ಪ್ರಜ್ಞಾವಂತ ನಾಗರಿಕನಿಂದ ಉತ್ತಮ ಸಮಾಜ ನಿರ್ಮಿಸಬಹುದು : ಎಂ.ಸಿ.ಬೆಳ್ಯಪ್ಪ
![ಪ್ರಜ್ಞಾವಂತ ನಾಗರಿಕನಿಂದ ಉತ್ತಮ ಸಮಾಜ ನಿರ್ಮಿಸಬಹುದು : ಎಂ.ಸಿ.ಬೆಳ್ಯಪ್ಪ ಪ್ರಜ್ಞಾವಂತ ನಾಗರಿಕನಿಂದ ಉತ್ತಮ ಸಮಾಜ ನಿರ್ಮಿಸಬಹುದು : ಎಂ.ಸಿ.ಬೆಳ್ಯಪ್ಪ](https://www.varthabharati.in/sites/default/files/images/articles/2018/02/10/001.jpg)
ಗೋಣಿಕೊಪ್ಪಲು.ಫೆ.10.ಜಿಲ್ಲೆಯಲ್ಲಿ ರಾಜಕೀಯ ಬದಲಾವಣೆ ಅನಿವಾರ್ಯವಾಗಿದ್ದು ಈ ನಿಟ್ಟಿನಲ್ಲಿ ಮತದಾರ ಬದಲಾವಣೆ ತರಲಿದ್ದಾನೆ. ಎಂದು ಜಾತ್ಯಾತೀತ ಜನತಾದಳದ ಹಿರಿಯ ಮುಖಂಡ ಮನೆಯಪಂಡ ಸಿ.ಬೆಳ್ಯಪ್ಪ ತಮ್ಮ ಅಭಿಪ್ರಾಯ ಹಂಚಿಕೊಂಡರು. ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯನವರೊಂದಿಗೆ ಪ್ರಸ್ತುತ ಜಿಲ್ಲೆಯ ರಾಜಕೀಯ ವಿದ್ಯಾಮಾನಗಳ ಬಗ್ಗೆ ಸುದೀರ್ಘ ಮಾತುಕತೆ ನಡೆಸಿದ ಬೆಳ್ಯಪ್ಪಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸುವುದಾಗಿ ತಿಳಿಸಿದರು.
ಜೆಡಿಎಸ್ನ ಜಿಲ್ಲಾಧ್ಯಕ್ಷ ವಿರಾಜಪೇಟೆಯ ಸಂಕೇತ್ ಪೂವಯ್ಯನವರು ಜವಾಬ್ದಾರಿ ವಹಿಸಿಕೊಂಡ ನಂತರ ಪಕ್ಷ ಬೆಳವಣಿಗೆ ಉತ್ತಮವಾಗಿದೆ. ಜಿಲ್ಲೆಯ ಉದ್ದಗಲಕ್ಕೂ ಸಂಚಾರ ನಡೆಸಿ ಪಕ್ಷ ಬಲವರ್ದನೆ ಮಾಡಿದ್ದಾರೆ. ಆನೆ ಮಾನವ ಸಂಘರ್ಷದಲ್ಲಿ ಹೋರಾಟ ನಡೆಸಿದ್ದಾರೆ. ಇದರಿಂದ ಪಕ್ಷಕ್ಕೆ ಅನುಕೂಲವಾಗಿದೆ ಎಂದ ಅವರು,ಜಿಲ್ಲೆಯಲ್ಲಿ ಪ್ರಜ್ಞಾವಂತ ನಾಗರಿಕರಿದ್ದು ಇವರಿಂದ ಮಾತ್ರ ಉತ್ತಮ ಸಮಾಜ ನಿರ್ಮಿಸಲು ಸಾಧ್ಯ.ಜಿಲ್ಲೆಯ ಅಭಿವೃದ್ದಿಯ ಬಗ್ಗೆ ಕಾಫಿ ಬೆಳೆಗಾರರ ರೈತರ ಸಮಸ್ಯೆಗಳನ್ನು ನಿಭಾಯಿಸಲು ರಾಜ್ಯಧ್ಯಕ್ಷ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲೇಬೇಕಾಗಿದೆ. ಈ ಬಾರಿ ಇವರು ಮುಖ್ಯಮಂತ್ರಿ ಆಗುವುದರಲ್ಲಿ ಸಂಶಯವಿಲ್ಲ. ಜಿಲ್ಲೆಯ ಅಭ್ಯರ್ಥಿಗಳ ಪರ ಪಕ್ಷದ ಹಿರಿಯ ನಾಯಕನಾಗಿ ನಾನು ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರಚಾರ ನಡೆಸುವುದಾಗಿ ತಿಳಿಸಿದರು.
ಬೆಳ್ಯಪ್ಪನವರ ರಾಜಕೀಯದ ಹಿರಿತನ, ಸೇವಾಅನುಭವವನ್ನು ಪಕ್ಷ ಬಳಸಿಕೊಳ್ಳುವುದರೊಂದಿಗೆ ಪಕ್ಷದಲ್ಲಿರುವ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ಜೆಡಿಎಸ್ನ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಈ ಸಂದರ್ಭ ತಿಳಿಸಿದರು. ಜಿಲ್ಲೆಯ ಎರಡು ಸ್ಥಾನಗಳನ್ನು ಗೆಲ್ಲುವ ಪ್ರಯತ್ನ ಈ ಬಾರಿ ಮಾಡಲಾಗುವುದು.ಈಗಾಗಲೇ ಪಕ್ಷದ ಎಲ್ಲಾ ಘಟಕಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದು ಬೂತ್ ಮಟ್ಟದಲ್ಲಿ ಪಕ್ಷ ಬೆಳವಣಿಗೆಯಾಗುತ್ತಿದೆ.
ಜನತೆ ಈ ಬಾರಿ ಬದಲಾವಣೆ ಬಯಸಿರುವುದರಿಂದ ಜೆಡಿಎಸ್ಗೆ ಹೆಚ್ಚಿನ ಅವಕಾಶವಿದೆ. ಬೆಳ್ಯಪ್ಪನವರ ಸೇವೆಯನ್ನು ಜಿಲ್ಲೆಗೆ ವಿಸ್ತರಿಸುವುದರೊಂದಿಗೆ ಜಿಲ್ಲಾ ಸಮಿತಿ ಹಾಗೂ ರಾಜ್ಯ ಸಮಿತಿಯಲ್ಲಿ ಇವರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗುವುದೆಂದು ಅಭಿಪ್ರಾಯಪಟ್ಟರು.