10 ರೂ. ಗಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ
ಮುಂಬೈ, ಫೆ.10: ಊಟದ ಬಿಲ್ 10 ರೂಪಾಯಿ ನೀಡುವಂತೆ ಕೇಳಿದ್ದಕ್ಕೆ ವ್ಯಕ್ತಿಯನ್ನು ಆತನ ಗೆಳೆಯನೇ ಥಳಿಸಿ ಕೊಲೆಗೈದ ಘಟನೆ ನಡೆದಿದೆ.
ಮುಂಬೈ ಉಪನಗರ ಪೊವೈಯ ಸಾಯ್ ಬಂಗುರ್ಡಾ ಗ್ರಾಮದಲ್ಲಿ ಬುಧವಾರ ಸಂಜೆ ಘಟನೆ ನಡೆದಿದೆ. ದಿನೇಶ್ ಲಕ್ಷ್ಮಣ್ ಜೋಷಿ ಹಾಗೂ ಆತನ ಸ್ನೇಹಿತ ಜೀವನ್ ಮೋರೆ ಎಂಬವರು ಮದ್ಯಪಾನ ಮಾಡಿದ್ದರು. ಬಳಿಕ ಸಮೀಪದ ಹೋಟೆಲ್ಗೆ ಊಟ ತರಲೆಂದು ಜೋಷಿ ತೆರಳಿದ್ದಾನೆ. ಇಬ್ಬರಿಗೂ ಊಟ ಪಾರ್ಸೆಲ್ ತಂದ ಜೋಷಿ, ಊಟದ ಬಿಲ್ 10 ರೂಪಾಯಿ ಕೊಡುವಂತೆ ಕೇಳಿದಾಗ ಕೋಪಗೊಂಡ ಮೋರೆ, ದೊಣ್ಣೆಯಿಂದ ಜೋಷಿ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊವೈ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಜೋಷಿಯನ್ನು ಗುರುವಾರ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಬಳಿಕ ಮೋರೆಯನ್ನು ಬಂಧಿಸಿರುವ ಪೊಲೀಸರು, ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Next Story