ಯಾದವಾಡ ಗ್ರಾಮದಲ್ಲಿ ಶಿವಾಜಿ ಸ್ಮಾರಕ ನಿರ್ಮಾಣ: ಸಚಿವ ವಿನಯ್ ಕುಲಕರ್ಣಿ

ಧಾರವಾಡ, ಫೆ.10: ಯಾದವಾಡ ಗ್ರಾಮದಲ್ಲಿ ರಾಣಿ ಬೆಳವಡಿ ಮಲ್ಲಮ್ಮ ಸ್ಥಾಪಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಸ್ಮಾರಕ ಶಿಲ್ಪವನ್ನು ಸಂರಕ್ಷಿಸಿ, ವಸ್ತು ಸಂಗ್ರಹಾಲಯವನ್ನು ಸ್ಥಾಪಿಸುವುದಾಗಿ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ್ ಕುಲಕರ್ಣಿ ಹೇಳಿದ್ದಾರೆ.
ಶನಿವಾರ ನಗರದ ಯಾದವಾಡ ಗ್ರಾಮದಲ್ಲಿ ಇತಿಹಾಸ ತಜ್ಞರು, ಅಖಿಲ ಭಾರತ ಮರಾಠಾ ಮಂಡಳದ ಪದಾಧಿಕಾರಿಗಳು ಮತ್ತು ಗ್ರಾಮಸ್ಥರೊಂದಿಗೆ ಶಿವಾಜಿ ಸ್ಮಾರಕ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಬೆಳವಡಿ ಮಲ್ಲಮ್ಮ ಈ ಭಾಗದ ಪ್ರಮುಖ ಅರಸು ಮನೆತನದ ರಾಣಿ. ಮಹಾರಾಷ್ಟ್ರದ ಛತ್ರಪತಿ ಶಿವಾಜಿ ಮಹಾರಾಜರು ದಕ್ಷಿಣದ ದಂಡಯಾತ್ರೆ ಮಾಡಿ ಬೆಳವಡಿಯನ್ನು ವಶಪಡಿಸಿಕೊಳ್ಳಲು ಯುದ್ದ ಸಾರಿದ್ದರು ಎಂದು ವಿನಯ್ ಕುಲಕರ್ಣಿ ಹೇಳಿದರು.
ಧೈರ್ಯ, ವೀರಾವೇಷದಿಂದ ಹೋರಾಡಿ, ಶಿವಾಜಿ ಸೈನ್ಯವನ್ನು ಹಿಮ್ಮೆಟ್ಟಿಸಿದ ಬೆಳವಡಿ ಮಲ್ಲಮ್ಮಳನ್ನು ಕಾಣಲು ಸ್ವತಃ ಶಿವಾಜಿ ಆಗಮಿಸಿದ್ದಾಗ ಅವರ ಸವಿನೆನಪಿಗಾಗಿ ರಾಣಿ ಮಲ್ಲಮ್ಮ ಹಾಗೂ ಅವರ ಪತಿ ಈಶಪ್ರಭು ದೇಸಾಯಿ, ಶಿವಾಜಿ ಸ್ಮಾರಕವನ್ನು ತನ್ನ ರಾಜ್ಯದ ಗಡಿಗ್ರಾಮ ಯಾದವಾಡದಲ್ಲಿ ಸ್ಥಾಪಿಸಿದ್ದರು. ಇದನ್ನು ಕಂಡ ಶಿವಾಜಿ ಮಹಾರಾಜರು ಸಹೋದರತ್ವದ ಸಂಕೇತವೆಂದು ಹರಿಸಿದ್ದರು ಎಂದು ಅವರು ಸ್ಮರಿಸಿಕೊಂಡರು.
ಇಂತಹ ಐತಿಹಾಸಿಕ ಮಹತ್ವದ ಸ್ಮಾರಕ ನಮ್ಮ ನಿರ್ಲಕ್ಷ್ಯದಿಂದಾಗಿ ಬೆಳಕಿಗೆ ಬಂದಿಲ್ಲ. ಇದರ ಮಹತ್ವವನ್ನು ಎಲ್ಲ ಜನರಿಗೆ ತಿಳಿಯುವಂತೆ ಮತ್ತು ಸರಿಯಾದ ಇತಿಹಾಸವನ್ನು ದಾಖಲಿಸುವ ಉದ್ದೇಶದಿಂದ ಶಿವಾಜಿ ಹೇಸರಿನಲ್ಲಿ ನನ್ನ ಶಾಸಕರ ಅಭಿವೃದ್ಧಿ ಅನುದಾನದಲ್ಲಿ ವಸ್ತು ಸಂಗ್ರಹಾಲಯ ಮತ್ತು ಸ್ಮಾರಕವನ್ನು ನಿರ್ಮಿಸಲಾಗುತ್ತದೆ ಎಂದು ಅವರು ಪ್ರಕಟಿಸಿದರು.
ಇಲ್ಲಿಗೆ ಆಗಮಿಸಿರುವ ಇತಿಹಾಸ ತಜ್ಞರೊಂದಿಗೆ ಹಾಗೂ ವಾಸ್ತು ಶಿಲ್ಪಿಗಳೊಂದಿಗೆ ಚರ್ಚಿಸಿ, ಕಲ್ಲಿನ ಕಟ್ಟಡದಲ್ಲಿ ಸ್ಮಾರಕ ಹಾಗೂ ವಸ್ತುಸಂಗ್ರಹಾಲಯ ರೂಪಿಸಲಾಗುತ್ತದೆ. ಶಿವಾಜಿ ಸ್ಮಾರಕ ಸೇರಿದಂತೆ ಯಾದವಾಡ ಗ್ರಾಮದಲ್ಲಿ ದೊರೆತಿರುವ ಎಲ್ಲ ವೀರಗಲ್ಲು, ಮಾಸ್ತಿಗಲ್ಲುಗಳನ್ನು ಈ ವಸ್ತು ಸಂಗ್ರಹಾಲಯದಲ್ಲಿ ಇಡಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕೊಲ್ಹಾಪುರ ಮಹಾಲಕ್ಷ್ಮಿ ದೇವಸ್ಥಾನದ ಮಾಜಿ ಅಧ್ಯಕ್ಷ ನ್ಯಾಯವಾದಿ ಗುಲಾಬರಾವ್ ಘೋರ್ಪಡೆ, ಇತಿಹಾಸ ತಜ್ಞ ಹಾಗೂ ಅಖಿಲ ಭಾರತ ಮರಾಠಾ ಮಂಡಳದ ಕೊಲ್ಹಾಪುರ ಜಿಲ್ಲಾ ಅಧ್ಯಕ್ಷ ವಸಂತ ಮುಳಿಕ ಹಾಗೂ ಪದಾಧಿಕಾರಿಗಳು, ಯಾದವಾಡ ಗ್ರಾ.ಪಂ.ಮಾಜಿ ಅಧ್ಯಕ್ಷ ಮಡಿವಾಳಪ್ಪ ದಿಂಡಲಕೊಪ್ಪ, ರಾಚಯ್ಯ ಹಳ್ಳಿಗೇರಿಮಠ, ಗುಳಪ್ಪಬೆಂಡಿಗೇರಿ, ಮಡಿವಾಳಪ್ಪ ಕುಸುಗಲ್ಲ ಸೇರಿದಂತೆ ಮರಾಠಾ ಸಮುದಾಯ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.







