ಫೆ.10 ರಂದು ದೇವೇಗೌಡರ ಸಾಧನೆಯ ಶಿಖರಾರೋಹಣ ಕೃತಿ ಬಿಡುಗಡೆ

ಮೈಸೂರು,ಫೆ.9: ನಿವೃತ್ತ ಪ್ರಾಧ್ಯಾಪಕರಾದ ಡಾ. ಪ್ರಧಾನ್ ಗುರುದತ್ತ ಮತ್ತು ಡಾ ಸಿ.ನಾಗಣ್ಣ ಅವರು ರಚಿಸಿರುವ ಮಾಜಿ ಪ್ರಧಾನ ಮಂತ್ರಿ ಹೆಚ್ ಡಿ ದೇವೇಗೌಡರ ಸಾಧನೆ ಕುರಿತ “ಸಾಧನೆಯ ಶಿಖರಾರೋಹಣ” ಪುಸ್ತಕದ ಪರಿಷ್ಕೃತ ಪರಿವರ್ಧಿತ ಆವೃತ್ತಿ ಫೆ.10 ಶನಿವಾರ ಬಿಡುಗಡೆಯಾಗಲಿದೆ ಎಂದು ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್ ರಂಗಪ್ಪ ತಿಳಿಸಿದರು.
ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಫೆ.10 ರ ಸಂಜೆ 4:30 ಕ್ಕೆ ಮೈಸೂರು ವಿವಿಯ ಸೆನೆಟ್ ಭವನದಲ್ಲಿ ಪುಸ್ತಕ ಬಿಡುಗಡೆಯಾಗಲಿದ್ದು, ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಿರ್ಮಾಲಾನಂದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಪ್ರಧಾನ ಮಂತ್ರಿಯಾಗಿ ಹೆಚ್ ಡಿ ದೇವೇಗೌಡರು ಮಾಡಿದ ಸಾಧನೆ ಹಾಗೂ ರಾಜತಾಂತ್ರಿಕ ನೀತಿ ಕುರಿತ ಪುಸ್ತಕವಾಗಿದೆ. ಹತ್ತು ತಿಂಗಳ ಆಡಳಿತದಲ್ಲಿ ಅವರು ರೂಪಿಸಿದ ಯೋಜನೆ ಈಗ ಕಾರ್ಯರೂಪಕ್ಕೆ ಬರುತ್ತಿದೆ ಎಂದು ಹೇಳಿದರು.
ಅದೇ ರೀತಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ 20 ತಿಂಗಳ ಸಾಧನೆ ಕುರಿತ ಪುಸ್ತಕ ಶೀಘ್ರವೇ ಬಿಡುಗಡೆಯಾಗಲಿದೆ ಎಂದು ಇದೇ ವೇಳೆ ಪ್ರೊ.ಕೆ.ಎಸ್.ರಂಗಪ್ಪ ತಿಳಿಸಿದರು.
ಬಳಿಕ ಲೇಖಕ ಡಾ ಪ್ರಧಾನ ಗುರುದತ್ತ ಅವರು ಮಾತನಾಡಿ, ದೂರದೃಷ್ಟಿ ಇದ್ದ ಒಬ್ಬ ಅಪರೂಪದ ಆಡಳಿತಗಾರರಾಗಿದ್ದರು ಎಚ್.ಡಿ.ದೇವೇಗೌಡ. ಹೀಗಾಗಿ ಈ ಪುಸ್ತಕ ರಚಿಸಲು 40 ರಿಂದ 50 ಭಾರಿ ಸಂದರ್ಶನ ಮಾಡಿದ್ದೇವೆ. ಅವರಿಗೆ ನೆನಪಿನ ಶಕ್ತಿ ಆಗಾಧವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪತ್ರಿಕಾಗೊಷ್ಠಿಯಲ್ಲಿ ಉಪಮೇಯರ್ ಇಂದಿರ, ನಗರ ಜೆಡಿಎಸ್ ಅಧ್ಯಕ್ಷ ಕೆ.ಟಿ.ಚಲುವೇಗೌಡ, ಮಾಜಿ ಮೇಯರ್ ಲಿಂಗಪ್ಪ, ನಗರಪಾಲಿಕೆ ಸದಸ್ಯರಾದ ವಿ.ಶೈಲೇಂದ್ರ, ನಂದಿನಿ, ಎಸ್.ಬಿ.ಎಂ.ಮಂಜು, ಕೆ.ವಿ.ಮಲ್ಲೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







