ಎಲ್ಲಾ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷದ ಜೊತೆ ಇಲ್ಲ: ಸಂಸದೆ ಶೋಭಾ ಕರಂದ್ಲಾಜೆ
ಮೈಸೂರು,ಫೆ.11: ಕಾಂಗ್ರೆಸ್ ಪಕ್ಷದವರು ಸಾಮಾನ್ಯ ಅಲ್ಪಸಂಖ್ಯಾತರನ್ನು ಕಡೆಗಣನೆ ಮಾಡಿ ಎಸ್ಡಿಪಿಐ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜೊತೆ ಗುರುತಿಸಿಕೊಂಡಿರುವ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿದ್ದು, ಎಲ್ಲಾ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷದ ಜೊತೆ ಇಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ನಗರದ ಕ್ಯಾತಮಾರನಹಳ್ಳಿಯ ಸ್ಲಂನಲ್ಲಿ ವಾಸ್ತವ್ಯ ಮಾಡಿ ರವಿವಾರ ಬೆಳಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಹುಲ್ಗಾಂಧಿಗೆ ಚುನಾವಣೆ ಸಮೀಪ ಬಂದಾಗ ದೇವಾಲಯಗಳು ನೆನಪು ಆಗುತ್ತವೆ. ಆದರೆ ಅದಕ್ಕೂ ಮುನ್ನ ವಿದೇಶಗಳು ನೆನಪಾಗುತ್ತವೆ. ಕಾಂಗ್ರೆಸ್ಸಿನ ನಕಲಿ ಗಾಂಧಿ ರಾಹುಲ್ ಎಂದು ಕಿಡಿಕಾರಿದರು.
ಕ್ಯಾತಮಾರನಹಳ್ಳಿಯ ಕೊಳೆಗೇರಿ ಪ್ರದೇಶದಲ್ಲಿ ವಾಸ್ತವ್ಯ ಮಾಡಿದ್ದು ಸಂತಸವಾಗಿದೆ. ಆತಿಥ್ಯ ಚೆನ್ನಾಗಿ ಕೊಟ್ಟಿದ್ದಾರೆ. ಎಲ್ಲರೂ ಬಂದು ನನ್ನನ್ನು ಮಾತನಾಡಿಸಿದರು. ಇಲ್ಲಿ ವಾಸ್ತವ್ಯ ಹೂಡಿದ್ದು ಸಾಕಷ್ಟು ಖುಷಿಯಾಗಿದೆ. ತಿಂಗಳಿಗೆ ಒಮ್ಮೆಯಾದರು ಈ ರೀತಿ ವಾಸ್ತವ್ಯ ಮಾಡಬೇಕು. ವಾಸ್ತವ್ಯ ಹೂಡುವುದರಿಂದ ಅಭಿವೃದ್ಧಿಗೆ ಪೂರಕವಾಗಲಿದೆ. ನಾವು ರಾಜಕೀಯ ಡ್ರಾಮ ಮಾಡುತ್ತಿಲ್ಲ ಎಂದು ಹೇಳಿದರು.