ಸೇನಾ ನೇಮಕಾತಿಯಲ್ಲಿ ಮಹಿಳೆಯರ ವಿರುದ್ಧ ಪಕ್ಷಪಾತವಿಲ್ಲ : ಕೇಂದ್ರ
ಹೊಸದಿಲ್ಲಿ, ಫೆ.10: ಸೇನಾ ನೇಮಕಾತಿಯ ಸಂದರ್ಭ ಮಹಿಳೆಯರ ವಿರುದ್ಧ ಪಕ್ಷಪಾತ ಮಾಡಲಾಗುತ್ತಿದೆ ಎಂದು ದಿಲ್ಲಿ ಹೈಕೋರ್ಟ್ನಲ್ಲಿ ಸಲ್ಲಿಸಲಾಗಿರುವ ಅರ್ಜಿಯನ್ನು ಕೇಂದ್ರ ಸರಕಾರ ವಿರೋಧಿಸಿದೆ.
ಸೇನೆಯ ಇಂಜಿನಿಯರಿಂಗ್ ಹಾಗೂ ಶಿಕ್ಷಣ ದಳಕ್ಕೆ ನೇಮಕಾತಿಯ ಸಂದರ್ಭ ಮಹಿಳೆಯರ ವಿರುದ್ಧ ಸಾಂಸ್ಥಿಕ ತಾರತಮ್ಯ ತೋರಲಾಗುತ್ತಿದೆ ಎಂದು ವಕೀಲರು ಸಲ್ಲಿಸಿರುವ ಅರ್ಜಿ ಆಧಾರರಹಿತ, ಸುಳ್ಳು ಹಾಗೂ ಮಹತ್ವವಿಲ್ಲದ ಆರೋಪವನ್ನು ಹೊಂದಿದೆ ಎಂದು ಪ್ರಭಾರ ಮುಖ್ಯ ನ್ಯಾಯಾಧೀಶೆ ಗೀತಾ ಮಿತ್ತಲ್ ನೇತೃತ್ವದ ನ್ಯಾಯಪೀಠಕ್ಕೆ ಕೇಂದ್ರ ಸರಕಾರ ತಿಳಿಸಿದ್ದು, ಮಹಿಳಾ ಅಧಿಕಾರಿಗಳ ನೇಮಕಕ್ಕಾಗಿ 1992ರಲ್ಲಿ ‘ಮಹಿಳಾ (ಅಧಿಕಾರಿಗಳ) ವಿಶೇಷ ಪ್ರವೇಶ ಯೋಜನೆ’ಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದೆ. ಲಿಂಗಬೇಧದ ಹಿನ್ನೆಲೆಯಲ್ಲಿ ತಾರತಮ್ಯವು ಎಲ್ಲರಿಗೂ ಸಮಾನ ಹಕ್ಕು ಎಂಬ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಅಲ್ಲದೆ ಲಿಂಗಾಧಾರಿತ ತಾರತಮ್ಯಕ್ಕೆ ಒಳಗಾಗದಿರುವ ಹಕ್ಕು, ಸರಕಾರಿ ಉದ್ಯೋಗದಲ್ಲಿ ಸಮಾನ ಅವಕಾಶದ ಹಕ್ಕು, ಹಾಗೂ ಮಹಿಳೆಯ ಮಾನವ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ವಕೀಲ ಕುಷ್ ಕಾರ್ಲಾ ನ್ಯಾಯಾಲಯದಲ್ಲಿ ತಿಳಿಸಿದ್ದರು. ಅಲ್ಲದೆ ಇಂಜಿನಿಯರಿಂಗ್ ವಿಭಾಗಕ್ಕೆ ಅವಿವಾಹಿತ ಪುರುಷರನ್ನು ಮಾತ್ರ ನೇಮಕಾತಿ ಮಾಡಿಕೊಳ್ಳುವ ಯೋಜನೆಯನ್ನು ಅಸಾಂವಿಧಾನಿಕ ಎಂದು ಘೋಷಿಸಿ ಆದೇಶ ಜಾರಿಮಾಡಬೇಕೆಂದು ಕುಷ್ ಕಾರ್ಲಾ ನ್ಯಾಯಾಲಯವನ್ನು ವಿನಂತಿಸಿದ್ದರು.