ಅಚ್ಛೇದಿನ್ಗಳ ಗೋಳು
ಜಗದರಿವಿಲ್ಲದ ಪಂಡಿತ
ಹೊಣೆಗಾರಿಕೆಯಿಲ್ಲದ ರಾಜಕಾರಣಿ
ಜಾಗೃತಿ ಮರೆಯಾದ ಮತದಾರ
ನನ್ನ ದೇಶದ ಗುರುತು
ವಿದ್ಯಮಾನಗಳ ವಿಮರ್ಶೆ
ಬದುಕಿನ ದೂರದೃಷ್ಟಿ
ಹೊದ್ದು ಮಲಗಿದ
ಹೊದಿಕೆಯಲ್ಲೇ ದಫನವಾಗಿದೆ
ಭರವಸೆಗಳು ತೀರಾ ಅಸಹ್ಯ
ತೊಟ್ಟಿಗೂ ತುಂಬಿಸಲಸಾಧ್ಯ
ದ್ವೇಷ, ರಕ್ತ, ಕೊಲೆಯನ್ನು ಬಿತ್ತಿ
ಫಸಲಿಗಾಗಿ ಕಾದಾಟ
ಯಾಕಾಗಿ ಗೆಲ್ಲಿಸಿದೆ ಎಂಬ ಪ್ರಶ್ನೆಗೆ
ಮತದಾನ ಹಕ್ಕೆಂಬ ಹಳೇ ಉತ್ತರ
ಪ್ರಶ್ನಿಸದ ಮತದಾರರು ಒಂದೆಡೆ
ಸ್ವೇಚ್ಛೆಯ ಗುಲಾಮರು ಇನ್ನೊಂದೆಡೆ
ದೇಶವಾಸಿಯ ಹೊಟ್ಟೆ ಸೀಳಿ
ಸಾರ್ವಭೌಮತೆಗೆ ತಲಾಖ್ ನೀಡಿ
ನೂರು ಜನರ ಸೂರು
ಮೂರು ಮಂದಿಗಂಚುವುದೇ ಅಚ್ಛೇ ದಿನ್
ಇದುವೇ ನನ್ನ ದೇಶದ ಗುರುತು
- ಅಕ್ಬರ್ ಅಲಿ, ಕಾವಳಕಟ್ಟೆ
Next Story