ಬಿಜೆಪಿಯದ್ದೂ ರೈತ ವಿರೋಧಿ ಆಡಳಿತ : ಕೆಂಕೆರೆ ಸತೀಶ್
![ಬಿಜೆಪಿಯದ್ದೂ ರೈತ ವಿರೋಧಿ ಆಡಳಿತ : ಕೆಂಕೆರೆ ಸತೀಶ್ ಬಿಜೆಪಿಯದ್ದೂ ರೈತ ವಿರೋಧಿ ಆಡಳಿತ : ಕೆಂಕೆರೆ ಸತೀಶ್](https://www.varthabharati.in/sites/default/files/images/articles/2018/02/11/11HULIYAR2.jpg)
ಹುಳಿಯಾರು,ಫೆ.11:ಚುನಾವಣಾ ಪೂರ್ವ ಡಾ.ಸ್ವಾಮಿನಾಥ್ ವರದಿ ಜಾರಿಗೆ ತರುವುದರ ಜೊತೆಗೆ ರೈತ ಪರ ಸರಕಾರ ಮಾಡುವುದಾಗಿ ಭರವಸೆ ನೀಡಿದ್ದ ಮೋದಿ ಅವರು ದೇಶದ ಪ್ರಧಾನಿಯಾದ ಬಳಿಕ ಕೊಟ್ಟ ಮಾತು ಮರೆತು ಶ್ರೀಮಂತರ ಪರ ಸರಕಾರ ನಡೆಸುತ್ತಿದ್ದಾರೆ ಎಂದು ರಾಜ್ಯ ಹಸಿರು ಸೇವೆ ಪ್ರಧಾನ ಕಾರ್ಯದರ್ಶಿ ಕೆಂಕೆರೆ ಸತೀಶ್ ಆರೋಪಿಸಿದ್ದಾರೆ.
ಹುಳಿಯಾರು ಸಮೀಪದ ಬರಕನಹಾಲ್ ಗ್ರಾಮದಲ್ಲಿ ನೂತನ ರೈತ ಘಟಕವನ್ನು ರವಿವಾರ ಉದ್ಘಾಟಿಸಿ ಮಾತನಾಡುತಿದ್ದ ಅವರು,ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗಧಿ ಮಾಡುವುದು, ದೇಶದಲ್ಲಿ ಸಂಪೂರ್ಣ ನೀರಾವರಿ ವ್ಯವಸ್ಥೆ ಮಾಡುವುದು ಹಾಗೂ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ರೈತರ ಸಂಪೂರ್ಣ ಸಾಲ ಮನ್ನ ಮಾಡುವುದು ರೈತ ಸಂಘದ ಪ್ರಮುಖ ಬೇಡಿಕೆಗಳಾಗಿವೆ.35 ವರ್ಷಗಳಿಂದ ಯಾವ ಸರಕಾರಗಳೂ ಈ ಬೇಡಿಕೆಗಳನ್ನು ಈಡೇರಿಸಿಲ್ಲ. ತಾನು ಪ್ರಧಾನಿಯಾದರೆ ಈಡೇರಿಸುವುದಾಗಿ ಮೋದಿ ಅವರು ಭರವಸೆ ನೀಡಿದ್ದರು. ಆದರೆ ಹಿಂದಿನ ಸರಕಾರಗಳಂತೆ ಇವರೂ ರೈತ ವಿರೋಧಿ ಆಡಳಿತ ಮಾಡುತ್ತಿದ್ದಾರೆ ಎಂದು ಕುಟುಕಿದರು.
ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಧನಂಜರಾಧ್ಯ ಮಾತನಾಡಿ,90 ರ ದಶಕದಿಂದೀಚೆಗೆ ರೈತರ ಆತ್ಮಹತ್ಯೆಗಳು ಹೆಚ್ಚಾಗಿವೆ. ಕಳೆದ 10 ವರ್ಷಗಳಲ್ಲಿ 5 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇದು ರೈತರ ಹಿತ ಕಾಯುವಲ್ಲಿ ಸರಕಾರಗಳು ವಿಫಲರಾಗಿರುವುದರ ನಿದರ್ಶನ ಇದಾಗಿದೆ.ಅಲ್ಲದೆ ರೈತರ ಆತ್ಮಹತ್ಯೆಗಳು ಕೃಷಿ ಪ್ರಧಾನ ದೇಶದವಾದ ಭಾರತದ ಪ್ರಗತಿಗೆ ಮಾರಕವಾಗಿದೆ.ಇದನ್ನು ತಡೆಯುವ ನಿಟ್ಟಿನಲ್ಲಿ ರಾಜಕಾರಣಿಗಳು ರೈತರಿಗೆ ನೀರು, ವಿದ್ಯುತ್, ಬೆಲೆ ಕೊಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದರು.
ತಾಲೂಕು ರೈತ ಸಂಘದ ಅಧ್ಯಕ್ಷ ಬಂಡಿಮನೆ ಲೋಕೇಶ್,ಹುಳಿಯಾರು ಹೋಬಳಿ ರೈತ ಸಂಘದ ಅಧ್ಯಕ್ಷ ತಮ್ಮಡಿಹಳ್ಳಿ ಮಲ್ಲಿಕಾರ್ಜುನ್,ಶಿರಾ ರೈತ ಸಂಘದ ಎಸ್.ಗೋವಿಂದಪ್ಪ, ಗ್ರಾಪಂ ಸದಸ್ಯ ಕಾಡಿನರಾಜ ನಾಗರಾಜು, ಅರಳೀಕೆರೆ ಪ್ರಕಾಶಣ್ಣ, ಪಾತ್ರೆ ಸತೀಶ್, ಸಜ್ಜಾದ್, ದಾಸಪ್ಪ, ಸಿದ್ಧರಾಮಣ್ಣ, ಸೀಗೇಬಾಗಿ ಲೋಕೇಶ್, ಬರಕನಹಾಲ್ ರೈತ ಸಂಘದ ರಾಕೇಶ್, ಚರಣ್, ಚಂದ್ರಪ್ರಕಾಶ್, ಅಶೋಕ್, ರಘುಕುಮಾರ್, ಆನಂದ್, ಸುಮಂತ್, ಪರಮೇಶ್, ಶೇಖರಣ್ಣ ಮತ್ತಿತರರು ಉಪಸ್ಥಿತರಿದ್ದರು.