ್ರವಾರ ವಸಂತ ಅವರ ಮಗ ಸಂದೇಶ್ ಮಧ್ಯಾಹ್ನ ಮಂಗಳೂರಿನಿಂದ ಮನೆಗೆ ಹಿಂತಿರುಗಿ ಬಂದಾಗಲೇ ಕಳ್ಳತನವಾಗಿರುವ ವಿಚಾರ ಬಹಿರಂಗ ಗೊಂಡಿದೆ. ಕೂಡಲೇ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





